ಹುಬ್ಬಳ್ಳಿ: ನಗರದ ಪುರಾತನ ಮಂದಿರ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ಕೊನೆಯ ಹಂತವಾಗಿರುವ ಭಂಡಾರ ಪೂಜೆಯನ್ನು ದಾಜಿಬಾನಪೇಟ ಶ್ರೀ ದುರ್ಗಾದೇವಿ ದೇವಸ್ಥಾನ ಎಸ್ಎಸ್ಕೆ ಪಂಚ ಟ್ರಸ್ಟ್, ಗ್ರಾಮ ದೇವತೆ ದೇವಸ್ಥಾನ ವತಿಯಿಂದ ಶುಕ್ರವಾರ ನೆರವೇರಿಸಲಾಯಿತು.

ಶ್ರೀದೇವಿ ಜಗನ್ಮಾತೆಯು ನವರಾತ್ರಿಯಲ್ಲಿ ರಾಕ್ಷಸರನ್ನು ಸಂಹಾರ ಮಾಡುತ್ತಾಳೆ. ನಂತರ ಮಾತೆಯ ಉಗ್ರ ಅವತಾರ ಶಮನವಾಗದಿರುವುದನ್ನು ಕಂಡು ದೇವಾನುದೇವತೆಗಳು ಹಾಗೂ ಭಕ್ತರು ಶ್ರೀದೇವಿಗೆ ಯುದ್ಧದಲ್ಲಿ ಆಗಿರುವ ಗಾಯಗಳ ಉಪಶಮನಕ್ಕಾಗಿ ಭಂಡಾರ ಹಚ್ಚುವ ಕಾರ್ಯ ಮಾಡುತ್ತಾರೆ.
9 ದಿನಗಳ ಕಾಲ ನಿರಾಹಾರವಾಗಿ ಇದ್ದು ರಾಕ್ಷಸರನ್ನು ಸಂಹಾರ ಮಾಡಿರುವ ಶ್ರೀದೇವಿಗೆ ನೈವೇದ್ಯ ಅಪಿರ್ಸುವ ಮೂಲಕ ಶ್ರೀದೇವಿಯ ಮನವೊಲಿಸಿಕೊಳ್ಳುವಲ್ಲಿ ಹಾಗೂ ಬುತ್ತಿ ಪೂಜೆ ಮಾಡುವುದರೊಂದಿಗೆ ದೇವಿಯನ್ನು ಸಂಪನ್ನಗೊಳಿಸುವ ಸಂಕೇತವಾಗಿ ಭಂಡಾರ ಪೂಜೆ ಹಾಗೂ ನೈವೇದ್ಯ ಮಾಡುವ ಸಂಪ್ರದಾಯ ನಡೆದು ಬಂದಿದೆ.
ಈ ಸಂಪ್ರದಾಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜಗಳ ದೇವಸ್ಥಾನಗಳಲ್ಲಿ ರಾಷ್ಟ್ರದಾದ್ಯಂತ ನಡೆಯುತ್ತದೆ.
ಶುಕ್ರವಾರ ನಡೆದ ಭಂಡಾರ ಪೂಜೆಯಲ್ಲಿ 450 ಸುಮಂಗಲೆಯರು ಪಾಲ್ಗೊಂಡು ಧಾಮಿರ್ಕ ಕಾರ್ಯ ನೆರವೇರಿಸಿದರು. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದರು.
ದೇವಿಗೆ ಬೆಳಗ್ಗೆ ಅಭಿಷೇಕ, ಪೂಜೆ ನಡೆದ ನಂತರ ಮಧ್ಯಾಹ್ನ ಪಲ್ಲಕ್ಕಿ ಸೇವೆ ಜರುಗಿದವು.
ಶನಿವಾರ ಸಂಜೆ ದುರ್ಗಾದೇವಿ ದೇವಸ್ಥಾನದಲ್ಲಿ ಬುತ್ತಿ ಪೂಜೆ ನೆರವೇರಿಸಲಾಯಿತು.
ಎಸ್ಎಸ್ಕೆ ಪಂಚ ಟ್ರಸ್ಟ್ ಚೀಫ್ ಟ್ರಸ್ಟಿ ತಾರಾಸಾ ಧೋಂಗಡಿ, ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ, ನೀಲಕಂಠ ಜಡಿ, ಕೋಶಾಧಿಕಾರಿ ಅಶೋಕ ಕಲಬುರ್ಗಿ, ಅಶೋಕ ಪವಾರ ಇತರರು ಭಾಗವಹಿಸಿದ್ದರು.