ಕೂಡಿಗೆ: ಮಾದಕ ವಸ್ತುಗಳ ಬಳಕೆ ಬಹು ದೊಡ್ಡ ವ್ಯಸನವಾಗಿದ್ದು, ಯುವ ಜನಾಂಗವನ್ನು ಹಾಳು ಮಾಡುತ್ತಿದೆ. ಯಾವ ಧರ್ಮೀಯರು ಈ ವ್ಯಸನದಿಂದ ಮುಕ್ತರಾಗಿಲ್ಲ ಎಂದು ಸಾಹಿತಿ ಭಾರಧ್ವಜ್ ವಿಷಾಧಿಸಿದರು.
ಕೂಡಿಗೆಯಲ್ಲಿ ಎಸ್ಕೆಎಸ್ಎಸ್ಎಫ್ ಹಾಗೂ ಎಸ್ವೈಎಸ್ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾದಕತೆ ಮಾರಣಾಂತಿಕ ಮಾದಕತೆ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವ್ಯಸನ ಜಾಗತಿಕ ಸಮಸ್ಯೆಯಾಗಿದ್ದು ಎದುರಿಸುವುದೇ ದೊಡ್ಡ ಸವಾಲಾಗಿದೆ. ಕೊಡಗಿನ ಪೊಲೀಸ್ ವರಿಷ್ಠ ಅಧಿಕಾರಿಗಳು ಮಾದಕ ವ್ಯಸನದ ವಿರುದ್ಧ ಬಹುದೊಡ್ಡ ಹೋರಾಟ ಮಾಡುತ್ತಿದ್ದು ಯಶಸ್ವಿಯೂ ಆಗುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ಇಂದು ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅತೀ ಜರೂರಿದೆ. ಇದು ಬಹು ದೊಡ್ಡ ಮಾಫಿಯಾ ಆಗಿದ್ದು, ಕಾಲೇಜು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಮಾದಕ ವ್ಯಸನದ ಗೀಳು ಹಚ್ಚಿಸಿ ಬಿಟ್ಟರೆ ಅಂತಹ ಮಕ್ಕಳು ದಾಸರಾಗಿ ರಾಷ್ಟ್ರ ದ್ರೋಹವೆಸಗುವ ಮಟ್ಟಕ್ಕೂ ಹೋಗುತ್ತಿದೆ. ಮಾದಕ ವ್ಯಸನ ಸಿನಿಮಾ ನಟರು ಹಾಗೂ ಕ್ರೀಡಾ ಪಟುಗಳನ್ನು ಬಿಟ್ಟಿಲ್ಲ. ಈ ವ್ಯಸನ ಮಹಾಭಾರತ ಕಾಲದಿಂದಲೂ ಇದೆ. ಸ್ವಾಸ್ಥ್ಯಕ್ಕಾಗಿ ಬಳಸಬೇಕಾದ ಔಷಧಿಗಳು ಕೂಡ ಇಂದು ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಮಾರಣಾಂತಿಕ ಹಾದಿ ಎಂದು ಭಾರಧ್ವಜ್ ವಿಷಾದ ವ್ತಕ್ತಪಡಿಸಿದರು.
ಸುಳ್ಯದ ಬೆಳ್ಳಾರೆಯ ಧಾರ್ಮಿಕ ಮುಖಂಡ ಇಕ್ಬಾಲ್ ಬಾಳಿಲ ಮಾತನಾಡಿ, ಮಾದಕತೆ ಎಂಬ ಡ್ರಗ್ಸ್ ಮಾಫಿಯಾ ಶಾರೀರಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಹು ದೊಡ್ಡ ಸಮಸ್ಯೆಯಾಗಿದೆ. ಭವಿಷ್ಯದಲ್ಲಿ ಪಂಜಾಬ್ ಗಿಂತ ಕರ್ನಾಟಕ ಮಾದಕ ವ್ಯಸನದಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವ ಅಪಾಯವಿದೆ. ಪ್ರತೀ ಗ್ರಾಮ ಗಳಲ್ಲೂ ಮಾದಕತೆ ಮನೆ ಮಾಡಿ ನಿಂತಿದೆ. ಮಕ್ಕಳನ್ನು ನಿಯಂತ್ರಿಸಿದರೆ ಈ ವ್ಯಸನಕ್ಕೆ ತಡೆ ಸಾಧ್ಯವಿದೆ. ಈ ದೇಶದ ಸಂಸ್ಕ್ರತಿಗೆ ಮಾದಕ ವ್ಯಸನ ಕಪ್ಪು ಚುಕ್ಕೆಯಾಗಿದೆ. ಶಾಲಾ ಮಕ್ಕಳು ಹೆಣ್ಣು ಮಕ್ಕಳಾದಿಯಾಗಿ ಮಾದಕ ವ್ಯಸನದ ಗೀಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಮಕ್ಕಳ ಬಗ್ಗೆ ಹೆತ್ತವರು ಗಮನಿಸಬೇಕು ಎಂದು ಬಾಳಿಲ ಕರೆಕೊಟ್ಟರು.
ಇಂತಹ ಮಾದಕವಾದ ಭಯಾನಕ ಹಾಗೂ ಭೀಭತ್ಸ ಘಟನೆಗಳು ಹೆಚ್ಚಾಗುವ ಮುನ್ನ ಎಲ್ಲರೂ ಧರ್ಮಾತೀತವಾಗಿ ಜಾಗೃತೆ ವಹಿಸಬೇಕಿದೆ ಎಂದು ಇಕ್ಬಾಲ್ ಬಾಳಿಲ ಕೋರಿದರು.
ಎಸ್ಕೆಎಸ್ಎಸ್ಎಫ್ ರಾಜ್ಯ ಘಟಕದ ನೇತಾರರೂ ಆದ ಕುಶಾಲನಗರದ ಮದರಸಾ ಪ್ರಾಂಶುಪಾಲ ತಮ್ಲೀಕ್ ಧಾರಿಮಿ, ಕೂಡಿಗೆ ಜುಮ್ಮಾ ಮಸೀದಿ ಧರ್ಮಗುರು ಹೈದರ್ ಆಲಿ ಸಾದಿ ಮಾತನಾಡಿದರು. ಮಸೀದಿ ಅಧ್ಯಕ್ಷ ಯೂಸುಫ್, ಗ್ರಾಪಂ ಸದಸ್ಯರಾದ ಶಿವಕುಮಾರ್, ಅನಂತು, ಪ್ರದೀಪ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಎಸ್ವೈಎಸ್ ಸಮಿತಿಯ ಅಧ್ಯಕ್ಷ ಮೊಹಮ್ಮದ್ ವಹಿಸಿದ್ದರು.