ಮೈಸೂರು: ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಜಗತ್ತಿನಲ್ಲಿ ಯಾರೂ ಇಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಬಣ್ಣಿಸಿದರು.
ಶ್ರೀದುರ್ಗಾ ಫೌಂಡೇಷನ್ ಹಾಗೂ ಸುಯೋಗ್ ಆಸ್ಪತ್ರೆಯಿಂದ ಭಾನುವಾರ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಕುಕ್ಕರಹಳ್ಳಿಕೆರೆ ದಂಡೆಯಲ್ಲಿ ಆಯೋಜಿಸಿದ್ದ ತಾಯಂದಿರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವರ್ಣಿಸಲು ಅಸಾಧ್ಯವಾದ ವ್ಯಕ್ತಿ ತಾಯಿ. ಅವಳನ್ನು ಇಳಿ ವಯಸ್ಸಲ್ಲಿ ಸರಿಯಾಗಿ ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ನೂಕುವ ಕೆಲಸ ಮಾಡಬಾರದು. ಹಿರಿಯ ಜೀವಿಗಳ ಮನಸ್ಸನ್ನು ನೋಯಿಸದೆ ಅವರನ್ನು ಆರೋಗ್ಯವಂತರನ್ನಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಹೇಳಿದರು
ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ. ಎಸ್.ಪಿ.ಯೋಗಣ್ಣ ಮಾತನಾಡಿ, ಎಲ್ಲರಿಗೂ ಆರೋಗ್ಯವೇ ಮಹಾ ಭಾಗ್ಯವಾಗಿದ್ದು, ತಾಯಂದಿರು ಆರೋಗ್ಯವಂತರಾಗಿದ್ದರೆ ತಮ್ಮ ಕುಟುಂಬವನ್ನೇ ಆರೋಗ್ಯವಂತ ಕುಟುಂಬವನ್ನಾಗಿ ಕಾಪಾಡಿಕೊಳ್ಳಬಹುದು ಎಂದರು.
ಮೂಢನಂಬಿಕೆಗಳಿಗೆ ಒಳಗಾಗಿ ಆಸ್ಪತ್ರೆಗೆ ತೋರಿಸದೆ ಅನಾರೋಗ್ಯದಿಂದ ಬಳಲುವುದು ಸರಿಯಲ್ಲ. ಯಾವುದೇ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು.
ಸ್ತ್ರೀ ಯೋಗ ತಜ್ಞರಾದ ಡಾ. ಗೀತಾ, ಡಾ. ಅನುಷ್ಯ ಪ್ರಿಯ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಮುಖಂಡರಾದ ಸುಜಾತಾ, ಕೋಮಲಾ, ವನಮಾಲ, ನೀಲಾ, ಕಾಮಾಕ್ಷಿ ಇತರರು ಇದ್ದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
