ವಿಜಯಪುರ: ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.31 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಚ್. ಅಗರಖೇಡ ಹಾಗೂ ಪ್ರಧಾನ ಕಾರ್ಯದರ್ಶಿ ಐ.ಐ. ಮುಶ್ರೀಫ್ ತಿಳಿಸಿದರು.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಡಿ.31 ಬೆಳಗ್ಗೆ 6 ಕ್ಕೆ ಮುಷ್ಕರ ಆರಂಭಗೊಳ್ಳಲಿದೆ. ನೌಕರರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಹ ಸಹಕಾರ ನೀಡಲಿವೆ ಎಂದು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಪ್ರತಿದಿನ ಸುಮಾರು ಒಂದು ಕೋಟಿಗೂ ಹೆಚ್ಚಿನ ಪ್ರಯಾಣಿಕರನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸುವ ಮೂಲಕ ಹಾಗೂ ಶಕ್ತಿ ಯೋಜನೆಯ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿರುವ ಸಾರಿಗೆ ನಿಗಮಗಳ ಒಂದು ಲಕ್ಷಕ್ಕೂ ಅಧಿಕ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷೃ ಧೋರಣೆ ತಾಳಿದೆ. ಹೀಗಾಗಿ ಮುಷ್ಕರ ಅನಿವಾರ್ಯವಾಗಿದೆ ಎಂದರು.
ಸಾರಿಗೆ ನಿಗಮಗಳ ಆಡಳಿತ ವರ್ಗ ಹಾಗೂ ರಾಜ್ಯ ಸರ್ಕಾರಕ್ಕೆ ಸಾರಿಗೆ ನಿಗಮಗಳ ಸಮಸ್ತ ನೌಕರರ ಪರವಾಗಿ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲಾಗಿತ್ತು. ತದನಂತರ ಆಡಳಿತ ವರ್ಗ ಮತ್ತು ಸಾರಿಗೆ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಈಗಾಗಲೇ ಹಲವಾರು ಪತ್ರಗಳನ್ನು ಬರೆಯಲಾಗಿದೆ. ಆದರೂ ಈವರೆಗೂ ಸರ್ಕಾರದಿಂದಾಗಲೀ ಅಥವಾ ಸಾರಿಗೆ ನಿಗಮಗಳ ಆಡಳಿತ ವರ್ಗದಿಂದಾಗಲೀ ಯಾವುದೇ ರೀತಿಯ ಸ್ಪಂದನೆ ಸಿಗದಿರುವುದು ಕಾರ್ಮಿಕರಿಗೆ ತೀವ್ರ ನಿರಾಸೆ ಮೂಡಿಸಿದೆ ಎಂದರು.
ರಾಜ್ಯ ಸರ್ಕಾರವು ಬೇಡಿಕೆಗಳಿಗೆ ನ್ಯಾಯ ದೊರಕಿಸಬಹುದೆಂದು ಸಾರಿಗೆ ನೌಕರರು ಎದುರು ನೋಡುತ್ತಿದ್ದಾರೆ. ಈಗಾಗಲೇ ಹಿಂದಿನ ವೇತನ ಹೆಚ್ಚಳದ ಅವಧಿಯ 38 ತಿಂಗಳ ಬಾಕಿ ಹಣ ಬಂದಿರುವುದಿಲ್ಲ. ಅಲ್ಲದೇ ಬೆಲೆ ಏರಿಕೆಯಿಂದಲೂ ಸಾರಿಗೆ ನೌಕರರು ತತ್ತರಿಸುತ್ತಿದ್ದು, ನಿಗಮಗಳ ನೌಕರರು ಅತೃಪ್ತಿಯಿಂದ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಅದರ ಫಲವೇ ಮುಷ್ಕರದ ನಿರ್ಧಾರ ಎಂದರು.
ಜಿಲ್ಲಾ ಸಂಚಾಲಕ ಜಿ.ಎಂ. ಬಿರಾದಾರ, ರಮೇಶ ಮಡ್ಡಿಮನಿ, ಮೋಹನ ಗುನ್ನಾಪುರ, ಯುವರಾಜ್ ಪರ್ನಾಕರ, ಈರಣ್ಣ ತೊಂಡಿಕಟ್ಟಿ, ಎಚ್.ಬಿ. ಬಬಲೇಶ್ವರ, ಬಿ.ಎಂ. ಮರಾಠೆ, ಅರುಣಕುಮಾರ ಹಿರೇಮಠ, ಎಸ್.ಬಿ. ಪಟ್ಟಣಶೆಟ್ಟಿ, ಶಿವಾನಂದ ಬೈಚಬಾಳ, ಎಂ.ಎನ್. ನದಾಫ್, ಮಸ್ತಾಕ್ ಹುಂಡೇಕಾರ ಮತ್ತಿತರರಿದ್ದರು.