ಗುಂಡ್ಲುಪೇಟೆ: ಕಾಡಿನಿಂದ ಹೊರಬಂದು ರೈತರ ಜಮೀನುಗಳಿಗೆ ದಾಳಿ ಮಾಡುತ್ತಿದ್ದ ಆನೆಗಳ ಹಿಂಡನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಕಾಡಿಗಟ್ಟಿದೆ. ಇತ್ತೀಚೆಗೆ ಬಂಡೀಫುರ ಹುಲಿ ಯೋಜನೆಯ ಓಂಕಾರ್ ವಲಯದ ಅರಣ್ಯ ಪ್ರದೇಶದ ಕೆರೆಗಳಲ್ಲಿ ನೀರಿನ ಕೊರತೆಯಾಗುತ್ತಿರುವುದರಿಂದ ಆನೆಗಳು ಹೊರಬರುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಆನೆಗಳು ಹೊರಬರುವ ಸ್ಥಳಗಳಲ್ಲಿ ಅರಣ್ಯ ಸಿಬ್ಬಂದಿ ರಾತ್ರಿ ಗಸ್ತು ನಡೆಸುವುದರಿಂದ ಶನಿವಾರ ಬೆಳಗ್ಗೆ ಅರಣ್ಯ ಪ್ರದೇಶದಿಂದ ಹೊರಬಂದ ಆರು ಆನೆಗಳ ಹಿಂಡು, ಆಲತ್ತೂರು ಗ್ರಾಮದ ಜಮೀನುಗಳತ್ತ ದಾಳಿ ನಡೆಸಿದವು.
ಈ ಬಗ್ಗೆ ಗ್ರಾಮಸ್ಥರಿಂದ ವಿಷಯ ತಿಳಿದ ಅರಣ್ಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಪಟಾಕಿ ಸಿಡಿಸಿ ಆನೆಗಳು ಜಮೀನುಗಳತ್ತ ಬಾರದಂತೆ ತಡೆದರು. ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಜೆ.ರವೀಂದ್ರ, ಓಂಕಾರ್ ವಲಯದ ಆರ್ಎಫ್ಒ ಕೆ.ಪಿ.ಸತೀಶ್ ಮಾರ್ಗದರ್ಶನದಲ್ಲಿ ಮಧ್ಯಾಹ್ನದವರೆಗೂ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಿ ಆನೆಗಳನ್ನು ಯಶಸ್ವಿಯಾಗಿ ಕಾಡಿಗಟ್ಟಿದರು.