ಮುಂಬೈ: ದೆಹಲಿ ಜೆಎನ್ಯುದಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಮುಂಬೈನ ಗೇಟ್ ವೇ ಬಳಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ Free Kashmir ( ಸ್ವತಂತ್ರ ಕಾಶ್ಮೀರ) ಎಂಬ ಫಲಕ ಹಿಡಿದಿದ್ದ ಮಹಿಳೆ ಫೇಸ್ಬುಕ್ನಲ್ಲಿ ಕ್ಷಮೆ ಕೋರಿದ್ದಾಳೆ.
ಮೆಹಕ್ ಮಿರ್ಜಾ ಪ್ರಭು ಎಂಬ ಮಹಿಳೆ ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಪ್ರತಿಭಟನೆ ಸ್ಥಳದಲ್ಲಿ ಬಿದ್ದಿದ್ದ ಫಲಕವನ್ನು ಎತ್ತಿಕೊಂಡೆ ಎಂದು ತಿಳಿಸಿದ್ದಾಳೆ.
ಜೆಎನ್ಯುನಲ್ಲಿ ನಡೆದ ಹಿಂಸಾಚಾರ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ Free Kashmir ( ಸ್ವತಂತ್ರ ಕಾಶ್ಮೀರ) ಎಂಬ ಫಲಕ ಹಿಡಿದಿದ್ದ ಮೆಹಕ್ ಮಿರ್ಜಾ ಪ್ರಭು ಮಂಗಳವಾರ ಆಕೆ ಈ ಬಗ್ಗೆ ವಿವರ ನೀಡಿ ಮತ್ತು ಕ್ಷಮೆ ಕೋರಿದ್ದಾಳೆ.
ಫೇಸ್ಬುಕ್ನಲ್ಲಿ ಮೇಹಕ್ ಹಂಚಿಕೊಂಡ ಮೂರು ನಿಮಿಷದ ವಿಡಿಯೋದಲ್ಲಿ, ನಾವು ಫಲಕ ಹಿಡಿಯುವುದು ನಮ್ಮ ಭಾವವನ್ನು ವ್ಯಕ್ತಪಡಿಸಲು. ಇಂಟರ್ನೆಟ್ ಸ್ಥಗಿತದ ವಿರುದ್ಧ ಕಾಶ್ಮೀರಾದ ಜನರು ಧ್ವನಿ ಎತ್ತಿದ್ದರು. ನಾನು ಅವರ ಧ್ವನಿಯಾಗಿದ್ದೆ ಎಂದಿದ್ದಾಳೆ.
ಪ್ರತಿಭಟನೆ ಸ್ಥಳದಲ್ಲಿ ಹಲವು ನಾಮ ಫಲಕಗಳನ್ನು ಬರೆಯಲಾಗುತ್ತಿತ್ತು. ಅದರಲ್ಲಿ ಫ್ರೀ ಕಾಶ್ಮೀರಾ ಎನ್ನುವುದು ಒಂದು. ಅದನ್ನು ನಾನು ತೆಗೆದುಕೊಂಡೆ. ನಾನು ಕಾಶ್ಮೀರಿಯಲ್ಲ. ನಾನು ಮಹಾರಾಷ್ಟ್ರದವಳು, ನನ್ನ ಸರ್ನೇಮ್ ಪ್ರಭು, ನಾನು ಮುಂಬೈನಲ್ಲೇ ಹುಟ್ಟಿ ಬೆಳೆದಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ನಾನು ಅಲ್ಲಿದ್ದಾಗ ಕೈಯಲ್ಲಿ ಗುಲಾಬಿ ಹೂ ಹಿಡಿದುಕೊಂಡಿದ್ದೆ. ನಮ್ಮೆಲ್ಲರಲ್ಲಿ ಶಾಂತಿ ನೆಲೆಸಲಿ ಎಂಬುದು ನನ್ನ ಉದ್ದೇಶವಾಗಿತ್ತು. ಆದ್ದರಿಂದ ನಾನು ಆ ಫಲಕ ಎತ್ತಿಕೊಂಡೆ. ಇದರಿಂದ ಹೇಗೆ ಹೊರಬರುವುದು ನನಗೆ ತಿಳಿಯುತ್ತಿಲ್ಲ. ನಾನು ಆ ಗ್ಯಾಂಗ್ನ ಸದಸ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾಳೆ.
ಈ ಪ್ರಕರಣ ರಾಜಕೀಯವಾಗಿ ವಾದ- ವಿವಾದಕ್ಕೂ ಕಾರಣವಾಗಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಾಗ್ದಾಳಿ ನಡೆಸಿದ್ದಾರೆ. ಮುಂಬೈನಲ್ಲಿ ಇಂತಹ ಪ್ರತ್ಯೇಕತಾವಾದಿಗಳನ್ನು ಹೇಗೇ ಸಹಿಸುತ್ತೀರಿ? ಇಂತಹ ದೇಶ ವಿರೋಧಿಗಳು ನಿಮ್ಮ ಮೂಗಿನ ಕೆಳಗೆ ಇದ್ದಾರೆ ಎಂದು ಟ್ವೀಟರ್ನಲ್ಲಿ ಫಡ್ನವಿಸ್ ತಿವಿದಿದ್ದಾರೆ.
ಗೃಹ ಸಚಿವ ಅನಿಲ್ ದೇಶ್ಮುಖ, ಈ ಬಗ್ಗೆ ಮಹಿಳೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)