ಮುಧೋಳ: ರನ್ನ ಉತ್ಸವದ ಹೆಸರಿನಲ್ಲಿ ನಗರದ ವರ್ತಕರು ಹಾಗೂ ಜನಸಾಮಾನ್ಯರಿಂದ ವಂತಿಗೆ ಸ್ವೀಕರಿಸಲಾಗುತ್ತಿದೆ ಎಂಬ ಸುದ್ದಿ ಪ್ರಕಟವಾಗಿದ್ದು, ಸಾರ್ವಜನಿಕರಿಂದಲೂ ದೂರುಗಳು ಬಂದಿವೆ. ಕೂಡಲೇ ವಂತಿಗೆ ಸಂಗ್ರಹ ಕೈಬಿಡಬೇಕು ಎಂದು ಬಿಜೆಪಿ ಹಾಲಿ ಸದಸ್ಯ, ಮಾಜಿ ಅಧ್ಯಕ್ಷ ಗುರುಪಾದ ಕುಳಲಿ ಒತ್ತಾಯಿಸಿದರು.

ನಗರಸಭೆ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ರೀತಿ ವಂತಿಗೆ ಸಂಗ್ರಹದಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತದೆ. ಸರ್ಕಾರಿ ಉತ್ಸವವನ್ನು ಸರ್ಕಾರದ ಹಣದಲ್ಲಿಯೇ ನಿರ್ವಹಿಸುವುದು ಸೂಕ್ತ. ಉದ್ಯಮಿಗಳು ಹಾಗೂ ಸ್ವಯಂ ಪ್ರೇರಿತರಾಗಿ ಧನಸಹಾಯ ಮಾಡುವವರಿಂದ ಮಾತ್ರ ಹಣ ಪಡೆದು ಉತ್ಸವಕ್ಕೆ ಉಪಯೋಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಕ್ರಿಯಿಸಿದ ಪೌರಾಯುಕ್ತ ಗೋಪಾಲ ಕಾಸೆ, ಬಲವಂತವಾಗಿ ಯಾರ ಬಳಿಯೂ ಸಂಪನ್ಮೂಲ ಸಂಗ್ರಹ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ರನ್ನ ವೈಭವ ಆಚರಣೆಗೆ ಒಂದು ತಿಂಗಳ ಗೌರವಧನ ನೀಡುಲು ಎಲ್ಲ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡರು. ಇದು ಉತ್ಸವಕ್ಕೆ ನಮ್ಮ ಕಿರುಕಾಣಿಕೆ ಎಂದು ಅಧ್ಯಕ್ಷೆ ಸುನಂದಾ ತೇಲಿ ಹೇಳಿದರು.
ರನ್ನ ವೈಭವಕ್ಕಾಗಿ ರಚಿಸಿರುವ 27 ಸಮಿತಿಗಳಲ್ಲಿ ಅರ್ಹರಿಗೆ ಆದ್ಯತೆ ನೀಡಬೇಕು ಎಂದು ಮಂಜುನಾಥ ಮಾನೆ ಹೇಳಿದರು. ಈ ಕುರಿತು ಚರ್ಚಿಸಲು ಎಸಿ ಅವರೊಂದಿಗೆ ಸಭೆ ಆಯೋಜಿಸಲಾಗುವುದು ಎಂದು ಪೌರಾಯುಕ್ತರು ಸಮಜಾಯಿಷಿ ನೀಡಿದರು.
ತ್ಯಾಜ್ಯ ನಿರ್ವಹಣೆ ಘಟಕದ ಕುರಿತು, ಅಕ್ರಮ-ಸಕ್ರಮ ಯೋಜನೆ, ಮಂಗಗಳ ಹಾವಳಿ ಹಾಗೂ ಕೆರೆ ಒತ್ತುವರಿ ಕುರಿತು ಸದಸ್ಯರು ಪ್ರಶ್ನಿಸಿದರು. ಪೌರಾಯುಕರು ಸೂಕ್ತ ಕ್ರಮದ ಭರವಸೆ ನೀಡಿದರು.
ಪ್ರತಿಧ್ವನಿಸಿದ ವಿಜಯವಾಣಿ ವರದಿ: ಬೀದಿ ನಾಯಿಗಳ ಹಾವಳಿ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ ಎಂದು ಕುಮಾರ ಪಮ್ಮಾರ ದೂರಿದರು. ಬಿದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಮುಂದಾಗುವುದಾಗಿ ಪೌರಾಯುಕ್ತರು ಉತ್ತರಿಸಿದರು.