ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರೊ.ಎಸ್.ಮುರಳೀಧರ್ ಸಲಹೆ
ಶಿಡ್ಲಘಟ್ಟ: ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬುದು ಈಗ ಬಹುತೇಕರ ಕನಸು. ಆದ್ರೆ ಉದ್ಯಮ ಪ್ರಾರಂಭಿಸೋದು ಅಷ್ಟು ಸುಲಭದ ಕೆಲಸವಂತೂ ಅಲ್ಲ. ಕಠಿಣ ಪರಿಶ್ರಮ, ತ್ಯಾಗ ಹಾಗೂ ದೃಢಸಂಕಲ್ಪವಿದ್ದರೆ ಮಾತ್ರ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು ಎಂದು ಜಿಎಫ್ಜಿಸಿ ಕೋಲಾರದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಮುರಳೀಧರ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾಮರ್ಸ್ ನೆಕ್ಸಸ್-2025 ಮತ್ತು ಅಂತರಕಾಲೇಜು ಕಾಮರ್ಸ್ ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯಮ ಪ್ರಾರಂಭಿಸಿದ ತಕ್ಷಣ ಯಶಸ್ಸು ಸಿಗುವುದಿಲ್ಲ. ಅದಕ್ಕೆ ಸಾಕಷ್ಟು ಸಿದ್ಧತೆ ಹಾಗೂ ತಾಳ್ಮೆಯ ಅಗತ್ಯವಿದೆ. ಯಶಸ್ವಿ ಉದ್ಯಮಶೀಲತೆಗೆ ನಿರಂತರ ಕಲಿಕೆ, ಹೊಸದನ್ನು ಕಲಿತುಕೊಳ್ಳುವ ಹಾಗೂ ಅದಕ್ಕೆ ಹೊಂದಿಕೊಳ್ಳುವ, ನಿರಂತರವಾಗಿ ಪರಿಶ್ರಮಪಡುವುದು ಅವಶ್ಯ. ವ್ಯವಹಾರ ಪ್ರಾರಂಭಿಸುವ ಮೊದಲು ಕೆಲ ಅಗತ್ಯ ಅಂಶಗಳನ್ನು ಪರಿಗಣಿಸಬೇಕು. ಮಾರುಕಟ್ಟೆ ಸಂಶೋಧನೆಯಿಂದ ಹಿಡಿದು ಅಪಾಯದ ಮೌಲ್ಯಮಾಪನದವರೆಗೆ ಬಲವಾದ ವ್ಯಾಪಾರ ಅಡಿಪಾಯ ಹಾಕಿಕೊಂಡರೆ ಯಶಸ್ಸು ಸಾಧಿಸಬಹುದು. ಮಾರುಕಟ್ಟೆ ಸಂಶೋಧನೆ, ವ್ಯಾಪಾರ ಯೋಜನೆ, ಹಣಕಾಸಿನ ವಿಶ್ಲೇಷಣೆ, ನಿಯಮ ಹಾಗೂ ಕಾನೂನು ಪರಿಗಣನೆ, ಮಾರ್ಕೆಟಿಂಗ್ ತಂತ್ರಗಳು, ಸವಾಲುಗಳ ಮೌಲ್ಯಮಾಪನ ಅನಿವಾರ್ಯ ಎಂದರು.
ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಅಂತರಕಾಲೇಜು ಕ್ವಿಜ್, ಹೊಸ ಉದ್ದಿಮೆಯ ಪರಿಕಲ್ಪನೆ, ಜಾಹೀರಾತು ಕಲ್ಪನೆ ಸೇರಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜಿ.ಮುರಳಿ ಆನಂದ್, ಪ್ರೊ.ಎ.ಸಾಯಿರಾಮ್, ಪ್ರಾಧ್ಯಾಪಕರಾದ ಬಿ.ರವಿಕುಮಾರ್, ಎಂ.ಸುನೀತಾ, ವಿ.ಆರ್.ಶಿವಶಂಕರಿ, ಪ್ರೊ.ಜಿ.ಬಿ.ವೆಂಕಟೇಶ್, ಶೋಭಾ, ಗೀತಾ ಸೇರಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಇದ್ದರು.
