ಬೆಂಗಳೂರು: ರಾಜ್ಯದ ಶಿಕ್ಷಣ ವ್ಯವಸ್ಥೆ ಆಘಾತಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಸಮರ್ಪಕ ನಿರ್ಧಾರಗಳ ಫಲ ಇಂದು ಶಿಕ್ಷಣ ಕ್ಷೇತ್ರ ಅಧೋಗತಿಗೆ ಹೋಗಿದೆ. ಪಟ್ಟ ಉಳಿಸಿಕೊಳ್ಳಲು ಹೆಣಗಾಡುವ ಸರ್ಕಾರದಿಂದ ದೆಹಲಿ ಮಾದರಿಯ ಉತ್ತಮ ಶಿಕ್ಷಣ ವ್ಯವಸ್ಥೆ ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದರು.
ಬೆಂಗಳೂರು ಪ್ರೆಸ್ಕ್ಲಬ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಾರ್ಟಿ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಜನತೆಯ ಮತ್ತು ಸರ್ಕಾರದ ಗಮನ ಸೆಳೆದು ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರುವ ಕುರಿತು “ಶಿಕ್ಷಣ ನಮ್ಮ ಹಕ್ಕು, ಶಿಕ್ಷಣ ನಿಮ್ಮ ಜವಾಬ್ದಾರಿ” ಎಂಬ ಶಿಕ್ಷಣ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತಿದೆ. ಜುಲೈ 30ರ ಶುಕ್ರವಾರ ಸಂಜೆ 6 ಗಂಟೆಗೆ ಶಿಕ್ಷಣ ತಜ್ಞೆ ಮತ್ತು ದೆಹಲಿ ಶಾಸಕಿ ಅತಿಶಿ ಮರ್ಲೇನ ಅವರಿಂದ ಚರ್ಚೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಇದು ಕರೊನಾ ಲಸಿಕೆ ಇನ್ನೂ ಪಡೆಯದವರು ಓದಲೇಬೇಕಾದ ವಿಷಯ: ಹೊರಬಿತ್ತು ಮತ್ತೊಂದು ಅಧ್ಯಯನ ವರದಿ
ಕ್ರಾಂತಿಕಾರಕ ರೀತಿಯಲ್ಲಿ ದೆಹಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಶಿಕ್ಷಣ ವಾಸ್ತುಶಿಲ್ಪಿ ಅತಿಶಿ ದೆಹಲಿ ಮಾದರಿಯ ಶಿಕ್ಷಣ ವ್ಯವಸ್ಥೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಈ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಬಗ್ಗೆ ಚರ್ಚಿಸಲಿದ್ದಾರೆ. ಚರ್ಚೆಯಲ್ಲಿ ನ್ಯಾಷನಲ್ ಲಾ ಸ್ಕೂಲ್ ನ ಪ್ರಾಧ್ಯಾಪಕ ಬಾಬು ಮ್ಯಾಥ್ಯೂ ಮತ್ತು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್ನಲ್ಲಿ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಕೆಎಎಂಎಸ್ನ ಮುಖ್ಯಸ್ಥ ಶಶಿಕುಮಾರ್, ಐಟಿ ಫಾರ್ ಚೇಂಜ್ ಆನ್ ದ ರೋಲ್ ಆಫ್ ಟೆಕ್ನಾಲಜಿ ಇನ್ ಸ್ಕೂಲ್ ಲರ್ನಿಂಗ್ ಸಲ್ಯೂಷನ್ಸ್ ಮುಖ್ಯಸ್ಥ ಗುರು ಕಾಶಿನಾಥನ್, ಅಕ್ಷರ ಫೌಂಡೇಷನ್ನ ಗಣಿತ ಶಿಕ್ಷಕಿ ಪುಷ್ಪಾ ತಂತ್ರಿ, ಶಿಕ್ಷಕಿ ಉಷಾ ಮೋಹನ್, ದಕ್ಷ್ ಪ್ರೋಗ್ರಾಂ ಡೈರೆಕ್ಟರ್ ಬಿ.ಎಸ್. ಸೂರ್ಯಪ್ರಕಾಶ್ ಅವರು “ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟಿಗೆ ಕಾರಣ ಮತ್ತು ಪರಿಹಾರ” ಎಂಬ ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ. ಪ್ರಕಾಶ್ ನೆಡುಂಗಡಿ, ವಿಜಯ್ ಶಾಸ್ತ್ರಿಮಠ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?