ಬಳ್ಳಾರಿ ; ಕೆಲ ವರ್ಷಗಳಿಂದ ನಗರದ ವಿವಿಧಡೆಗೆ ಸಂಚಾರಿಸಲು ಸಿಟಿ ಬಸ್ಗಳ ಕೊರತೆಯಿಂದ ಹೈರಣಾಗಿದ್ದ ಪ್ರಯಾಣಿಕರಿಗೆ ಕೆಲ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್ಗಳು ಸಂಚಾರಿಸಲಿವೆ.
ಕೇಂದ್ರ ಸರ್ಕಾರ ಪಿಎಂ – ಇ ಬಸ್ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳ ನಗರದಲ್ಲಿ ಎಲೆಕ್ಟ್ರಿಕ್ ಬಸ್ಗಳು ಸಂಚಾರಿಸಲಿವೆ. ಆದರಂತೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬಳ್ಳಾರಿ 50, ವಿಜಯಪುರ 50 ಹಾಗೂ ಕಲಬುರಗಿ 100 ಸೇರಿದಂತೆ ಒಟ್ಟು 200 ಎಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಲಾಗಿದೆ. ಇದರಿಂದ, ಕಳೆದ ಕೆಲ ವರ್ಷಗಳಿಂದ ನಗರದಲ್ಲಿ ಸೂಕ್ತ ಸಿಟಿ ಬಸ್ಗಳ ಸೌಲಭ್ಯವಿಲ್ಲದೆ ದುಬಾರಿ ಹಣ ವ್ಯಯಿಸಿ ಆಟೋಗಳಲ್ಲಿ ಸಂಚಾರಿಸುತ್ತಿದ್ದ ನಗರದ ನಿವಾಸಿಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರವು ಬಸ್ಗಳನ್ನು ಮಂಜೂರು ಮಾಡಲಾಗಿದ್ದು ಸದ್ಯ, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.
ಗ್ರಾಸ್ ಕಾಸ್ಟ್ ಕಾಂಟ್ರೆಕ್ಟ್ ( ಜಿಸಿಸಿ) : ಕೇಂದ್ರ ಸರ್ಕಾರವು ಗ್ರಾಸ್ ಕಾಸ್ಟ್ ಕಾಂಟ್ರೆಕ್ಟ್ ವ್ಯವಸ್ಥೆಯ ಮೂಲಕ ಎಲೆಕ್ಟ್ರಿಕ್ ಬಸ್ಗಳ ಸೌಲಭ್ಯ ಒದಗಿಸಲಾಗಿದೆ. ಅಂದರೆ, ರಾಜ್ಯದ ವಿವಿಧಡೆ ಸಂಚಾರಿಸುವ ಈ ಎಲೆಕ್ಟ್ರಿಕ್ ಬಸ್ಗಳಿಗೆ ಚಾಲಕರನ್ನು ಕೇಂದ್ರ ಸರ್ಕಾರವೇ ನೇಮಿಸಿ ವೇತನ ಕೂಡ ನೀಡಲಿದೆ. ರಾಜ್ಯ ಸರ್ಕಾರ ಈ ಎಲೆಕ್ಟ್ರಿಕ್ ಬಸ್ಗಳಿಗೆ ನಿರ್ವಾಹಕರನ್ನು ನೇಮಿಸಲಿದೆ. ಇದರಿಂದ, ಬಸ್ಗಳ ನಿರ್ವಹಣೆ ಹಾಗೂ ಚಾಲಕರ ವೇತನವನ್ನು ಕೇಂದ್ರವೇ ಭರಿಸಲಿದೆ. ಕೆಲ ತಿಂಗಳಲ್ಲಿ ಜಿಲ್ಲೆಗೆ ಆಗಮಿಸಲಿರುವ ಎಲೆಕ್ಟ್ರಿಕ್ ಬಸ್ಗಳಿಗೆ ಆಯಾ ಸಂಬಂಧಪಟ್ಟ ಘಟಕದಲ್ಲಿ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲು ಸೂಕ್ತ ವಿದ್ಯುತ್ ಸಂಪರ್ಕದ ಅವಶ್ಯಕತೆಯಿದೆ. ಆದ್ದರಿಂದ, ಎಲೆಕ್ಟ್ರಿಕ್ ಬಸ್ಗಳ ಮಂಜೂರಾದ ಪ್ರತಿಯೊಂದು ಜಿಲ್ಲೆಗಳಲ್ಲಿ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಚಾರ್ಜಿಂಗ್ ವ್ಯವಸ್ಥೆಗಾಗಿಯೇ ಪ್ರತ್ಯೇಕ ವಿದ್ಯುತ್ ಸಂಪರ್ಕ ಅಳವಡಿಸಬೇಕು. ಇದರಿಂದ, ಯಾವುದೇ ಬಸ್ಗಳಿಗೆ ಚಾರ್ಜಿಂಗ್ ಸಮಸ್ಯೆಯಾಗುವುದಿಲ್ಲ. ವಿದ್ಯುತ್ ಶುಲ್ಕವನ್ನು ರಾಜ್ಯ ಸರ್ಕಾರವೇ ವಿದ್ಯುತ್ ಇಲಾಖೆಗೆ ಪಾವತಿಸಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಹೊರವಲಯದ ನಗರಗಳಿಗೆ ಅನುಕೂಲ : ವರ್ಷದಿಂದ ವರ್ಷಕ್ಕೆ ನಗರದಲ್ಲಿ ವಾಸಿಸುವ ನಿವಾಸಿಗಳ ಸಂಖ್ಯೆ ಹೆಚ್ಚುತ್ತಿದ್ದು, ಹೊಸ ಬಡಾವಣೆ ಹಾಗೂ ಕಾಲನಿಗಳ ನಿರ್ಮಾಣಗೊಳ್ಳುತ್ತಿವೆ. ನಗರದ ಮಕ್ಕಳು ಶಾಲಾ ಹಾಗೂ ಕಾಲೇಜುಗಳಿಗೆ ತೆರಳಲು ಸೂಕ್ತ ಬಸ್ಗಳ ಕೊರತೆಯಿಂದ ಪಾಲಕರೇ ಬೈಕ್ಗಳಲ್ಲಿ ಬಿಟ್ಟು ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ನಗರದ ಹೊರವಲಯದಲ್ಲಿ ಬಹುತೇಕ ವಸತಿ ನಿಲಯಗಳು ಇರುವುದರಿಂದ ವಿದ್ಯಾರ್ಥಿಗಳು ವಸತಿ ನಿಲಯಗಳಿಂದ ಕಾಲೇಜುಗಳಿಗೆ ತೆರಳಲು ನಿತ್ಯವೂ ಎರಡ್ಮೂರು ಕಿ.ಮೀ. ನಡೆಯಬೇಕಾದ ಅನಿವಾರ್ಯತೆಯಿದೆ. ಸದ್ಯ, ಸಿಟಿ ಬಸ್ಗಳ ಅಭಾವದಿಂದ ಸೂಕ್ತ ಸಮಯಕ್ಕೆ ಬಸ್ಗಳ ಬಾರದೆ ತರಗತಿಗಳು ತಪ್ಪಿಸಿಕೊಳ್ಳುತ್ತಿದ್ದರು. ಆದರೆ, ಕೆಲವೇ ತಿಂಗಳಲ್ಲಿ ನಗರದಲ್ಲೇ ಐವತ್ತು ಎಲೆಕ್ಟ್ರಿಕ್ ಬಸ್ಗಳು ಸಂಚಾರಿಸುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಅನುಕೂಲವಾಗಲಿದೆ. ಇಲ್ಲಿನ ಹೊರವಲಯದ ನಗರದಲ್ಲಿ ನಿವಾಸಿಸುವ ಜನರಿಗೂ ಸಿಟಿ ಬಸ್ಗಳ ಸಂಚಾರದಿಂದ ಆಟೋಗಳಿಗೆ ವ್ಯಯಿಸಬೇಕಿದ್ದ ಹಣವೂ ಉಳಿಯಲಿದೆ.


ಕೋಟ್… ಕೇಂದ್ರದಿಂದ ಕಲ್ಯಾಣ ಕರ್ನಾಟದ ಬಳ್ಳಾರಿ ಸೇರಿ ಒಟ್ಟು 200 ಎಲೆಕ್ಟ್ರಿಕ್ ಬಸ್ಗಳು ಮಂಜೂರು ಆಗಿವೆ. ಸದ್ಯ, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ನಗರದ ಘಟಕದಲ್ಲಿ ಬಸ್ಗಳಿಗೆ ಚಾರ್ಜಿಂಗ್ ವ್ಯವಸ್ಥೆಗಾಗಿ ಜೆಸ್ಕಾಂಗೆ ಪ್ರಸ್ತಾವನೆ ಸಲ್ಲಿಸಿ ವಿದ್ಯುತ್ ಸಂಪರ್ಕ ಅಳವಡಿಸಿಕೊಳ್ಳಲಾಗುವುದು.
– ಇನಾಯತ್ ಬಾಗ್ಬಾನ್, ವಿಭಾಗೀಯ ನಿಯಂತ್ರಣಾಧಿಕಾರಿ, ಸಾರಿಗೆ ಸಂಸ್ಥೆ, ಬಳ್ಳಾರಿ.