ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ವೇಳೆ ಶಾಶ್ವತ ಆಯೊಗಕ್ಕಾಗಿ ಸುಪ್ರಿಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವ ಶಾರ್ಟ್ ಸರ್ವೀಸ್ ಕಮಿಷನ್ ಮಹಿಳಾ ಸೇನಾ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸದಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ನೈತಿಕತೆಯನ್ನು ಕುಗ್ಗಿಸಬೇಡಿ ಎಂದಿದೆ.

ಸೇನೆಯಲ್ಲಿ ಶಾಶ್ವತ ಆಯೋಗ ಜಾರಿ ಕೋರಿ 69 ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರ ಪೀಠವು, ಪ್ರಸ್ತುತ ಸಂದರ್ಭದಲ್ಲಿ ಸೇನೆಯಲ್ಲಿರುವ ಮಹಿಳೆಯರ ನೈತಿಕ ಸ್ಥೈರ್ಯ ಕುಗ್ಗಿಸಬಾರದು. ಅವರು ಪ್ರತಿಭಾನ್ವಿತ ಅಧಿಕಾರಿಗಳು, ನೀವು ಅವರ ಸೇವೆಗಳನ್ನು ಬೇರೆ ಕಡೆಗಳಲ್ಲೂ ಸಹ ಬಳಸಬಹುದು. ಅಧಿಕಾರಿಗಳು ತಾವು ಸಲ್ಲಿಸಿರುವ ಅರ್ಜಿ ಸಂಬಂಧ ಸುಪ್ರೀಂ ಕೋರ್ಟಿನಲ್ಲಿ ಸುತ್ತಾಡುವಂತೆ ಮಾಡುವುದು ಸರಿಯಲ್ಲ. ಬದಲಾಗಿ ದೇಶಕ್ಕೆ ಸೇವೆ ಸಲ್ಲಿಸಲು ಆ ಅವಕಾಶವನ್ನು ಅವರು ಬಳಸಿಕೊಳ್ಳಬಹುದು ಎಂದು ನ್ಯಾಯಪೀಠ ಹೇಳಿತು. ಮುಂದಿನ ವಿಚಾರಣೆಯನ್ನು ಆಗಸ್ಟ್ ತಿಂಗಳಿಗೆ ಮುಂದೂಡಿದ್ದು, ಅಲ್ಲಿಯವರೆಗೆ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬಾರದು ಎಂದು ಆದೇಶಿಸಿದೆ.