ಶಿಕ್ಷಣದಲ್ಲಿ ಇರಬೇಕು ಮನುಷ್ಯತ್ವ ಪಾಠ

blank

ತೀರ್ಥಹಳ್ಳಿ: ಪ್ರಸಕ್ತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಹಿಂಸಾ ಪ್ರವೃತ್ತಿಗಳಲ್ಲಿ ತೊಡಗುವ ಮತ್ತು ತೀರಾ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ ಎಂದು 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧಕ್ಷೆ ಕೆ.ಆರ್.ಉಮಾದೇವಿ ಉರಾಳ್ ಹೇಳಿದರು.
ಪಟ್ಟಣದ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸೋಮವಾರ ಆರಂಭಗೊಂಡ ಎರಡು ದಿನಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಲ್ಲಿ ನೈತಿಕತೆ ಧೂಳಿಪಟವಾಗಿದೆ. ಈ ಕೊರತೆ ತುಂಬಿಸುವಲ್ಲಿ ಅಧ್ಯಾಪಕರು ಗಮನ ಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳಿಗೆ ನೀಡುವ ಶಿಕ್ಷಣದಲ್ಲಿ ಮನುಷ್ಯತ್ವವನ್ನು ನಿರೂಪಿಸಿ, ಚಾರಿತ್ರ್ಯ ನಿರ್ಮಿಸುವ ಶಿಕ್ಷಣದ ಅನಿವಾರ್ಯತೆ ಇದೆ. ಶಿಕ್ಷಣದಲ್ಲಿ ಅಂಕ ಪ್ರಾಧಾನ್ಯ, ಅಪ್ರಸ್ತುತ ಅಂಶಗಳ ಪಠ್ಯಗಳು, ಬದುಕು ರೂಪಿಸದ ಶಿಕ್ಷಣ, ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ಪ್ರಚೋದನೆ ಮತ್ತು ಅನುಕರಣೀಯ ಮಾದರಿ ವ್ಯಕ್ತಿಗಳ ಅಭಾವ ಇರುವುದು ದುರದೃಷ್ಟಕರ ಎಂದರು.
ಅತ್ಯಾಚಾರ, ದೌರ್ಜನ್ಯಗಳಿಗೆ ಶಾಲಾ ಮಕ್ಕಳು ಬಲಿಯಾಗುತ್ತಿರುವುದು ದುರಂತ. ಈ ಕುರಿತು ಪಾಲಕರು ಗಮನಹರಿಸಬೇಕು. ಲಿಂಗ ಸಮಾನತೆಯ ಅನುಷ್ಠಾನ ಮೊದಲ ಅಗತ್ಯ. ಹೆಣ್ಣು ಮಕ್ಕಳಿಗೆ ಹೊಣೆಗಾರಿಕೆಯಿಂದ ನಡೆಯುವ ವಿವೇಚನೆಯನ್ನೂ ಮೂಡಿಸಬೇಕು. ವಿದ್ಯುನ್ಮಾನ ಮಾಧ್ಯಮಗಳಿಂದ ಬೆರಳ ತುದಿಯಲ್ಲಿ ಯಾವುದೇ ಮಾಹಿತಿ ಪಡೆಯಲು ಸಾಧ್ಯವಿರುವಾಗ ಗುರು-ಶಿಷ್ಯರ ನಡುವಿನ ಸಂಬಂಧ ಬೇರೊಂದು ಆಯಾಮದಲ್ಲಿ ರೂಪುಗೊಳ್ಳಬೇಕು. ಪಠ್ಯವನ್ನು ಮೀರಿದ ಅರಿವು, ಮಾನವೀಯತೆ ಬೆಸೆಯುವ ಬಾಂಧವ್ಯ ಇಂದಿನ ಅಗತ್ಯ ಎಂದು ತಿಳಿಸಿದರು.
ಮಧ್ಯಮ ವರ್ಗ ಇಂದು ಇಂಗ್ಲಿಷ್ ಭಾಷೆಯ ಹಿಂದೆ ಬಿದ್ದಿದೆ. ಹೀಗಾಗಿ ಭಾಷೆ ಮತ್ತು ಶಿಕ್ಷಣ ವ್ಯಾಪಾರಿ ಸರಕಾಗಿದೆ. ಇಲ್ಲಿ ಉಪಯುಕ್ತತತೆ ಮಾನದಂಡವಾಗಿರುವ ಕಾರಣ ಕನ್ನಡ ಅನ್ನದ ಭಾಷೆಯಾಗಿಲ್ಲ ಎಂಬುದಕ್ಕೆ ನಾವುಗಳೇ ಕಾರಣರಾಗಿದ್ದೇವೆ. ಸಾಹಿತ್ಯ ಕೃತಿಗಳ ಓದು, ನೇರವಾಗಿ ಸಂವೇದನೆ ಮೀಟುವ ಜತೆಗೆ ಓದು ಚಿರಂತನ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶ್ರೇಷ್ಠವಾದ ಕತಿಗಳನ್ನು ಹಲವು ಬಾರಿ ಓದಿದಾಗಲೂ ಅದು ಹೊಸತೊಂದು ನೋಟವನ್ನು ದಕ್ಕಿಸಿಕೊಡುತ್ತದೆ ಎಂದು ಹೇಳಿದರು.
ನೈಸರ್ಗಿಕ ಸಂಪತ್ತನಿಂದ ಸಮೃದ್ಧವಾಗಿದ್ದ ಮಲೆನಾಡಿಗೆ ಅದರ ಪ್ರಕೃತಿ ಸಂಪತ್ತೇ ಮುಳುವಾಗಿದೆ. ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳಿಗೆ ಬೃಹತ್ ಪ್ರಮಾಣದ ಅರಣ್ಯ ಬಲಿಯಾಗಿದೆ. ಅಳಿದುಳಿದ ಕಾಡುಗಳಲ್ಲಿ ನೈಸರ್ಗಿಕ ಮರಗಳಿಗೆ ಬದಲಾಗಿ ಕೃತಕ ಕಾಡು ಕಣ್ಣಿಗೆ ರಾಚುತ್ತಿದೆ. ಇದರ ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದರು.
ನಮ್ಮ ಹುಟ್ಟಿಗೆ ಕಾರಣವಾದ ಮಣ್ಣು ಮತ್ತು ಭಾಷೆಯನ್ನು ಎಂದಿಗೂ ಮರೆಯಬಾರದು. ಮತ್ತು ಹೆತ್ತಬ್ಬೆಯ ಭಾವನೆಯಲ್ಲಿ ಮಾತೃಭಾಷೆಯ ಜೀವಂತಿಕೆಗೆ ಧಕ್ಕೆಯಾಗದಂತೆ ಅದನ್ನು ಪ್ರೀತಿಸಬೇಕು ಎಂದು ಚಿತ್ರ ಸಾಹಿತಿ ಕವಿರಾಜ್ ತಿಳಿಸಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೈಯಕ್ತಿಕವಾಗಿ ಗಳಿಸುವ ಆಸ್ತಿ, ಸಂಪತ್ತಿನಂತೆಯೇ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ. ಮಾನವೀಯ ಸಂಬಂಧ, ಸಾಮಾಜಿಕ ಕಳಕಳಿ ಮುಂತಾದ ವಿಚಾರಗಳಲ್ಲಿ ಸಾಕ್ಷಿಪ್ರಜ್ಞೆಯಂತಿದ್ದ ತೀರ್ಥಹಳ್ಳಿ ಇಂದು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ ಎಂದರು.
ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ತಹಸೀಲ್ದಾರ್ ಎಸ್.ರಂಜಿತ್, ತಾಪಂ ಇಒ ಎಂ.ಶೈಲಾ, ಸಾಹಿತಿ ಡಾ. ಜೆ.ಕೆ.ರಮೇಶ್, ಕೆ.ನಾಗರಾಜ ಶೆಟ್ಟಿ , ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ, ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಇತರರಿದ್ದರು.

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…