ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕೂಡಲೇ ಐದು ಕ್ರಮಗಳನ್ನು ಪ್ರಕಟಿಸಿತು. ಈ ಪೈಕಿ, ಇಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಬೇಕು ಎಂಬುದು ಪ್ರಮುಖವಾದುದು. ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಬೇಕಾದ ಅವಧಿ ಭಾನುವಾರಕ್ಕೆ ಅಂತ್ಯಗೊಂಡಿದೆ. ಭಾನುವಾರ ಒಂದೇ ದಿನ 500ಕ್ಕೂ ಹೆಚ್ಚು ಪಾಕ್ ನಾಗರಿಕರು ಅವರ ದೇಶಕ್ಕೆ ಮರಳಿದ್ದಾರೆ. ಈ ಮಧ್ಯೆ ಕೇರಳದಲ್ಲಿ ನೆಲೆಸಿರುವ ನೂರಕ್ಕೂ ಹೆಚ್ಚು ಪಾಕ್ ಪ್ರಜೆಗಳಿಗೆ ಭಾರತ ದೇಶ ತೊರೆಯುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ, ವೀಸಾ ಕಾಲಾವಧಿ ಮುಗಿದರೂ 62 ಮಂದಿ ಇನ್ನೂ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಮಾತ್ರವಲ್ಲ ದೀರ್ಘಾವಧಿ ವೀಸಾ ಪಡೆದವರು ಕೂಡ ಇನ್ನೂ ಭಾರತ ತೊರೆದಿಲ್ಲ ಎಂಬ ಮಾಹಿತಿಗಳಿವೆ. ಆದರೆ, ಇನ್ನೂ ಕೆಲವರು ತಲೆಮರೆಸಿಕೊಂಡು ನೆಲೆಸಿರುವ ಸಾಧ್ಯತೆ ಇದೆ.

ಪಹಲ್ಗಾಮ್ ದಾಳಿಯ ನಂತರ ಇಡೀ ದೇಶ ಆಕ್ರೋಶಗೊಂಡಿದೆ. ಈ ದಾಳಿಯ ಹಿಂದೆಯೂ ಪಾಕಿಸ್ತಾನದ ಕೈವಾಡ ದೃಢಪಟ್ಟಿರುವುದರಿಂದ ಕಠಿಣ ಕ್ರಮ ಅನಿವಾರ್ಯ. ಪ್ರಧಾನಿ ನರೇಂದ್ರ ಮೋದಿ ಬಿಹಾರದ ಜನಸಭೆಯಲ್ಲಿ ಹೇಳಿದ್ದ ಮಾತುಗಳನ್ನು ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ಪುನರುಚ್ಚರಿಸಿದ್ದು, ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮತ್ತೊಂದೆಡೆ, ಗುಜರಾತ್ ರಾಜ್ಯವೊಂದರಲ್ಲೇ ಸಾವಿರಕ್ಕೂ ಅಧಿಕ ಬಾಂಗ್ಲಾದೇಶದ ನುಸುಳುಕೋರರು ಪತ್ತೆಯಾಗಿರುವುದು ಗಂಭೀರ ವಿಚಾರ. ಪೊಲೀಸರು ಅಹಮದಾಬಾದ್ ಮತ್ತು ಸೂರತ್ ನಗರಗಳಲ್ಲಿ ಕಾರ್ಯಾಚರಣೆ ನಡೆಸಿ ಇವರನ್ನು ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲ, ಈ ಪೈಕಿ ಅನೇಕ ಜನರು ಮಾದಕದ್ರವ್ಯ ಕಳ್ಳಸಾಗಾಣಿಕೆ ಮತ್ತು ಮಾನವ ಕಳ್ಳಸಾಗಾಟ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ‘ಈ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಗುಜರಾತ್ನ ಗೃಹ ರಾಜ್ಯ ಸಚಿವ ಹರ್ಷ್ ಸಂಘ್ವಿ ಹೇಳಿದ್ದಾರೆ.
ಅಕ್ರಮ ವಲಸಿಗರು ತಾವಾಗೇ ಪೊಲೀಸರ ಮುಂದೆ ಶರಣಾಗಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ. ಇದು ದೇಶದ ಆಂತರಿಕ ಸುರಕ್ಷೆಯನ್ನು ಬಲಪಡಿಸಬೇಕಾದ ಸಮಯ. ಹೀಗಾಗಿ, ಯಾವುದೇ ದಯೆ, ದಾಕ್ಷಿಣ್ಯ ಇಲ್ಲದೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಾಗರಿಕರನ್ನು ಅವರ ದೇಶಕ್ಕೆ ಕಳುಹಿಸಬೇಕು. ಭಾರತ ಧರ್ಮಶಾಲೆಯಲ್ಲ. ನುಸುಳುಕೋರರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ಇಲ್ಲಿ ಆಶ್ರಯ ಪಡೆದು ಭಾರತವಿರೋಧಿ ಕೃತ್ಯಗಳಿಗೆ ಕೈಜೋಡಿಸುವುದು ಹೊಸದೇನಲ್ಲ. ಪಹಲ್ಗಾಮ್ ದಾಳಿಯ ಬಳಿಕವಾದರೂ ಪಾಠ ಕಲಿಯಬೇಕಿದೆ. ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರ ಹಾವಳಿ ವಿಪರೀತ ಮಟ್ಟದಲ್ಲಿದೆ. ಇಂಥ ಸೂಕ್ಷ್ಮ ವಿಷಯದಲ್ಲಾದರೂ ರಾಜ್ಯ ಸರ್ಕಾರಗಳು ರಾಜಕೀಯ ಮಾಡದೆ ದೇಶದ ಆಂತರಿಕ ಭದ್ರತೆ ಬಲಪಡಿಸುವತ್ತ ಕೇಂದ್ರದ ಕ್ರಮಗಳಿಗೆ ಸಹಕರಿಸಬೇಕು. ಇಡೀ ದೇಶವನ್ನು ನುಸುಳುಕೋರರಿಂದ ಮುಕ್ತಗೊಳಿಸಲು ಆ ಮೂಲಕ ದೇಶವನ್ನು ಶುದ್ಧೀಕರಣಗೊಳಿಸಲು ಇದು ಸರಿಯಾದ ಸಮಯ ಎಂಬುದನ್ನು ಮರೆಯುವಂತಿಲ್ಲ.