ಬೆಂಗಳೂರು: ಶ್ರೀಮಂತಿಕೆಯ ಆಸೆ ಹಾಗೂ ಯುವತಿಯರು ಮತ್ತು ಮಹಿಳೆಯರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ವಂಚನೆ ನಡೆಸುತ್ತಿದ್ದ ಇಬ್ಬರು ಖದೀಮರು ಖಾಕಿ ಬಲೆಗೆ ಬಿದ್ದಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಂಚಕರನ್ನು ಬಂಧಿಸಲಾಗಿದೆ.
ಶಾಸಕನ ಪುತ್ರ ಎಂದೇಳಿಕೊಂಡು ಮಾಲ್ಗೆ ಬರುತ್ತಿದ್ದ ಅಮಾಯಕ ಯುವತಿಯರ ಸ್ನೇಹ ಬೆಳಸಿದ ಬಳಿಕ ಲೈಂಗಿಕವಾಗಿ ಬಳಸಿಕೊಂಡು ಆಭರಣ ಕಿತ್ತುಕೊಳ್ಳುತ್ತಿದ್ದ ಜಹಾಂಗೀರ್ ಅಲಿಯಾಸ್ ಕಾರ್ತಿಕ್(30), ಮಾಲ್ನಲ್ಲಿ ಕೆಲಸ ಕೊಡಿಸುವುದಾಗಿ ಕರೆದೊಯ್ದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಮಹದೇವ ಅಲಿಯಾಸ್ ಹೇಮಂತ್(32) ಬಂಧಿತರು.
ಸ್ಕೋಡಾ ಕಾರು, ಹೈಟೆಕ್ ಫೋಸು!: ಕಾರ್ತಿಕ್ ರೆಡ್ಡಿ ಮೂಲತಃ ತಮಿಳುನಾಡಿನ ತಿರಚ್ಚಿ ಜಿಲ್ಲೆ ವೀರೇಶ್ವರಂನವನಾಗಿದ್ದು, ಎಂಬಿಎ ಓದಿ ಚೆನ್ನೈನ ಗ್ರೀನ್ ಕೋಕನಟ್ ರೆಸಾರ್ಟ್ನಲ್ಲಿ ಗ್ರೂಪ್ ಜನರಲ್ ಮ್ಯಾನೇಜರ್ ಆಗಿದ್ದ. ಶಾಪಿಂಗ್ ಮಾಲ್, ಹೋಟೆಲ್ಗೆ ಬರುತ್ತಿದ್ದ ಒಂಟಿ ಯುವತಿಯರ ಬಳಿ ತಾನು ದೊಡ್ಡ ಉದ್ಯಮಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ತನಗೆ ಹೋಟೆಲ್, ಮೀಡಿಯಾ ಸಂಸ್ಥೆ, ಚಿನ್ನದಂಗಡಿ ಇದ್ದು, ಬೆಂಗಳೂರಿಗೆ 2ನೇ ಅತಿದೊಡ್ಡ ಶ್ರೀಮಂತ. ನನ್ನ ತಂದೆ ಶಾಸಕ ಮತ್ತು ತಾಯಿ ವೈದ್ಯೆ ಎಂದು ಹೇಳಿಕೊಳ್ಳುತ್ತಿದ್ದ.
ಇತ್ತೀಚೆಗೆ ಎಂ.ಜಿ ರಸ್ತೆ ಹೋಟೆಲ್ವೊಂದರಲ್ಲಿ ಯುವತಿ ಜತೆ ಸ್ನೇಹ ಬೆಳೆಸಿದ ಆರೋಪಿ ನನ್ನ ಹೋಟೆಲ್ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ಸ್ಕೋಡಾ ಕಾರಿನಲ್ಲಿ ಕೂರಿಸಿಕೊಂಡು ಮೊಬೈಲ್, ಪರ್ಸ್ ಕಿತ್ತುಕೊಂಡು ಆಕೆಯ ಮೊಬೈಲ್ನಿಂದಲೇ ಆನ್ಲೈನ್ ಮೂಲಕ ಕಾಡುಬೀಸನಹಳ್ಳಿಯ ಓಯೋನಲ್ಲಿ ಸರ್ವೀಸ್ ಅಪಾರ್ಟ್ವೆುಂಟ್ನಲ್ಲಿ ರೂಂ ಬುಕ್ ಮಾಡಿದ್ದ. ಅಲ್ಲಿಗೆ ಯುವತಿಯನ್ನು ಕರೆದೊಯ್ದು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ. ಆಕೆ ನಿರಾಕರಿಸಿದಾಗ ಪಿಸ್ತೂಲ್ ಇರುವುದಾಗಿ ಹೆದರಿಸಿ ಅತ್ಯಾಚಾರ ಎಸಗಿದ್ದ. ನಂತರ ರೂಂ ಬಾಡಿಗೆಯನ್ನು ಆಕೆಯಿಂದಲೇ ಪಾವತಿಸಿದ್ದ. ಈ ಬಗ್ಗೆ ನೊಂದ ಯುವತಿ ಕೊಟ್ಟ ದೂರಿನ ಮೇರೆಗೆ ಹಲಸೂರು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬೆಂಗಳೂರು ಮತ್ತು ಚೆನ್ನೈನಲ್ಲಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿರುವುದಾಗಿ ಪೂರ್ವ ವಿಭಾಗ ಡಿಸಿಪಿ ಡಾ. ಎಸ್. ಡಿ. ಶರಣಪ್ಪ ತಿಳಿಸಿದ್ದಾರೆ.
ನಟಿ ಮಾಡುವುದಾಗಿ ವಂಚನೆ: ನ.5ರ ರಾತ್ರಿ 9.50ರಲ್ಲಿ ಎಂ.ಜಿ ರಸ್ತೆಯ ಮಾಲ್ ಮುಂದೆ ನಿಂತಿದ್ದ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಮೊಬೈಲ್, ಪರ್ಸ್ ಕಿತ್ತುಕೊಂಡು, ಕೋರಮಂಗಲದ ಬಂಕ್ನಲ್ಲಿ ಆಕೆ ಎಟಿಎಂ ಕಾರ್ಡ್ನಿಂದ 4 ಸಾವಿರ ರೂ.ಗೆ ಪೆಟ್ರೋಲ್ ಹಾಕಿಸಿಕೊಂಡಿದ್ದ. ಅಲ್ಲಿಂದ ಎಚ್ಎಎಲ್, ವರ್ತರು, ಸರ್ಜಾಪುರ, ಬೆಳ್ಳಂದೂರು ಮುಂತಾದ ಕಡೆ ಸುತ್ತಾಡಿಸಿ, ರೂಂ ಬುಕ್ ಮಾಡಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದ.
ಡ್ರಾಪ್ ನೆಪದಲ್ಲಿ ಮೋಸ: ಮೇ 23ರ ಸಂಜೆ 6.30ರಲ್ಲಿ ತಿರುಪತಿಯಲ್ಲಿ ದೇವರ ದರ್ಶನ ಮುಗಿಸಿ ಹೈದರಾಬಾದ್ಗೆ ಹೋಗಲು ಬಸ್ ನಿಲ್ದಾಣದಲ್ಲಿ ಮಗು ಜತೆ ಕಾಯುತ್ತಿದ್ದ ಮಹಿಳೆಯನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರ್ನಲ್ಲಿ ಕೂರಿಸಿಕೊಂಡು, ಬೆಂಗಳೂರು ಮೂಲಕ ಹೈದರಾಬಾದ್ ಹೋಗುತ್ತೇನೆಂದು ವೈಟ್ಫೀಲ್ಡ್ ರಸ್ತೆ ಫಿನಿಕ್ಸ್ ಮಾಲ್ಗೆ ಕರೆದುಕೊಂಡು ಬಂದು, ಮಗುವಿಗೆ ಗೊಂಬೆ ತರುವುದಾಗಿ ಮಹಿಳೆ ಡೆಬಿಟ್ ಕಾರ್ಡ್ ಪಡೆದು 40,200 ರೂ. ಡ್ರಾ ಮಾಡಿ ವಾಪಸ್ ಕೊಟ್ಟಿದ್ದ.
ಮದ್ಯ ಕುಡಿಸಿ ಅತ್ಯಾಚಾರ: ನ.1ರಂದು ಮಹದೇವಪುರ ಬಳಿಯ ಮಾಲ್ ಬಳಿ ನಿಂತಿದ್ದ ಮಹಿಳೆಯನ್ನು ಪರಿಚಯಿಸಿಕೊಂಡು ಮೀಡಿಯಾ ಮತ್ತು ಅಡ್ವರ್ಟೆಸ್ ಕಂಪನಿಯಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ಕರೆಯೊಯ್ದು ಇಂದಿರಾನಗರ ಪಬ್ನಲ್ಲಿ ಮದ್ಯ ಕುಡಿಸಿ ಮೈಸೂರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ.
ಮಹಿಳೆ ಹಣದಲ್ಲಿ ಮೊಬೈಲ್: 2017ರಲ್ಲಿ ಚೆನ್ನೈನಲ್ಲಿ ಮಹಿಳೆಯನ್ನು ಪರಿಚಯಿಸಿಕೊಂಡು ಫಿನಿಕ್ಸ್ ಮಾಲ್ಗೆ ಕರೆದೊಯ್ದು ಪೂರ್ವಿಕ ಮೊಬೈಲ್ ಶಾಪ್ನಲ್ಲಿ ಮಹಿಳೆಯ ಎಟಿಎಂ ಕಾರ್ಡ್ನಿಂದ 68 ಸಾವಿರ ರೂ. ಮೊಬೈಲ್ ಖರೀದಿಸಿದ್ದ. ಅಲ್ಲದೆ, 2,97,600 ರೂ. ಡ್ರಾ ಮಾಡಿದ್ದ.
ಪ್ರೀತಿ ಹೆಸರಲ್ಲಿ ರೇಪ್: 2017ರಲ್ಲಿ ಮದುವೆ ನೆಪ ದಲ್ಲಿ ಹುಡುಗಿಯನ್ನು ಪ್ರೀತಿಸಿ ಮಹಾಬಲಿಪುರದ ರೆಸಾರ್ಟ್ನಲ್ಲಿ ಅತ್ಯಾಚಾರ ಎಸಗಿದ್ದ. ಮೈಸೂರು, ಊಟಿ, ಕೊಡೈಕೆನಲ್, ಗೋವಾ ಎಲ್ಲೆಡೆ ಸುತ್ತಾಡಿಸಿ ಕೈಕೊಟ್ಟಿದ್ದ.
ನೌಕ್ರಿ ಹೆಸರಲ್ಲಿ ಮಹದೇವನ ಮೋಸ: ಸುಬ್ರಮಣ್ಯಪುರದ ಆರೋಪಿ ಮಹದೇವ, ಆಟೋದಲ್ಲಿ ಸುತ್ತಾಡಿಕೊಂಡು ಕೆಳ ಮತ್ತು ಮಧ್ಯಮ ವರ್ಗದ ಮಹಿಳೆಯರನ್ನು ಗುರುತಿಸುತ್ತಿದ್ದ. ಬಳಿಕ ಅವರನ್ನು ಪರಿಚಯಿಸಿಕೊಂಡು ಪ್ರತಿಷ್ಠಿತ ಮಾಲ್ನಲ್ಲಿ ಸೂಪರ್ ವೈಸರ್ ಆಗಿದ್ದೇನೆ. ನಿಮಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಆಟೋದಲ್ಲಿ ಕರೆದೊಯ್ದು ಮಾಲ್ ಸಮೀಪದಲ್ಲಿ ನಿಲ್ಲಿಸುತ್ತಿದ್ದ. ಕೆಲಸಕ್ಕೆ ಸೇರಿಕೊಳ್ಳುವ ಮೊದಲು ಸಮವಸ್ತ್ರ ಹಾಗೂ ಮುಂಗಡ ಹಣ ಕೊಡುವಂತೆ ಸುಲಿಗೆ ಮಾಡುತ್ತಿದ್ದ. ಮೈ ಮೇಲೆ ಚಿನ್ನಾಭರಣ ಇದ್ದರೆ ಕೆಲಸ ಕೊಡುವುದಿಲ್ಲ. ಅದನ್ನು ಬಿಚ್ಚಿ ನನ್ನ ಕೈಗೆ ಕೊಡಿ. ನಿಮ್ಮ ಬಗ್ಗೆ ವ್ಯವಸ್ಥಾಪಕರ ಬಳಿ ಬಡವರು, ಬಾಡಿಗೆ ಕಟ್ಟಲು ಹಣ ಇಲ್ಲವೆಂದು ಹೇಳುತ್ತೇನೆ ಎಂದು ಆಭರಣ ಬಿಚ್ಚಿಸಿಕೊಳ್ಳುತ್ತಿದ್ದ. ನಂತರ ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ತೆಗೆದುಕೊಂಡು ಬರುವಂತೆ ಅಂಗಡಿಗೆ ಕಳುಹಿಸಿ, ಅವರು ವಾಪಸ್ ಬರುವಷ್ಟರಲ್ಲಿ ಪರಾರಿಯಾಗುತ್ತಿದ್ದ. ಈ ಕುರಿತ ದೂರನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗ ಡಿಸಿಪಿ ಡಾ. ರೋಹಿಣಿ ಕಟೋಚ್ ಸೆಪಟ್, ಎಸಿಪಿ ಟಿ. ಮಹದೇವ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಆರೋಪಿ ಮಹದೇವ್ ವಂಚನೆಗೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಕ್ಕಿ ಬಂಧಿಸಲಾಗಿದೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 10 ಪ್ರಕರಣ ಬೆಳಕಿಗೆ ಬಂದಿವೆ. ಆರೋಪಿಯಿಂದ 8.75 ಲಕ್ಷ ರೂ. ಮೌಲ್ಯದ 215 ಗ್ರಾಂ ಚಿನ್ನಾಭರಣ, ಆಟೋ ವಶಕ್ಕೆ ಪಡೆಯಲಾಗಿದೆ.