ಚಿಕ್ಕಬಳ್ಳಾಪುರ: ರಾಜಕೀಯ ನಾಯಕರೊಂದಿಗೆ ಹರಟೆ ಹೊಡೆದುಕೊಂಡು ಕೂರಲು ಆಸಕ್ತಿ ಹೊಂದಿಲ್ಲ. ನಾನು ಫೋನ್ ಕರೆ ಸ್ವೀಕರಿಸಲ್ಲ. ಮುಂಬರುವ ಚುನಾವಣೆಯಲ್ಲಿ ಗೆಲ್ಲದಿದ್ದರೂ ಪರವಾಗಿಲ್ಲ ಎಂದು ಶಾಸಕ ಪ್ರದಿಪ್ ಈಶ್ವರ್ ಕಿಡಿಕಾರಿದರು.
ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕನಾರಪ್ಪನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯಲ್ಲಿ ಬೋಧನೆ ಇಲ್ಲವೇ ಕ್ಷೇತ್ರದ ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುವುದು ಪ್ರಮುಖ ಕೆಲಸ. ಇದನ್ನು ಬಿಟ್ಟು ರಾಜಕೀಯ ನಾಯಕರೊಂದಿಗೆ ಹರಟೆ ಹೊಡೆದುಕೊಂಡು ಇರುವುದಿಲ್ಲ. ಒಂದು ವೇಳೆ ಇಂತಹ ವರ್ತನೆಗೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದೇಳಿದರೂ ಪರವಾಗಿಲ್ಲ. ಸುಮ್ಮನೆ ಮೊಬೈಲ್ ಕರೆ ಮಾಡಿ, ಊಟ ತಿಂಡಿ ಸೇವನೆ ಇಲ್ಲವೇ ಕೆಲಸಕ್ಕೆ ಬಾರದ ಮಾತುಗಳನ್ನು ಹೇಳಿಕೊಂಡು ಕುಳಿತುಕೊಳ್ಳಬೇಕಾ?. ಗ್ರಾಮಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸುವುದು ಮುಖ್ಯ. ಇದರ ನಡುವೆ ಮೊಬೈಲ್ ನಲ್ಲಿ ಮಾತನಾಡುವುದಕ್ಕೆ ಎಲ್ಲಿ ಸಮಯ ಇದೆ ಎಂದು ಪ್ರಶ್ನಿಸಿದರು.
*ಸಂಸದರ ಬಗ್ಗೆ ಮಾತಾಡಲ್ಲ
ಸಂಸದ ಡಾ ಕೆ.ಸುಧಾಕರ್ ಬಗ್ಗೆ ಏನು ಮಾತಾಡಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಮಾತ್ರ ಗಮನಹರಿಸಲಾಗುತ್ತದೆ. ರಾಜಕೀಯ ಮುಖಂಡರೊಂದಿಗೆ ಇರುವುದು ಜನಪ್ರತಿನಿಧಿಯ ಕೆಲಸವಲ್ಲ. ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು. ಇದಕ್ಕೆ ಆದ್ಯತೆ ನೀಡಲಾಗುತ್ತದೆ. ಜನರ ನೆರವಿಗಾಗದೇ 10 ವರ್ಷ ಜನಪ್ರತಿನಿಧಿ ಇದ್ದರೆ ಏನು ಪ್ರಯೋಜನ? ಎಂದು ಶಾಸಕರು ಪ್ರಶ್ನಿಸಿದರು.
*ಗ್ರಾಮಗಳ ಸಮಸ್ಯೆ ಚರ್ಚೆ
ಕಮ್ಮಗುಟ್ಟಹಳ್ಳಿ ಗ್ರಾ.ಪಂ.ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಶಾಸಕರು ತೆರಳಿ, ಜನರ ಅಹವಾಲು ಆಲಿಸಿದರು. ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ನೆಲದ ಮೇಲೆಯೇ ಕುಳಿತು, ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ರಸ್ತೆ, ಚರಂಡಿ ನಿರ್ಮಾಣ, ಮಾಸಾಶನ ಮಂಜೂರಾತಿ, ಬಸ್ ಸೌಕರ್ಯ ಸೇರಿದಂತೆ ವಿವಿಧ ಅಹವಾಲು ಸಲ್ಲಿಕೆಯಾಯಿತು. ಇದಕ್ಕೆ ಕಾಲ ಮಿತಿಯೊಳಗೆ ಪರಿಹಾರ ಕೆಲಸಗಳನ್ನು ಕೈಗೊಳ್ಳಲು ಶಾಸಕರು ಸೂಚಿಸಿದರು.
ತಹಸೀಲ್ದಾರ್ ಅನಿಲ್, ತಾ.ಪಂ.ಇಒ ಮಂಜುನಾಥ್, ಮುಖಂಡರಾದ ಅಡ್ಡಗಲ್ ಶ್ರೀಧರ್, ಶಂಕರ್, ಶ್ರೀನಿವಾಸ್ ಮತ್ತಿತರರು ಇದ್ದರು.