ಬೆಳಗಾವಿ: ನಾನು ಎಂಬ ಅಹಂ ಭಾವ ಅಳಿದರೆ ಸಮಾಜದಲ್ಲಿ ಸಂಘರ್ಷ ಕಡಿಮೆಯಾಗುತ್ತದೆ ಎಂದು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭೆಯಿಂದ ನಗರದ ನಾಗನೂರು ರುದ್ರಾಕ್ಷಿ ಮಠದ ಪ್ರಭುದೇವ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಸವಣ್ಣನವರು ನೀಡಿದ ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಯಾವುದೇ ರಾಷ್ಟ್ರ ಎಂದಿಗೂ ಬಡವಾಗುವುದಿಲ್ಲ. ಬದಲಿಗೆ ಅದು ಸದಾ ಸಂಪದ್ಭರಿತವಾಗುತ್ತದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರವಚನ ನೀಡಿದ ಕುಲವಳ್ಳಿ ಸುಕುಮಾರ ಯೋಗಾಶ್ರಮದ ಮಲ್ಲಿಕಾರ್ಜುನ ದೇವರು ಮಾತನಾಡಿ, ದೇಶದಲ್ಲಿ ಕೋಟ್ಯಂತರ ದೇವಾಲಯ, ಲಕ್ಷಾಂತರ ಧಾರ್ಮಿಕ ಮುಖಂಡರಿದ್ದರೂ ಸಮಾಜದಲ್ಲಿ ಕೊಲೆ, ಅನ್ಯಾಯ, ಅನಾಚಾರ ನಿಂತಿಲ್ಲ. ತಲೆಯಲ್ಲಿ ಹೊಟ್ಟಾದರೆ ಶಾಂಪೂ ಬಳಸಿ ಸ್ವಚ್ಛಗೊಳಿಸಬಹುದು. ಬಟ್ಟೆ ಹೊಲಸಾದರೆ ಮಡಿವಾಳರಿಗೆ ನೀಡಬಹುದು. ಆದರೆ, ಮನಸ್ಸಿನ ಮೈಲಿಗೆ ತೊಳೆಯಬೇಕಾದರೆ ಶರಣರ, ಮಹಾತ್ಮರ ವಾಣಿಯನ್ನು ಆಲಿಸುತ್ತ ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಗಡಹಿಂಗ್ಲಜ ಜಡೆಸಿದ್ದೇಶ್ವರ ಬಿಲ್ವಾಶ್ರಮದ ಮಹಾಂತ ಸಿದ್ದೇಶ್ವರ ಸ್ವಾಮೀಜಿ, ಎತ್ತುಗಳನ್ನು ಪೂಜಿಸುವುದು ಬಸವ ಜಯಂತಿಯಲ್ಲ. ಬದಲಿಗೆ ಬಿದ್ದವರನ್ನು ಎತ್ತುವುದು ಬಸವ ಜಯಂತಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಬಸವ ಜಯಂತಿ ಸಂದರ್ಭದಲ್ಲಿ ರೇಣುಕಾ ಚಾರ್ಯ ಜಯಂತಿ ಆಚರಿಸುವಂತೆ ವೀರಶೈವ ಲಿಂಗಾಯತ ಮಹಾಸಭೆ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೊರಡಿಸಿದ್ದ ಆದೇಶವನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ರದ್ದುಪಡಿಸಿದ್ದಾರೆ ಎಂದರು.
ಅನುಶರಣ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷೆ ಅನ್ನಪೂರ್ಣ ಅಗಡಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಡಾ. ರೋಹಿಣಿ ಕರ್ಜಗಿಮಠ ಹಾಗೂ ನಯನಾ ಗಿರಿಗೌಡರ ಪ್ರಾರ್ಥಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ನಗರ ಘಟಕದ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಸ್ವಾಗತಿಸಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಧ್ಯಾ ಪಕ ಎ.ಕೆ.ಪಾಟೀಲ, ಮಂಜುನಾಥ ಶರಣಪ್ಪನವರ ನಿರೂಪಿಸಿದರು. ಶರಣೆ ರತ್ನಾ ಬೆಣಚಿನಮರಡಿ ವಂದಿಸಿದರು.