ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದಲ್ಲಿ ಶ್ರೀ ಶಿವ ಪ್ರತಿಷ್ಠಾನ, ದುರ್ಗಾದೌಡ ಸಮಿತಿ ಹಾಗೂ ವಿವಿಧ ಹಿಂದು ಸಂಘಟನೆಗಳ ವತಿಯಿಂದ 9 ದಿನಗಳ ಕಾಲ ನಡೆಯುವ ದುರ್ಗಾದೌಡ ಧಾರ್ವಿುಕ ನಡಿಗೆ ಕಾರ್ಯಕ್ರಮಕ್ಕೆ ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಶುಕ್ರವಾರ ದುರ್ಗಾದೇವಿ ದೇವಸ್ಥಾನದಿಂದ ಎರಡನೇ ದಿನದ ದುರ್ಗಾದೌಡ ಆರಂಭವಾಗಲಿದೆ. ಪಟ್ಟಣದ ಮಹಾಗಣಪತಿ ದೇವಸ್ಥಾನದಲ್ಲಿ ಗಣಪತಿ ಹಾಗೂ ಭಗವಾಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿಂದು ನಾಯಕ ದಿ. ರಾಜು ಧೂಳಿ ಅವರ ಪುತ್ರಿ ರಿತು ಧೂಳಿ ಅವರು ಭಗವಾ ಧ್ವಜ ಹಿಡಿಯುವ ಮೂಲಕ ದುರ್ಗಾದೌಡಕ್ಕೆ ಚಾಲನೆ ನೀಡಿದರು.
ಮಹಾಗಣಪತಿ ದೇವಸ್ಥಾನದಿಂದ ಹೊರಟ ದುರ್ಗಾದೌಡ ಸದಾಶಿವನಗರ, ಗಣೇಶ ನಗರ, ಹೊರಗಿನ ಗುತ್ತಿಗೇರಿ, ಆನೆಗುಂದಿ ಬಡಾವಣೆ, ಬಸ್ ನಿಲ್ದಾಣ ರಸ್ತೆ, ಇಂದಿರಾನಗರದ ಮೂಲಕ ಶ್ರೀ ನಾಗನಾಥ ಸುಬ್ರಹ್ಮಣ್ಯ ದೇವಸ್ಥಾನ ಬಳಿಕ ಬಸವೇಶ್ವರ ವೃತ್ತ, ಶಿವಾಜಿ ಸರ್ಕಲ್ ಮೂಲಕ ದುರ್ಗಾನಗರದ ಪೊಲೀಸ್ ಲೈನ್ನಲ್ಲಿರುವ ದುರ್ಗಾದೇವಿ ದೇವಸ್ಥಾನಕ್ಕೆ ತೆರಳಿ ಒಂದು ದಿನದ ದುರ್ಗಾದೌಡ ಸಂಪನ್ನಗೊಂಡಿತು.
ಪ್ರಥಮ ದಿನದ ದೌಡಗೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿತ್ತು. ಎಲ್ಲೆಡೆ ಬೃಹತ್ ಕೇಸರಿ ಭಗವಾ ಧ್ವಜಗಳು, ಕೇಸರಿ ಪತಾಕೆಗಳು, ದುರ್ಗಾದೌಡ ಹೊರಡುವ ಬಡಾವಣೆಗಳಲ್ಲಿ ರಸ್ತೆಯ ಮೇಲೆಲ್ಲ ವಿವಿಧ ಚಿತ್ತಾರದ ಆಕರ್ಷಕ ರಂಗೋಲಿಗಳು, ತಳಿರು ತೊರಣಗಳಿಂದ ಶೃಂಗರಿಸಿದ ಬಡಾವಣೆಗಳು, ದೇವಿಯ ಭಾವಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಸುಮಾರು 80ಕ್ಕೂ ಅಧಿಕ ಮಕ್ಕಳು ಅಕ್ಕಮಹಾದೇವಿ, ಭಾರತಾಂಬೆ, ದುರ್ಗಾಮಾತೆ, ಸರಸ್ವತಿ, ಶಾರದೆ, ಶಿವಾಜಿ ಮಹಾರಾಜರು, ಆಂಜನೇಯ ಹೀಗೆ ಹಲವು ಛದ್ಮವೇಷ, ವಿವಿಧ ವೇಷ ಭೂಷಣಗಳಲ್ಲಿ ಕಂಗೊಳಿಸಿ ಮೆರುಗು ಹೆಚ್ಚಿಸಿದರು.