ಬೇತಮಂಗಲ: ಬೇತಮಂಗಲ ನೀರು ಸರಬರಾಜು ಕೇಂದ್ರದ ಅಧೀನದ ಭೂಮಿಯಲ್ಲಿ ನಾಡ ಕಚೇರಿ ಮತ್ತು ಗ್ರಾಪಂ ಕಟ್ಟಡಗಳ ನಿರ್ಮಾಣಕ್ಕೆ ಸ್ವತ@ ಕೋಲಾರ ಜಿಲ್ಲಾಧಿಕಾರಿ ಸಮ್ಮುಖದಲ್ಲೆ ಚಾಲನೆ ನೀಡಿರುವ ವಿವಾದ ಈಗ ಬೆಂಗಳೂರಿನಲ್ಲಿರುವ ಜಲಮಂಡಳಿ ಮೆಟ್ಟಿಲೇರಿದೆ.
ಬೆಂಗಳೂರಿನ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ ನೇತೃತ್ವದಲ್ಲಿ ಶನಿವಾರ ಕರೆದಿದ್ದ ಸಭೆಯಲ್ಲಿ ಕೆಜಿಎ್ ನೀರು ಸರಬರಾಜು ಕೇಂದ್ರದ ಸಹಾಯಕ ಅಭಿಯಂತ ಶಿವಕುಮಾರ್ಗೆ ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಸೂಚಿಸಲಾಗಿದೆ.
ಬೇತಮಂಗಲದ ಕೆಜಿಎ್ ನೀರು ಸರಬರಾಜು ಕೇಂದ್ರ ವ್ಯಾಪ್ತಿಯಲ್ಲಿರುವ ದೊಡ್ಡ ಕೆರೆ, ನೀರು ಸರಬರಾಜು ಕೇಂದ್ರ ಸೇರಿ ಅಧೀನದಲ್ಲಿರುವ ಮತ್ತು ಮಂಡಳಿ ನಿರ್ವಹಣೆ ಮಾಡುತ್ತಿರುವ ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ಅಧಿಕಾರಿಗಳು ಎಂ.ಡಿ ಸೆಲ್ವಮಣಿಗೆ ಸಲ್ಲಿಸಿದರು. ಜತೆಗೆ ಗುರುವಾರ ಕೋಲಾರ ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಬೇತಮಂಗಲ ಗ್ರಾಪಂ ಆಡಳಿತ ಮಂಡಳಿ ಮಧ್ಯದ ಜಟಾಪಟಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ಮುಂದಿನ ವಾರ ಸಭೆ
ಎಂಡಿ ಸೆಲ್ವಮಣಿ ಮಾತನಾಡಿ, ಆಸ್ತಿ ಸರ್ಕಾರದ್ದು ಎನ್ನುವ ಕಾರಣಕ್ಕೆ ವಿವಾದ ಮಾಡುವುದು ಬೇಡ. ಕಂದಾಯ ಇಲಾಖೆ ಕಟ್ಟಡ ಅಥವಾ ಗ್ರಾಪಂ ಕಟ್ಟಡ ನಿರ್ಮಾಣ ಮಾಡುವುದಾದರೆ ಅದಕ್ಕೆ ನಮ್ಮ ಮಂಡಳಿಯಿಂದ ಅನುಮತಿ ಪಡೆದು ಮಾಡಿಕೊಳ್ಳಲಿ. ಅದುಬಿಟ್ಟು ನಮ್ಮ ಸ್ವಾಧಿನದಲ್ಲಿರುವ ಭವನದ ಆಸ್ತಿಯನ್ನು ಬಳಕೆ ಮಾಡುವುದಲ್ಲದೇ ಅತಿಕ್ರಮಣ ಸಲ್ಲ. ಆಸ್ತಿ ವಿವಾದವು ಸರ್ಕಾರದ ಅಧೀನದಲ್ಲಿರುವ ಎರಡು ಇಲಾಖೆಗಳ ಮಧ್ಯೆ ಇರುವ ಕಾರಣ ಒಂದೆರಡು ದಿನಗಳಲ್ಲಿ ವರದಿ ನೀಡಿದರೆ ಮುಂದಿನ ಸೋಮವಾರ ಅಥವಾ ಮಂಗಳವಾರ ಬೆಂಗಳೂರಿನ ಜಲಭವನದಲ್ಲೇ ಜಿಲ್ಲಾಧಿಕಾರಿಗಳು ಸೇರಿ ಈ ವ್ಯಾಪ್ತಿಗೆ ಬರುವ ಇಲಾಖೆಗಳ ಮುಖ್ಯಸ್ಥರ ನೇತೃತ್ವದಲ್ಲಿ ಮುಂದಿನ ವಾರ ಸಭೆ ನಡೆಸಿ, ಬಳಿಕ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದರು. ಸಭೆಯಲ್ಲಿ ಎಂಡಿ ಸೆಲ್ವಮಣಿ, ಮುಖ್ಯ ಇಂಜನಿಯರ್ ಪ್ರವಿಣ್ ಲಿಂಗಯ್ಯ, ಬೇತಮಂಗಲ ನೀರು ಸರಬರಾಜು ಕೇಂದ್ರ ಎಇಇ ಶಿವಕುಮಾರ್ ಹಾಗೂ ಇತರರು ಇದ್ದರು.
ಏನಿದು ಪ್ರಕರಣ?: ನ.28ರಂದು ಬೇತಮಂಗಲ ನೀರು ಸರಬರಾಜು ಕೇಂದ್ರದ ಆವರಣದಲ್ಲಿದ್ದ ಹಳೆ ಕಟ್ಟಡ ನೆಲಸಮ ಮಾಡುತ್ತಿದ್ದಾಗ ಕೇಂದ್ರದ ಎಇಇ ಶಿವಕುಮಾರ್ ಮತ್ತು ಸಿಬ್ಬಂದಿ ಅಡ್ಡಿಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸ್ಥಳಕ್ಕೆ ಬಂದು, ಎಇಇ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಹಳೇ ಕಟ್ಟಡ ನೆಲಸಮ ಮಾಡಿಸಿ, ನಾಡಕಚೇರಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಳ್ಳಬೇಕು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೆಲಸ ನಡೆಯುತ್ತಿವೆ.