ಮುಂಬೈ: ಇಲ್ಲಿನ ಇಂದು ಮಿಲ್ಸ್ ಕಾಂಪೌಂಡ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಎತ್ತರವನ್ನು 250 ಯಿಂದ 350 ಅಡಿಗೆ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೊದಲು ನಿರ್ಧರಿಸಿದಂತೆ 250 ಅಡಿಯಿಂದ 350 ಅಡಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರತಿಮೆಯ ಪೀಠವೇ 100 ಅಡಿಯಾಗಿರಲಿದೆ.
ಪೀಠದ ಎತ್ತರ 100 ಅಡಿ ಸೇರಿ ಭೂಮಟ್ಟದಿಂದ ಪ್ರತಿಮೆಯು 350 ಅಡಿಯಾಗಿರಲಿದೆ. ಇದರ ಒಟ್ಟು ವೆಚ್ಚ 1100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಅಂಬೇಡ್ಕರ್ ಅವರ ಪುಣ್ಯಸ್ಥಳ ಚೈತ್ಯಭೂಮಿ ಬಳಿಯಲ್ಲಿ ನಿರ್ಮಾಣವಾಗಲಿದೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಕಾರ್ಯವನ್ನು ಇನ್ನು ಎರಡು ವರ್ಷದಲ್ಲಿ 2020ರೊಳಗೆ ಪೂರ್ಣಗೊಳಿಸಲಾಗುವುದು. ಹಿಂದಿನ ಸರ್ಕಾರ ಏನು ಮಾಡಿತು, ಅಥವಾ ಮಾಡಲಿಲ್ಲ ಎಂಬ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ಹಿಂದಿನ ಸರ್ಕಾರ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಕೇವಲ ಭೂಮಿ ಪೂಜೆ ಮಾಡಿದ್ದರು ಎಂದರು. ಇದಕ್ಕೂ ಮುನ್ನ ಪ್ರತಿಮೆ ನಿರ್ಮಾಣ ಸ್ಥಳವನ್ನು ಪವಾರ್ ಪರಿಶೀಲನೆ ನಡೆಸಿದರು.
ಈ ಹಿಂದಿನ ಸರ್ಕಾರ ಪ್ರತಿಮೆ ನಿರ್ಮಾಣಕ್ಕಾಗಿ 700 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು. ಈಗ ಪ್ರತಿಮೆ ಎತ್ತರವನ್ನು ಹೆಚ್ಚು ಮಾಡಿರುವುದರಿಂದ ಮತ್ತೆ 300 ಕೋಟಿ ರೂಪಾಯಿ ಅಧಿಕ ಹೊರೆಯಾಗಲಿದೆ. (ಏಜೆನ್ಸೀಸ್)