ನವದೆಹಲಿ: 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧ ಜೆಎನ್ಯುದಲ್ಲಿ ಪ್ರತಿಭಟನೆಯಾಗಿತ್ತು. ಆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆಎನ್ಯುದ ಅಂದಿನ ವಿದ್ಯಾರ್ಥಿ ಸಂಘಟನೆ ಮುಖ್ಯಸ್ಥ ಸೀತಾರಾಮ್ ಯೆಚೂರಿಗೆ ಇಂದಿರಾ ಗಾಂಧಿಯವರು ಯೂನಿವರ್ಸಿಟಿಗೆ ಆಗಮಿಸಿ ಹೊಡೆದಿದ್ದರು. ಅಲ್ಲದೆ ಸಾರ್ವಜನಿಕವಾಗಿ ಕ್ಷಮೆ ಕೇಳಿಸಿದ್ದರು ಎಂಬ ವಿಷಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅದಕ್ಕೆ ಸಂಬಂಧಪಟ್ಟಂತೆ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಇಂದಿರಾಗಾಂಧಿಯವರು ನೆರೆದಿರುವ ಹಲವು ಜನರ ಎದುರು ಕೈಕಟ್ಟಿಕೊಂಡು ನಿಂತಿದ್ದಾರೆ. ಅವರ ಪಕ್ಕದಲ್ಲಿ ಸೀತಾರಾಮ್ ಯೆಚೂರಿ(ಸಿಪಿಐ(ಎಂ)ನ ಮುಖ್ಯಸ್ಥ)ಯವರು ನಿಂತು ಏನನ್ನೋ ಓದುತ್ತಿರುವುದನ್ನು ಫೋಟೋದಲ್ಲಿ ನೋಡಬಹುದು.
ಇದೇ ಫೋಟೋವನ್ನು ದೇಶಭಕ್ತ್, ದಿ ಪ್ಯಾಟ್ರಿಯಾಟ್ ಎಂಬ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಅಂದು ಇಂದಿರಾಗಾಂಧಿ ಸೀದಾ ಜೆಎನ್ಯುಕ್ಕೆ ಬಂದು ಸೀತಾರಾಮ್ ಯೆಚೂರಿ ಅವರಿಗೆ ಹೊಡೆದು, ರಾಜೀನಾಮೆ ನೀಡುವಂತೆ ಆದೇಶಿಸಿದ್ದರು. ಎಲ್ಲರ ಎದುರು ಕ್ಷಮಾಪಣಾ ಪತ್ರ ಓದಿಸಿದ್ದರು ಎಂದು ಬಿಂಬಿಸಲಾಗಿತ್ತು. ಅಷ್ಟೇ ಅಲ್ಲದೆ, ಇಂದಿರಾಗಾಂಧಿಯವರು ಕಮ್ಯೂನಿಸ್ಟರಿಗೆ ನೀಡುತ್ತಿದ್ದ ಶಿಕ್ಷೆ ಇಷ್ಟು ಕಠಿಣವಾಗಿತ್ತು. ಅವರೆದುರು ಅಮಿತ್ ಷಾ ಏನೇನೂ ಅಲ್ಲ, ತೀರ ಸಾಧು ಎನ್ನಿಸುತ್ತಾರೆ ಎಂದು ಕ್ಯಾಪ್ಷನ್ ಬರೆಯಲಾಗಿತ್ತು. ಹಲವರು ಶೇರ್ ಮಾಡಿಕೊಂಡಿದ್ದರು.
ಜೆಎನ್ಯುದಲ್ಲಿ ಸಧ್ಯ ನಡೆಯುತ್ತಿರುವ ಹಿಂಸಾಚಾರ, ಪ್ರತಿಭಟನೆಯ ಬೆನ್ನಲ್ಲೇ ಇಂತಹ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದವು.
ಆದರೆ ಸತ್ಯ ಬೇರೆ ಇದೆ. ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಯಲಾದ ಸತ್ಯ ಬೇರೆಯೇ ಇದೆ. ಈ ಫೋಟೋ ಜೆಎನ್ಯುಗೆ ಸಂಬಂಧಪಟ್ಟದ್ದು ಅಲ್ಲವೇ ಅಲ್ಲ ಎಂಬುದು ಸಾಬೀತಾಗಿದೆ.
ಇದು 1975ರಲ್ಲಿ ತೆಗೆದ ಫೋಟೋ ಅಲ್ಲ, ಬದಲಿಗೆ ತುರ್ತು ಪರಿಸ್ಥಿತಿ ಕೊನೆಯಾದ ವರ್ಷ 1977ರಲ್ಲಿ ಸೆರೆಹಿಡಿದಿದ್ದು. ಇದು ಜೆಎನ್ಯುದಲ್ಲಿ ನಡೆದದ್ದು ಅಲ್ಲ. ಇಂದಿರಾ ಗಾಂಧಿಯವರ ನಿವಾಸದ ಹೊರಗೆ ನಡೆದ ಪ್ರತಿಭಟನೆಯ ಫೋಟೋ. ಆಗ ಜೆಎನ್ಯು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಇಂದಿರಾ ಗಾಂಧಿಯವರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಇಂದಿರಾ ಗಾಂಧಿ ಅಲ್ಲಿಗೆ ಆಗಮಿಸಿದ್ದರು. 1977ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸೀತಾರಾಮ ಯೆಚೂರಿ ಅವರು ವಿದ್ಯಾರ್ಥಿಗಳ ಬೇಡಿಕೆಯನ್ನು ಇಂದಿರಾ ಗಾಂಧಿಯವರ ಪಕ್ಕ ನಿಂತು ಓದುತ್ತಿರುವ ಫೋಟೋ ಇದು ಎಂಬುದು ಗೊತ್ತಾಗಿದೆ.
ಇದೇ ಫೋಟೋವನ್ನು ರಿವರ್ಸ್ ಸರ್ಚ್ಗೆ ಹಾಕಿದಾಗ ಅಂದಿನ ಪ್ರತಿಭಟನೆಗೆ ಸಂಬಂಧಪಟ್ಟಂತೆ ಪ್ರಕಟವಾಗಿದ್ದ ಹಲವು ಆರ್ಟಿಕಲ್ಗಳು ಬೆಳಕಿಗೆ ಬಂದಿವೆ.
ತುರ್ತುಪರಿಸ್ಥಿತಿ ಮುಗಿದ ಬಳಿಕ ಇಂದಿರಾ ಗಾಂಧಿಯವರು ಜೆಎನ್ಯು ಚುನಾವಣೆಯಲ್ಲಿ ಸೋತಿದ್ದರು. ಆದರೂ ಕುಲಪತಿಯಾಗಿಯೇ ಮುಂದಿವರಿಯುತ್ತಿದ್ದರು. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಸೀತಾರಾಮ ಯೆಚೂರಿ ಅವರು 1975ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿರಲಿಲ್ಲ. ಅವರು ಅದಾಗಲೇ ಸಿಪಿಐ(ಎಂ) ಸೇರಿದ್ದರು. ಹಾಗೇ ಎಮರ್ಜನ್ಸಿ ವೇಳೆ ಬಂಧನಕ್ಕೆ ಒಳಗಾಗಿದ್ದರು. 1977ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಸಿಪಿಐ(ಎಂ)ನ ವೆಬ್ಸೈಟ್ನಲ್ಲಿರುವ ಅವರ ಪ್ರೊಫೈಲ್ನಲ್ಲಿ ಕೂಡ ಹೇಳಲಾಗಿದೆ. (ಏಜೆನ್ಸೀಸ್)