ಪಾಂಡವಪುರ: ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಭಾರತದ ವಿರುದ್ಧ ವಿಶ್ವದ ಅನೇಕ ರಾಷ್ಟ್ರಗಳು ಆಕ್ರಮಣ ಮಾಡಿವೆಯಾದರೂ ನಾವು ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಿದ್ದೇವೆ ಎಂದು ಉಡುಪಿ ಸಾಲಿಗ್ರಾಮದ ಡಿವೈನ್ ಪಾರ್ಕ್ನ ಚತುರ ಸೇವಕ ಸುಬ್ರಹ್ಮಣ್ಯ ಹೇಳಿದರು.
ಸ್ವಾಮಿ ವಿವೇಕಾನಂದರ 162ನೇ ಜಯಂತಿ ಪ್ರಯುಕ್ತ ವಿವೇಕ ಜಾಗೃತ ಬಳಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಪಟ್ಟಣದ ಕಸಾಪ ಭವನದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಭಾರತದಂತಹ ಪುಣ್ಯಭೂಮಿಯಲ್ಲಿ ಲಕ್ಷಾಂತರ ಸಾಧು-ಸಂತರು, ಶರಣರು, ದಾಸರು, ಅನೇಕ ಸ್ವಾತಂತ್ರ್ಯ ವೀರರು ಜನಿಸಿದ್ದಾರೆ. ಇಂತಹ ರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ಸಂಸ್ಕಾರ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಅನ್ಯಾಯ, ಅನಾಚಾರ, ಭ್ರಷ್ಟಾಚಾರ ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮನೆಗಳಲ್ಲಿ ಮಕ್ಕಳಿಗೆ ಇತಿಹಾಸ ತಿಳಿಸಿಕೊಡಬೇಕು. ಸ್ವಾಮಿ ವಿವೇಕಾನಂದರು ಸದೃಢ, ಬಲಿಷ್ಠ ಭಾರತ ನಿರ್ಮಾಣ ಮಾಡಬೇಕೆಂಬ ಕನಸು ಕಂಡ ಮಹಾನ್ ಪುರುಷ. ಅದಕ್ಕಾಗಿ ದೇಶ ಸಂಚಾರ ಮಾಡಿ ಭಾರತೀಯರ ದೈನೀಯ ಸ್ಥಿತಿಯನ್ನು ಅರ್ಥಮಾಡಿಕೊಂಡು ಭಾರತವನ್ನು ಮೇಲೆತ್ತಲು ಪ್ರಯತ್ನಿಸಿದರು. ಇಂತಹವರ ಆದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.
ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಮಾತನಾಡಿ, ಸ್ವಾಮಿ ವಿವೇಕಾನಂದರು ಭವ್ಯ ಭಾರತ ನಿರ್ಮಾಣ ಮಾಡಲು ಕಬ್ಬಿಣದ ನರಗಳುಳ್ಳ, ಉಕ್ಕಿನ ಮಾಂಸ ಹೊಂದಿರುವ ಯುವಕರು ಬೇಕು ಎಂದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮೊಬೈಲ್ ಹಾವಳಿಗೆ ಸಿಲುಕಿ ಜೀವನ ನಾಶಮಾಡಿಕೊಳ್ಳುತ್ತಿದೆೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಡಿವೈನ್ಪಾರ್ಕ್ನ ದಕ್ಷ ಸೇವಕಿ ನಿರ್ಮಲಾ ತಿಮ್ಮೇಗೌಡ, ಸಂಘಟಕ ತಿಮ್ಮೇಗೌಡ, ನಿವೇದಿತ ವಾದಿರಾಜ್ ಇತರರು ಇದ್ದರು.