ಮೈಸೂರು: ಅರಿವು ಕೇಂದ್ರಗಳೆಂದು ಕರೆಯುವ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮತ್ತು ಉನ್ನತ ಮಟ್ಟದಲ್ಲಿ ಸೌಲಭ್ಯ ಒದಗಿಸುವ ಕೆಲಸವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಶಿಕ್ಷಣ ಸಂಸ್ಥೆ ವತಿಯಿಂದ ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಸೋಮವಾರ ಗ್ರಾಮೀಣ ಡಿಜಿ ವಿಕಸನ ಕಾರ್ಯಕ್ರಮದಡಿ ಜಿಲ್ಲೆಯ 22 ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಿಗೆ ಡಿಜಿಟಲ್ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿವಿಧ ಎನ್ಜಿಒಗಳ ಸಹಕಾರದೊಂದಿಗೆ ಗ್ರಂಥಾಲಯಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ 64 ಗ್ರಾಪಂ ಗ್ರಂಥಾಲಯಗಳಿಗೆ ಈಗಾಗಲೇ ಮೂರು ಹಂತಗಳಲ್ಲಿ ಡಿಜಿಟಲ್ ಸಲಕರಣೆಗಳ ವಿತರಿಸಲಾಗಿದೆ. ಅದರಂತೆ ನಾಲ್ಕನೇ ಹಂತದಲ್ಲಿ ನಂಜನಗೂಡು-5 ಗ್ರಂಥಾಲಯ, ತಿ.ನರಸೀಪುರ-6 ಗ್ರಂಥಾಲಯ, ಮೈಸೂರು-5, ಪಿರಿಯಾಪಟ್ಟಣ-3, ಸರಗೂರು-3 ಸೇರಿ ಒಟ್ಟು 22 ಗ್ರಾಮ ಪಂಚಾಯಿತಿಗಳಿಗೆ ವಿತರಿಸಲಾಗುತ್ತಿದೆ ಎಂದರು.
ಗ್ರಂಥಾಲಯಕ್ಕೆ ಆ ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯವಿರುವ ಬೇಡಿಕೆಯನುಸಾರ ಪುಸ್ತಕ ಹಾಗೂ ಸ್ಪರ್ಧಾತ್ಮಕ ಪುಸ್ತಕ, ನಿಯತಕಾಲಿಕೆಗಳನ್ನು ಒದಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಂಥಪಾಲಕರು ಗ್ರಾಪಂ ಪಿಡಿಒಗಳೊಂದಿಗೆ ಚರ್ಚಿಸಿ ಪುಸ್ತಕಗಳನ್ನು ಖರೀದಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಸಲಕರಣೆಗಳನ್ನು ಬಳಸುವ ಪರಿ ಹೇಗೆ ಎಂಬುದರ ಬಗ್ಗೆ ಒಂದು ದಿನದ ತರಬೇತಿ ನಡೆಯಲಿದೆ. ಅದರಂತೆ ಗ್ರಂಥಾಲಯಕ್ಕೆ ಒದಗಿಸುತ್ತಿರುವ ಉಪಕರಣಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಿ ಎಂದು ಸಲಹೆ ನೀಡಿದರು.
ಶಿಕ್ಷಣ ಸಂಸ್ಥೆ ಜಿಲ್ಲಾ ವ್ಯವಸ್ಥಾಪಕ ಪ್ರಸನ್ನಕುಮಾರ್ ಮಾತನಾಡಿ, ಆರ್ಡಿಪಿಆರ್ ಮತ್ತು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿಯನ್ನು ಸಂಪೂರ್ಣ ಡಿಜಿಟಲ್ ಸಾಕ್ಷರತೆ ಮಾಡಲು ಮುಂದಾಗಿದ್ದು, ಅದರಂತೆ ಪ್ರತಿಯೊಂದು ಮನೆ ಮನೆ ಸರ್ವೇ ಮಾಡಿ ಡಿಜಿಟಲ್ ಸಾಕ್ಷರತೆ ಪ್ರಮಾಣ ಕ್ರೋಡೀಕರಿಸಲಾಗುತ್ತಿದೆ. ಸಾಕ್ಷರತೆ ಪ್ರಮಾಣ ಕಡಿಮೆ ಇರುವ ಮನೆಗಳಿಗೆ ಭೇಟಿ ನೀಡಿ ತರಬೇತಿ ನೀಡಲಾಗುವುದು. ಈ ಕಾರ್ಯಕ್ರಮ ಯಶಸ್ವಿಯಾದರೆ 236 ಗ್ರಾಮ ಪಂಚಾಯಿತಿಗಳಿಗೂ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದರು.
ಡಿಜಿಟಲ್ ಸಲಕರಣೆಗಳನ್ನು ಗ್ರಾಪಂನ ಪಿಡಿಒ ಮತ್ತು ಗ್ರಂಥಪಾಲಕರಿಗೆ ಕೆ.ಎಂ.ಗಾಯತ್ರಿ ವಿತರಿಸಿದರು. ಜಿಪಂ ಸಹಾಯಕ ಕಾರ್ಯದರ್ಶಿ ವಿ.ಪಿ.ಕುಲದೀಪ್ ಇತರರು ಇದ್ದರು.