ಕಿಕ್ಕೇರಿ: ಹೋಬಳಿಯ ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಫೆ.23ರಂದು ಚುನಾವಣೆ ನಿಗದಿಯಾಗಿತ್ತು. ಒಟ್ಟು 11 ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ, ಕಾಂಗ್ರೆಸ್ ಹಾಗೂ ಪ್ರತ್ಯೇಕವಾಗಿ ಸೇರಿ ಒಟ್ಟು 33 ಸದಸ್ಯರು ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ ಹಿರಿಯ ನಾಯಕ ಸಿ.ಎನ್. ಪುಟ್ಟಸ್ವಾಮಿಗೌಡ ಹಾಗೂ ಕೆಪಿಸಿಸಿ ಸದಸ್ಯ ಸುರೇಶ್ ನೇತೃತ್ವದಲ್ಲಿ ಮಾತುಕತೆ ನಡೆಸಿ ಎಲ್ಲ ಸದಸ್ಯರ ಮನವೊಲಿಸಿದರು. ಪರಿಣಾಮ ಸೋಮವಾರ 11 ನಿರ್ದೇಶಕರೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜೆಡಿಎಸ್, ಬಿಜೆಪಿ ಮೈತ್ರಿಯ ಬೆಂಬಲಿತ 7 ಸದಸ್ಯರನ್ನು, ಕಾಂಗ್ರೆಸ್ ಬೆಂಬಲಿತ 4 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಸಾಲಗಾರರ ಕ್ಷೇತ್ರದ ಸಾಮಾನ್ಯ ವಿಭಾಗದಿಂದ ಚಿಕ್ಕತರಹಳ್ಳಿ ಸಿ.ಆರ್. ಮಧು, ದೊಡ್ಡತರಹಳ್ಳಿ ಮಂಜುನಾಥ, ಅಂಚೆಬೀರನಹಳ್ಳಿ ನಂಜುಂಡೇಗೌಡ, ಬೋಳಮಾರನಹಳ್ಳಿ ಲಿಂಗರಾಜು, ಐಕನಹಳ್ಳಿ ಐ.ಡಿ.ಉದಯಶಂಕರ್(ಪ್ರವರ್ಗ ಬಿ), ಪ್ರವರ್ಗ ಎ ಒಂದು ಸ್ಥಾನಕ್ಕೆ ಕಡಹೆಮ್ಮಿಗೆ ತಿಮ್ಮೇಗೌಡ(ಪ್ರವರ್ಗ ಎ), ಜಿ.ಜೆ.ಸವಿತಾ(ಮಹಿಳಾ ಮೀಸಲು) ಆಯ್ಕೆಯಾದರು.
ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಅಂಚೆಬೀರನಹಳ್ಳಿ ಲೋಕೇಶ, ಐಕನಹಳ್ಳಿ ಐ.ಎಂ. ಮಂಜೇಗೌಡ(ಸಾಮಾನ್ಯ ವರ್ಗ), ಮಂಜುಳಮ್ಮ(ಮಹಿಳಾ ಮೀಸಲು), ದೇವಮ್ಮ(ಪರಿಶಿಷ್ಟ ಜಾತಿ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ನಿರ್ದೇಶಕರು ಗ್ರಾಮೀಣ ಪ್ರದೇಶದಲ್ಲಿರುವ ರೈತರ ಸಂಘವನ್ನು ಒಗ್ಗಟ್ಟಿನಿಂದ ಅಭಿವೃದ್ಧಿಪಡಿಸಿ, ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವುದಾಗಿ ಮುಖಂಡರಿಗೆ ಭರವಸೆ ನೀಡಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಕೆಪಿಸಿಸಿ ಸದಸ್ಯ ಸುರೇಶ್, ಕಿಕ್ಕೇರಿ ಕೆಪಿಎಸ್ ಎಸ್ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಬಿ.ಎಸ್.ಮಂಜುನಾಥ್, ದಾನಶೇಖರ್, ಶಿಶುಪಾಲ ಇದ್ದರು.