ಬೆಂಗಳೂರು: ರಾಜ್ಯದ ಸಲೂನ್ ಹಾಗೂ ಕಟಿಂಗ್ ಶಾಪ್ಗಳಲ್ಲಿ ಬಾಂಗ್ಲಾದೇಶಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ರಮವಾಗಿ ನೆಲೆಸಿ ಕ್ಷೌರಿಕರ ವೃತ್ತಿಯಲ್ಲಿ ತೊಡಗಿಕೊಂಡಿರುವಂತವರನ್ನು ಹೊರ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸವಿತಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಟಿಟಿಡಿ ಸದಸ್ಯ ಎಸ್. ನರೇಶ್ ಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಸವಿತಾ ಸಮುದಾಯದ ಮೂಲ ವೃತ್ತಿಭಾಂದವರು, ಕ್ಷೌರಿಕ ವೃತ್ತಿಯಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಅಂಶವಾಗಿದೆ. ಬಹುತೇಕ ಜನರು ತಮ್ಮ ಸಲೂನ್ ಹಾಗೂ ಕಟಿಂಗ್ ಶಾಪ್ಗಳಲ್ಲಿ ಉತ್ತರ ಭಾರತೀಯರೆಂದು ಬಿಂಬಿಸಿಕೊಳ್ಳುತ್ತಿರುವ ಬಾಂಗ್ಲಾದೇಶಿಗರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಇದರಿಂದ ರಾಷ್ಟ್ರದ ಭದ್ರತೆಗೆ ತೊಂದರೆಯಾಗುವ ಸಂಭವವಿದೆ. ಅಲ್ಲದೇ, ನಮ್ಮ ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಾಲಕ್ರಮೇಣ ಕಡಿಮೆಯಾಗುವ ಆತಂಕ ಎದುರಾಗಿದೆ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಧರ್ಮಾಧಾರಿತವಾಗಿ ಕ್ಷೌರಿಕರನ್ನು ವಿಂಗಡಿಸಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಎಲ್ಲಾ ಸಮುದಾಯ ಹಾಗೂ ಧರ್ಮದವರಿಗೂ ಸವಿತಾ ಸಮುದಾಯದ ಜನರೇ ಕ್ಷೌರ ಮಾಡುತ್ತಿದ್ದರು. ಆದರೆ, ಕೆಲವು ಪ್ರದೇಶಗಳಲ್ಲಿ ಆಯಾ ಸಮುದಾಯದ್ದೇ ಆದಂತಹ ಜನರಿಗೆ ಆದ್ಯತೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ನಮ್ಮ ಸವಿತಾ ಸಮುದಾಯದ ಮೂಲ ವೃತ್ತಿ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುವಂತೆ ಅವಕಾಶ ನೀಡುವುದು, ಹಾಗೇಯೇ ಅಗತ್ಯ ಅನುಮತಿ ಇಲ್ಲದೇ ನಮ್ಮ ವೃತ್ತಿಯಲ್ಲಿ ತೊಡಗಿಕೊಂಡಿರುವ ಬಾಂಗ್ಲಾದೇಶಿಗರನ್ನು ಹೊರ ಹಾಕುವುದು ಇದರ ಉದ್ದೇಶವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ಸವಿತಾ ಸಮುದಾಯದ ಕೌಶಲ್ಯ ವೃದ್ದಿಗೆ ಡೋಲು ನಾದ ಸ್ವರದ ತರಬೇತಿ ಕಾರ್ಯಕ್ರಮ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಸಮುದಾಯದ ಯುವ ಪೀಳಿಗೆ ಸವಿತಾ ಸಮುದಾಯದ ವೃತ್ತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇದು ಬಹಳಷ್ಟು ಸಹಕಾರಿಯಾಗಿರಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನಿಗಳ ಜತೆಯಲ್ಲಿಯೇ, ಬಾಂಗ್ಲಾದೇಶಿಗರನ್ನೂ ಹೊರ ಹಾಕಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವರನ್ನು ನರೇಶ್ ಕುಮಾರ್ ಆಗ್ರಹಿಸಿದ್ದಾರೆ.
