ರಾಯಚೂರು ರೈತರಿಗೆ ಅನುಕೂಲವಾಗುವಂತಹ ಯೋಜನೆಗಳ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಸರ್ಕಾರದಿಂದ ಜನರಿಗಾಗಿ ಮಾಡಿರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಆಗ ಮಾತ್ರ ಯೋಜನೆಯನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯು ಎಲ್ಲಾ ರೀತಿಯಿಂದಲೂ ಅಭಿವೃದ್ದಿ ಹೊಂದುತ್ತಿದೆ. ಆದರೆ ಕೃಷಿ ಮತ್ತು ತೋಟಗಾರಿಕೆಯಲ್ಲಿ ಮಾತ್ರ ಏಕೆ ಹಿಂದುಳಿಯುತ್ತಿದೆ ಎಂಬುವುದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಹೆದ್ದಾರಿಗಳು ನಿರ್ಮಾಣವಾಗುತ್ತಿದ್ದು, ಎಲ್ಲಾ ತಾಲೂಕುಗಳಿಗೆ ಸಂಪರ್ಕ ಸಾಧಿಸಬಹುದಾಗಿದೆ.
ಈ ಅನುಕೂಲವನ್ನು ಬಳಸಿಕೊಂಡು, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಬೇರೆ ಬೇರೆ ರಾಜ್ಯಗಳಿಗೆ ಕಳಿಸಬಹುದಾಗಿದೆ. ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿತನ ತೋರದೆ ಕಾರ್ಯ ನಿರ್ವಹಿಸಬೇಕು.
ಈ ಹಿಂದೆ ನಡೆದಿದ್ದ ದಿಶಾ ಸಭೆ ಇಲಾಖೆಗಳಿಗೆ ನೀಡಲಾದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿರಬೇಕು. ಮುಂದಿನ ದಿನಗಳಲ್ಲಿ ಪ್ರಗತಿ ಸಾಧಿಸುತ್ತೇವೆ ಎಂಬ ಮಾತು ಸಲ್ಲದು. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಜಿಲ್ಲೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಬಿತ್ತನೆ ಬೀಜದ ಲಭ್ಯತೆ, ರಸಗೊಬ್ಬರದ ಲಭ್ಯತೆ, ರಸಗೊಬ್ಬರದ ಕೊರತೆಯಿದ್ದರೆ ಆಯಾ ಬೆಳೆಗೆ ಬಳಸಲಾಗುವ ಪರ್ಯಾಯ ಗೊಬ್ಬರಗಳ ಬಗ್ಗೆ ಮಾಹಿತಿಯನ್ನು ಮುಟ್ಟಿಸಬೇಕು. ಪ್ರಧಾನಮಂತ್ರಿ ಕೃಷಿ ಸಿಂಚಾನ ಯೋಜನೆಯಲ್ಲಿ ವಾರ್ಷಿಕ ಗುರಿ 22.86 ಕೋಟಿ ರೂ.ಗಳ ಆರ್ಥಿಕ ಗುರಿಯನ್ನು ಹೊಂದಲಾಗಿದ್ದು, 12 ಕೋಟಿ ರೂ.ಗಳ ಅನುಧಾನ ಬಿಡುಗಡೆಯಾಗಿದೆ ಆದರೆ ಇಲಾಖೆಯಿಂದ ಯಾವುದೆ ಸಾಧನೆಯಾಗಿಲ್ಲ. ಈ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದರು.
ತೋಟಗಾರಿಕೆ ಇಲಾಖೆಯಲ್ಲಿ ತಾಳೆ ಬೆಳೆ ಯೋಜನೆಯಲ್ಲಿ ಆರ್ಥಿಕ ಹಾಗೂ ಭೌತಿಕ ಸಾಧನೆ ಅತ್ಯಂತ ಕಡಿಮೆಯಿದೆ. ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು. ತಾಳೆ ಬೆಳೆ ಯೋಜನೆಯ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯನ್ನು ಮುಟ್ಟಿಸಬೇಕು ಎಂದರು.
ಆಂಧ್ರಪ್ರದೇಶ ಹಾಗೂ ಕೋಲಾರದಲ್ಲಿ ಮಾವು ಬೆಳೆಯ ಪ್ರಮಾಣ ಕುಸಿಯಲು ಕಾರಣ ಅಲ್ಲಿ ಮಾವು ಸಂಸ್ಕರಣೆ ಘಟಕಗಳಿಲ್ಲ. ರಾಯಚೂರು ಜಿಲ್ಲೆಯಲ್ಲಿಯೂ ಮಾವನ್ನು ಎತೇಚ್ಚವಾಗಿ ಬೆಳೆಲಾಗುತ್ತದೆ. ಇಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು, ಯೋಜನೆಯನ್ನು ರೂಪಿಸಬೇಕು ಇದರಿಂದ ಮಾವು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರದ ಕೊರತೆಯಿದೆ. ಆದರೆ ರೈತರು ಡಿಎಪಿ ಗೊಬ್ಬರವನ್ನು ಹೆಚ್ಚಾಗಿ ಕೇಳುತ್ತಾರೆ. ಮುಂಗಾರು ಆರಂಭವಾಗಿದ್ದರಿಂದ ಬೇಡಿಕೆ ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಒಟ್ಟು 2.29 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಅದರಲ್ಲಿ ಶೇ.12 ರಷ್ಟು ಡಿಎಪಿ ರಸಗೊಬ್ಬರದ ಬೇಡಿಕೆಯಿದೆ. ಡಿಎಪಿ ರಸಗೊಬ್ಬರದ ಬದಲಾಗಿ ಕಾಂಪ್ಲೆಕ್ಸ್ನಂತಹ ಪರ್ಯಾಯ ರಸಗೊಬ್ಬರಗಳ ಕುರಿತು ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಎ.ವಸಂತ ಕುಮಾರ,ಜಿಲ್ಲಾಧಿಕಾರಿ ಕೆ.ನಿತೀಶ, ಜಿಪಂ ಸಿಇಓ ರಾಹುಲ್ ತುಕಾರಾಂ ಪಾಂಡೈ, ಎಸ್ಪಿ ಎಂ.ಪುಟ್ಟಮಾದಯ್ಯ ಸೇರಿ ಅನೇಕರು ಇದ್ದರು.