ನವದೆಹಲಿ: ಪಾಕಿಸ್ತಾನದೊಂದಿಗಿನ ಯುದ್ಧ ಸನ್ನಿವೇಶದ ಬಗ್ಗೆ ಮೊದಲೇ ಹೇಳಲು ತುಂಬಾ ಕಷ್ಟವಾಗುತ್ತದೆ. ಆದರೆ, ಯುದ್ಧ ಸನ್ನಿವೇಶ ಸೃಷ್ಟಿಯಾಗಲಿ, ಬಿಡಲಿ ನಮ್ಮೆಲ್ಲಾ ರಕ್ಷಣಾ ಪಡೆ ಸದಾ ಸನ್ನದ್ಧವಾಗಿರುತ್ತವೆ ಎಂದು ಮೂರು ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
ತಮಿಳುನಾಡಿನ ತಂಜಾವೂರ್ನ ವಾಯುನೆಲೆಯಲ್ಲಿ ಸುಖೋಯ್-30 ಎಂಕೆಐ ಮೊದಲಯುದ್ಧ ವಿಮಾನವನ್ನು ಸೇನೆಗೆ ಪರಿಚಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾಕ್ ಮತ್ತು ಭಾರತ ನಡುವಿನ ಯುದ್ಧ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿ, ಯುದ್ಧ ಸನ್ನಿವೇಶ ಎದುರಾಗಲಿ, ಬಿಡಲಿ ನಮ್ಮ ಸೇನೆ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುತ್ತದೆ ಎಂದರು. ನಮಗೆ ನೀಡುವ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನಾವು ಸದಾ ತಯಾರಿದ್ದೇವೆ ಎಂದು ಹೇಳಿದ್ದಾರೆ.
ರಕ್ಷಣಾ ವ್ಯವಸ್ಥೆಯ ಸಮಗ್ರತೆ ನನ್ನ ಹೊಸ ಪಾತ್ರದ ಪ್ರಮುಖ ಗುರಿಯಾಗಿದೆ. ಈ ಒಂದು ಕಾರಣಕ್ಕಾಗಿ ಸಿಡಿಎಸ್ ಹುದ್ದೆಯನ್ನು ಸೃಷ್ಟಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ತಂಜಾವೂರ ವಾಯುನೆಲೆಯಲ್ಲಿ ಇಂದು ಸುಖೋಯ್-30 ಎಂಕೆಐ ಯುದ್ಧ ವಿಮಾನವನ್ನು ಪರಿಚಯಿಸಲಾಯಿತು. ಈ ಮೂಲಕ ಹೈಪ್ರೋಫೈಲ್ ಯುದ್ಧ ವಿಮಾನ ಹೊಂದಿದೆ ದಕ್ಷಿಣ ಭಾರತದ ಮೊದಲ ವಾಯುನೆಲೆ ಎಂಬ ಕೀರ್ತಿಗೆ ಭಾಜವಾಯಿತು.
ಸ್ಕ್ವಾಡ್ರನ್ ಆಫ್ ಸುಖೋಯ್-30 ಎಂಕೆಐ ಯುದ್ಧ ವಿಮಾನ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಯುದ್ಧ ವಿಮಾನವನ್ನು ವಾಯುಸೇನಾ ಮುಖ್ಯಸ್ಥರು ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪರಿಚಯಿಸಲಾಯಿತು. (ಏಜೆನ್ಸೀಸ್)