ನಾಲತವಾಡ : ಪಟ್ಟಣದಲ್ಲಿ ಬಹಳ ವರ್ಷಗಳ ನಂತರ ಮತ್ತೊಮ್ಮೆ ಧರ್ಮ ಜಾಗೃತಿಗಾಗಿ ಜ. 23ರಂದು ಬರುತ್ತಿದ್ದು, ಊರಿನವರೆಲ್ಲರಿಗೂ ಸಹಕರಿಸುತ್ತಿರುವುದು ಸಂತಸ ತರುವಂಥದ್ದು ಎಂದು ಶಿರಹಟ್ಟಿಯ ಜಗದ್ಗುರು ಶ್ರೀ ಕೀರೇಶ್ವರ ಮಠದ ಪೀಠಾಧಿಪತಿ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಶುಕ್ರವಾರ ಸಂಜೆ ಪಟ್ಟಣಕ್ಕೆ ಭೇಟಿ ನೀಡಿ ಪ್ರವಚನ ನಡೆಯಲಿರುವ ಶ್ರೀ ವೀರೇಶ್ವರ ಕಾಲೇಜು ಮೈದಾನ ಸ್ಥಳ ಪರಿಶೀಲಿಸಿ ಕೆಲವು ಸಲಹೆ ಸೂಚನೆ ನೀಡಿದ ಶ್ರೀಗಳು, ಈ ಹಿಂದೆ ನಾಲತವಾಡಕ್ಕೆ 1989ರಂದು ಬಂದಿದ್ದೆವು. ಈಗ ಮತ್ತೆ ಜ. 23 ರಿಂದ 21 ದಿನಗಳ ಕಾಲ ಅಂದರೆ ಫೆ. 21ರವರೆಗೆ ನಮ್ಮ ನೇತೃತ್ವದಲ್ಲಿ ವೀರೇಶ್ವರ ಶರಣರ ಕುರಿತಾದ ಪ್ರವಚನ ಪ್ರಾರಂಭಿಸಲು ಊರಿನ ಹಿರಿಯರೆಲ್ಲ ಒಟ್ಟಾಗಿ ತೀರ್ಮಾನಿಸಿದ್ದಾರೆ. ಇದು ಅತ್ಯಂತ ಶ್ಲಾನೀಯ ಎಂದರು.
ನಾಲತವಾಡದ ಶರಣ ವೀರೇಶ್ವರರು, ಶರಣೆ ಗುರುದೇವಿ ತಾಯಿಯವರ ಪವಾಡ ಅತ್ಯದ್ಭುತ. ಅವರ ಜಾಗೃತ ಆತ್ಮ ನಮ್ಮನ್ನು ಇಲ್ಲಿಗೆ ಸೂಜಿಗಲ್ಲಿನಂತೆ ಎಳೆದು ತಂದಿದೆ. ಈ ನೆಲದಲ್ಲಿ ಪ್ರವಚನ ನಡೆಸಿಕೊಡುವುದು ನಮಗೆ ಸಂತಸ ತರುವಂಥದ್ದು. ಜನ ಎಷ್ಟು ಸೇರುತ್ತಾರೆ ಎನ್ನುವುದಕ್ಕಿಂತಲೂ ಎಷ್ಟು ಜನ ಪ್ರವಚನದ ತತ್ವಗಳನ್ನು ಪಾಲಿಸುತ್ತಾರೆ ಅನ್ನೋದು ಮುಖ್ಯವಾಗುತ್ತದೆ ಎಂದು ಹೇಳಿದರು.
ಪಟ್ಟಣದಲ್ಲಿ ಬಹಳ ವರ್ಷಗಳ ನಂತರ ಮತ್ತೊಮ್ಮೆ ಧರ್ಮ ಜಾಗೃತಿ ಕಾರ್ಯ ನಡೆಯುತ್ತಿರುವುದು ಶ್ಲಾನೀಯ. ಇದಕ್ಕೆ ಊರಿನವರೆಲ್ಲರೂ ಸಹಕರಿಸುತ್ತಿರುವುದು ಸಂತಸ ತರುವಂಥದ್ದು, ಪ್ರವಚನ ಆಲಿಸಲು ಬರುವ ಭಕ್ತರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲು ಸಲಹೆ ನೀಡಿದ ಶ್ರೀಗಳು, ಸಂಟಕರಿಂದ ನಿತ್ಯ ಬಂದು ಹೋಗಲು ಮತ್ತು ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ನೀರಿನ ವ್ಯವಸ್ಥೆ ಮುಂತಾದ ಅಗತ್ಯ ತಯಾರಿಯ ಮಾಹಿತಿಯನ್ನು ಪಡೆದುಕೊಂಡರು.
ಯುವಕ ಕಾಶಿನಾಥ ಬಿರಾದಾರ ಹೊರ ತಂದಿರುವ 2025ನೇ ಸಾಲಿನ ದಿನದರ್ಶಿಕೆ ಬಿಡುಗಡೆಗೊಳಿಸಿದರು. ಶರಣ ವೀರೇಶ್ವರ ಸಹಕಾರಿ ಬ್ಯಾಂಕ್ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಗೊಂಡ ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್. ಪಾಟೀಲ, ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಎಂ.ಬಿ. ಅಂಗಡಿ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸ್ವಾಮೀಜಿಯವರು ಆಶಿರ್ವದಿಸಿದರು.
ಮಸಬಿನಾಳದ ಸಿದ್ಧರಾಮ ಸ್ವಾಮೀಜಿ, ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ, ಕುಕನೂರಿನ ಚನ್ನಮಲ್ಲ ಸ್ವಾಮೀಜಿ, ಲೊಟಗೇರಿಯ ಗುರುಮೂರ್ತಿ ದೇವರು ಸಾನ್ನಿಧ್ಯ ವಹಿಸಿದ್ದರು. ಗಣ್ಯರಾದ ಗುರುಪ್ರಸಾದ ದೇಶಮುಖ, ಸಂಗಣ್ಣ ದೇಶಮುಖ, ಎ.ಜಿ. ಗಂಗನಗೌಡರ, ಶಿವಪ್ಪಗೌಡ ತಾತರಡ್ಡಿ, ಮುತ್ತು ಸಾಹುಕಾರ ಅಂಗಡಿ, ಡಿ.ಬಿ. ವಡವಡಗಿ ವೇದಿಕೆಯಲ್ಲಿದ್ದರು.
ಶಶಿ ಬಂಗಾರಿ, ಬಸವರಾಜ ತಿರುಮುಖೆ, ಅಮರಪ್ಪ ಬೂದಿಹಾಳ, ಸಂಗಮೇಶ ಮೇಟಿ, ಬಸವರಾಜ ತಳವಾರ, ಸುರೇಶ ದೊರೆ, ಹಲವರು ಇದ್ದರು. ಶಿಕ್ಷಕ ರಾಜು ಹಾದಿಮನಿ ಕಾರ್ಯಕ್ರಮ ನಿರ್ವಹಿಸಿದರು.