ಬೆಂಗಳೂರು: ರಾಜಧಾನಿಯಲ್ಲಿ ತ್ಯಾಜ್ಯ ವಿಲೇವಾರಿ ಹಳಿ ತಪ್ಪಿರುವಾಗಲೇ, ದೀಪಾವಳಿ ಹಬ್ಬದ ವೇಳೆ ಉತ್ಪತ್ತಿ ಆಗಿರುವ ಹೆಚ್ಚುವರಿ ಕಸವನ್ನು ಪಾಲಿಕೆಯು ಸಾಗಿಸದ ಕಾರಣ ನಗರದೆಲ್ಲೆಡೆ ರಸ್ತೆಬದಿ ತ್ಯಾಜ್ಯ ರಾಶಿ ಕಂಡುಬಂದಿದೆ.
ಹಬ್ಬದ ಕಾರಣ ನಗರದ ಬಹುತೇಕ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಸಂಕೀರ್ಣ, ವ್ಯಾಪಾರ ಕೇಂದ್ರಗಳ ಬಳಿ ವಾಡಿಕೆಗಿಂತ ಹೆಚ್ಚು ಕಸ ಉತ್ಪತ್ತಿಯಾಗಿದೆ. ಇಲ್ಲೆಲ್ಲ ತ್ಯಾಜ್ಯವನ್ನು ಪೂರ್ಣವಾಗಿ ಕೊಂಡೊಯ್ಯದ ಕಾರಣ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಹಲವು ಬಡಾವಣೆಗಳಲ್ಲಿ ರಸ್ತೆಬದಿಯೇ ತ್ಯಾಜ್ಯ ಸಂಗ್ರಹವಾಗಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಪಾಲಿಕೆಯು ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳದಿರುವುದು ಕಸ ವಿಲೇವಾರಿ ಸಮಸ್ಯೆಗೆ ಸಿಲುಕಿದೆ.
ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆ ಕೆಳಗಿನ ರಸ್ತೆಯ ಎರಡೂ ಬದಿ ಬಾಳೇಕಂಬಗಳ ರಾಶಿ ಬಿದ್ದಿವೆ. ವರ್ತಕರು ಹಬ್ಬಕ್ಕೆ ತಂದಿದ್ದ ಬಾಳೇಕಂಬ, ಮಾವು ಹಾಗೂ ಹೂವು ಮಾರಾಟವಾಗದ ಕಾರಣ ಅವುಗಳನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ. ಕೆಲ ರೈತರು ಕೂಡ ವಾಹನಗಳಲ್ಲಿ ತಂದಿದ್ದ ಬಾಳೇಕಂಬಗಳನ್ನು ಮಾರಾಟಮಾಡಲಾಗದೆ ಅಲ್ಲಿಯೆ ಬಿಟ್ಟು ಊರಿಗೆ ವಾಪಸಾಗಿದ್ದಾರೆ. ಇವು ರಸ್ತೆಬದಿ, ಫುಟ್ಪಾತ್ ಮೇಲೆ ಹರಡಿಕೊಂಡಿದ್ದು, ಪಾದಚಾರಿಗಳ ಓಡಾಟಕ್ಕೆ ಅಡಚಣೆ ಉಂಟಾಗಿದೆ. ಇದೇ ರೀತಿ ಹೊಂಬೇಗೌಡನಗರ, ಮಡಿವಾಳ, ಸಾರಕ್ಕಿ, ಬನಶಂಕರಿ, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಮಾಗಡಿ ರಸ್ತೆ, ಯಲಹಂಕ, ಕೆ.ಆರ್.ಪುರದಲ್ಲಿ ಕಸದ ರಾಶಿ ಕಾಣಬಹುದಾಗಿದೆ. ಶನಿವಾರ ಬಿದ್ದ ಮಳೆಯಿಂದ ಕೆಲವೆಡೆ ತ್ಯಾಜ್ಯವು ಕೊಳೆಯಲಾರಂಭಿಸಿದೆ.
ಪಾಲನೆಯಾಗದ ಮಾರ್ಗಸೂಚಿ:
ವಿಜಯದಶಮಿ ಹಾಗೂ ದೀಪಾವಳಿ ಹಬ್ಬಗಳಂದು ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗುವ ಹಿನ್ನೆಲೆ ಆಚರಣೆ ಮುಗಿದ ಒಂದೆರಡು ದಿನಗಳಲ್ಲಿ ಕಸವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಮುಖ್ಯ ಆಯುಕ್ತರು ಮಾರ್ಗಸೂಚಿ ಸಿದ್ಧಪಡಿಸಿ ಕಾರ್ಯಾನುಷ್ಠಾನಕ್ಕೆ ತರಲು ಸಂಬಂಧಿಸಿದ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಗುರುವಾರದಿಂದ (ಅ.31) ಹಬ್ಬಕ್ಕೆ 3 ದಿನ ರಜೆ ಇದ್ದು, ಭಾನುವಾರವೂ ವಾರದ ಬಿಡುವು ಇದ್ದ ಕಾರಣ ಕೆಲ ಅಧಿಕಾರಿ, ಸಿಬ್ಬಂದಿ ರಜೆ ಹಾಕಿ ತವರಿಗೆ ತೆರಳಿದ್ದರು. ಪೌರಕಾರ್ಮಿಕರಲ್ಲೂ ಹಲವು ಮಂಡಿ ಹಬ್ಬಕ್ಕೆ ರಜೆ ಹಾಕಿದ್ದರು. ಹೀಗಾಗಿ ಬ್ಲಾಕ್ಸ್ಪಾಟ್ (ಕಸ ಸುರಿಯುವ ಸ್ಥಳ) ಬಳಿ ಹೆಚ್ಚುವರಿಯಾಗಿ ಉತ್ಪತ್ತಿಯಾದ ಕಸ ವಿಲೇವಾರಿ ಆಗಲಿಲ್ಲ.
ಸಹಜಸ್ಥಿತಿಗೆ ಮರಳದ ಕಸ ವಿಲೇವಾರಿ:
ಕಳೆದೊಂದು ತಿಂಗಳಿಂದ ನಗರದಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಿದೆ. ಹಳೆಯ ಪದ್ಧತಿ ಬದಲು ಹೊಸ ವ್ಯವಸ್ಥೆ ಜಾರಿಗೆ ಪ್ಯಾಕೇಜ್ ಘೋಷಣೆ ಮಾಡಿರುವುದಕ್ಕೆ ಗುತ್ತಿಗೆದಾರರು ಅಸಮಾಧಾನ ಹೊರಹಾಕಿದ್ದಾರೆ. ಇದು ಕಸ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ಕ್ವಾರಿಗಳಿಗೆ ಸಾಗಿಸುವ ಕಾಂಪ್ಯಾಕ್ಟರ್ಗಳ ಮೂಲಕ ತ್ಯಾಜ್ಯ ಸಾಗಣೆ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದಾಗಿ ಹಲವು ವಾರ್ಡ್ಗಳಲ್ಲಿ, ಅದರಲ್ಲೂ ಹೊಸ ವಲಯಗಳಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇದಕ್ಕೆ ಪಾಲಿಕೆ ಆಡಳಿತಸ್ಥರು ಪರಿಹಾರ ಕಂಡುಕೊಳ್ಳದ ಕಾರಣ ತ್ಯಾಜ್ಯ ವಿಲೇವಾರಿ ವ್ಯಾಜ್ಯವಾಗಿ ಪರಿಣಮಿಸಿದೆ.