ಬೆಂಗಳೂರು: ರಾಜಕಾರಣಿಗಳು ಪಕ್ಷಗಳ ಗುಲಾಮರಾಗಿದ್ದು, ಯಾವ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಸದನದಲ್ಲಿ ಮುಕ್ತವಾಗಿ ಮಾತನಾಡಲು ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಡಾ.ರಾಮಮನೋಹರ ಲೋಹಿಯಾ ಜನ್ಮದಿನ ನಿಮಿತ್ತ ಭಾರತ ಯಾತ್ರಾ ಕೇಂದ್ರ ಹಾಗೂ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಸಹಯೋಗದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ ವಿಚಾರ ವೇದಿಕೆ ಭಾನುವಾರ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ “ಲೋಹಿಯಾ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಕೋಮುವಾದ, ದ್ವೇಷ, ಅಸೂಯೆ ವಾತಾವರಣ ಹೆಚ್ಚಿದೆ. ಇದು ನಮ್ಮ ಸಮಾಜ, ದೇಶಕ್ಕೆ ಒಳ್ಳೆಯದಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಕೇಂದ್ರ ಸರ್ಕಾರ ಇಂತಹ ಪರಿಸ್ಥಿತಿ ತಂದಿಟ್ಟಿದೆ. ಅದನ್ನು ಮಟ್ಟ ಹಾಕಲು ಯೋಗೇಂದ್ರ ಯಾದವ್ ಅವರಂತಹ ಚಿಂತಕರಿಂದ ಸಾಧ್ಯ ಎಂದರು.
ಸಾಮಾಜಿಕ ಹೋರಾಟಗಾರ ಡಾ.ಯೋಗೇಂದ್ರ ಯಾದವ್ ಮಾತನಾಡಿ, ವೈವಿಧ್ಯಮಯ ರಾಷ್ಟ್ರವಾಗಿರುವ ಭಾರತದಲ್ಲಿ ದಕ್ಷಿಣದ ರಾಜ್ಯಗಳಂತೆ ಉತ್ತರದ ಹಿಂದಿ ಭಾಷೆಯ ರಾಜ್ಯಗಳು ತ್ರಿಭಾಷಾ ಸೂತ್ರ ಪಾಲಿಸಬೇಕು. 3ನೇ ಭಾಷೆಯಾಗಿ ಕನ್ನಡ ಸೇರಿ ಇತರ ಭಾಷೆ ಕಲಿಯಬೇಕು. ನಾನು ತ್ರಿಭಾಷಾ ಸೂತ್ರದ ಪರ. ಆದರೆ, ಉತ್ತರದ ಹಿಂದಿ ಭಾಷಿಕರು ಬೇರೆ ಭಾಷೆ ಕಲಿಯುವುದಿಲ್ಲ. ಅವರಲ್ಲಿ ಹಿಂದಿ ರಾಷ್ಟ್ರ ಭಾಷೆ ಎಂಬ ಭಾವನೆ ಇದೆ ಎಂದರು.
ಬಿಜೆಪಿಗೆ ಅವಕಾಶ ನೀಡಬೇಡಿ: ದೇಶಕ್ಕೆ ರಾಷ್ಟ್ರ ಭಾಷೆ ಇಲ್ಲ. ಉತ್ತರ ಭಾರತೀಯರು ಹಿಂದಿಯೇತರ ಭಾಷೆಗಳನ್ನು ಕಲಿಯುವುದಿಲ್ಲ ಎಂದಾಗ ಹಿಂದಿಯೇತರ ಭಾಷೆಯ ಜನ ಕೆರಳುತ್ತಾರೆ. ಆಗ ಹಿಂದಿ&ಕನ್ನಡ, ಹಿಂದಿ-ತಮಿಳು ಕಿತ್ತಾಟ ಆರಂಭವಾಗುತ್ತವೆ. ಆದರೆ, ನಿಜವಾಗಿ ಹೋರಾಟ ನಡೆಯಬೇಕಿರುವುದು ಅಸಮಾನತೆಯ ಭಾಷೆ ಇಂಗ್ಲಿಷ್ ವಿರುದ್ಧ. ಅದು ಬೇರೆ ಭಾಷೆಗಳಿಗಿಂತ ಮೇಲು ಎಂಬ ಭಾವನೆ ಇದೆ ಎಂದು ಯೋಗೇಂದ್ರ ಯಾದವ್ ಹೇಳಿದರು. ವಚನಕಾರರು, ಸಮಾಜವಾದ, ರೈತ ಮತ್ತು ದಲಿತ ಹೋರಾಟಗಳ ನಾಡು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು. ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಗಾಂಧಿ ಮಾದರಿ, ಎಡಪಂಥೀಯ ಚಿಂತನೆಗಳ ಹೋರಾಟ ನಡೆಯುವುದಿಲ್ಲ. ಏನಿದ್ದರೂ ಸಮಾನತೆ ಸಾರುವ, ನಿಜವಾದ ರಾಷ್ಟ್ರಪ್ರೇಮದ ಹೋರಾಟ ಆಗಬೇಕು. ಲೋಹಿಯಾ ಅವರನ್ನು ಹೊಸ ತಲೆಮಾರು ಮರೆತಿದೆ. ಅವರನ್ನು ಓದಿಕೊಂಡು ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ: ಸಾಮಾಜಿಕ ಹೋರಾಟಗಾರ ಡಾ.ಯೋಗೇಂದ್ರ ಯಾದವ್ಗೆ ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ತರ ಪ್ರದೇಶ ಸಂಸದ ಡಾ.ರಾಜೀವ್ ರಾಯ್, ಭಾರತ ಯಾತ್ರಾ ಕೇಂದ್ರ ಅಧ್ಯ ಡಾ.ಬಿ.ಎಲ್.ಶಂಕರ್, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ನ ವೀಣಾ ಮಹಾಂತೇಶ್, ವಿಧಾನಪರಿಷತ್ತಿನ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಮತ್ತಿತರರಿದ್ದರು.
ಮಧುಬಲೆ, ಕುತೂಹಲದ ಅಲೆ; ಸಿಎಂ ಸಿದ್ದು, ಖರ್ಗೆ ರಹಸ್ಯ ಸಮಾಲೋಚನೆ|secret talks