ಹುಬ್ಬಳ್ಳಿ: ಇಲ್ಲಿಯ ನೇಕಾರನಗರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಹಿಂದು ಜಾಗರಣ ವೇದಿಕೆ ಮಹಾನಗರ ಘಟಕ ವತಿಯಿಂದ ದುರ್ಗಾ ದೌಡ್ ಹಿಂದು ಶಕ್ತಿ ಸಂಚಲನ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಹಳೇಹುಬ್ಬಳ್ಳಿ ಚೆನ್ನಪೇಟೆಯಿಂದ ಆರಂಭವಾದ ದೌಡ್ ಜಂಗ್ಲಿ ಪೇಟೆ, ಬಾಣತಿಕಟ್ಟಿ ಮೂಲಕ ಸಾಗಿ ನೇಕಾರನಗರ ಬಸವೇಶ್ವರ ವೃತ್ತ ತಲುಪಿತು. ಮಾರ್ಗದುದ್ದಕ್ಕೂ ಸಾವಿರಾರು ಜನರು ಮೆರವಣಿಗೆ ವೀಕ್ಷಿಸಿದರು. ಹೂವಿನ ಮಳೆ ಗರೆದು ಬರಮಾಡಿಕೊಂಡರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ, ಭಾರತೀಯರಾದ ನಾವೆಲ್ಲ ಯಾವುದೇ ಜಾತಿಯವರಾಗಿರಲಿ ಮೊದಲು ಹಿಂದು ಆಗುವುದು ಅಗತ್ಯ. ಪ್ರತಿಯೊಬ್ಬರು ಹಿಂದು ಎನ್ನುವುದನ್ನು ಅರಿತು ಮುನ್ನಡೆಯಬೇಕು, ಸನಾತನ ಧರ್ಮದ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಿರಬೇಕು ಎಂದರು.
ಯಾವುದೇ ಪಕ್ಷದವರಾಗಿರಲಿ ಧರ್ಮ ಎಂದು ಬಂದಾಗ ಸನಾತನ ನಮ್ಮ ಧರ್ಮ ಎಂದು ಹೇಳಬೇಕು. ಸಮಸ್ತ ಹಿಂದುಗಳು ವರ್ಷಕ್ಕೆ ಒಂದು ಸಲವಾದರೂ ಹೆಣ್ಣು ಮಕ್ಕಳು, ಗೋ ಮಾತೆ ರಕ್ಷಣೆಗೆ ಮುಂದಾಗಬೇಕು. ದುರ್ಗಾ ದೌಡ್ನಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಶಕ್ತಿಯ ಮೂಲ ಸ್ವರೂಪವೇ ದುರ್ಗೆಯ ಅವತಾರ ಎಂದರು.
ಧರ್ಮರಕ್ಷಣೆಗೆ ಮೊದಲು ನಮ್ಮ ಮನೆಯ ಮಕ್ಕಳು ಮೊದಲು ಜಾಗೃತರಾಗಬೇಕು. ತಾಯಂದಿರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಧರ್ಮ ಜಾಗೃತಿ ಮಾಡಬೇಕು ಎಂದು ಸಲಹೆ ನೀಡಿದರು.
ಧರ್ಮ ಜಾಗೃತಿ ಉಂಟಾದರೆ ಸನಾತನ ಧರ್ಮವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಹಿಂದು ಧರ್ಮದಲ್ಲಿ ಹುಟ್ಟಿ ನಮ್ಮ ಧರ್ಮದ ವಿರುದ್ಧ ಮಾತನಾಡುವವರ ಬಗ್ಗೆ ನಾವು ಎಚ್ಚರಗೊಳ್ಳಬೇಕು. ಮನೆ ಮನಗಳಲ್ಲಿ ರಾಮ ಬರಬೇಕು ಎಂದರು.
ನ್ಯಾಯವಾದಿ ರಾಮಚಂದ್ರ ಮಟ್ಟಿ ಮಾತನಾಡಿ, ಆರ್ಎಸ್ಎಸ್ ಬಲಗೈಯಾಗಿ ಹಿಂದು ಜಾಗರಣ ವೇದಿಕೆ ಕಾರ್ಯ ಚಟುವಟಿಕೆ ಮಾಡುತ್ತಿದೆ. ಹಿಂದುಗಳು ಮನಸ್ಸು ಮಾಡಿದರೆ ಎಂತಹದೇ ಕೆಲಸ ಮಾಡಬಹುದು ಎನ್ನುವುದಕ್ಕೆ ಅಯೋಧ್ಯೆಯ ರಾಮಮಂದಿರವೇ ಸಾಕ್ಷಿ ಎಂದರು. ಉದ್ಯಮಿ ಸಂತೋಷ ಶೆಟ್ಟಿ ಮಾತನಾಡಿದರು. ಗಜಾನನ ಕಬಾಡೆ ಇದ್ದರು.