ಧಾರವಾಡ: ಸಾಹಿತ್ಯ ಪ್ರಕಾರಗಳಲ್ಲಿ ಮಕ್ಕಳ ಸಾಹಿತ್ಯವು ವಿಶೇಷತೆಯಿಂದ ಕೂಡಿದ್ದು ಮಕ್ಕಳ ಸಾಹಿತ್ಯದ ಮೂಲ ಶಿಶುವಿನ ತಾಯಿ ಮತ್ತು ಜನಪದ ಎಂದು ರಾಷ್ಟ್ರೀಯ ಬಸವದಳದ ಮಹಾಸಂಘಟನಾ ಕಾರ್ಯದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾರ್ಗದರ್ಶಕ ಮಂಡಳಿ ನಿರ್ದೇಶಕ ಗಂಗಾಧರ ದೊಡ್ಡವಾಡ ಹೇಳಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಕ್ಕಳ ಕವಿ ಹಿರಿಯ ವಿದ್ವಾಂಸ ಬಿ.ಕೆ. ಹೊಂಗಲ್ ಮಾಸ್ತರ ದಡೇರಕೊಪ್ಪ ಸೌಂದತ್ತಿ ರವರ 89ನೇ ಜನ್ಮ ದಿನಾಚರಣೆ ಅಂಗವಾಗಿ ಸೋಮನಾಥ ಹೊಂಗಲ್ ರವರು ಸ್ಥಾಪಿಸಿದ ದತ್ತಿ ನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳೇ ಕವಿಗಳು ಆಗಬೇಕು. ಅಂದಾಗ ಮಾತ್ರ ಮಕ್ಕಳ ಸಾಹಿತ್ಯಕ್ಕೆ ವಿಶೇಷ ಗೌರವ ದೊರೆಯುತ್ತದೆ. ಕನ್ನಡ ಮಾಧ್ಯಮಕ್ಕೆ ನಮ್ಮ ಮಕ್ಕಳನ್ನು ಅಂಟಿಸುವವರೆಗೂ ಮಕ್ಕಳು ಕನ್ನಡ ಶಿಶು ಕವಿಗಳಾಗಲು ಸಾಧ್ಯವಿಲ್ಲ ಎಂದರು.
ಆಂಗ್ಲ ಭಾಷೆಯ ವ್ಯಾಮೋಹ ನಮ್ಮಲ್ಲಿ ದಿನದಿಂದ ದಿನಕ್ಕೆ ವಿಕಾಸ ಗೊಳ್ಳುತ್ತಲೇ ಇದೆ. ಆದರೆ ಕನ್ನಡದ ವಿದ್ಯಾರ್ಥಿಯನ್ನಾಗಿಸಲು ನಾವು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದರು
ಧಾರವಾಡ ಆಕಾಶವಾಣಿಯ ಹಿರಿಯ ಅಧಿಕಾರಿ ಶರಣಬಸವ ಚೋಳಿನ, ಮಕ್ಕಳ ಕವಿ ಬಿ.ಕೆ. ಹೊಂಗಲ ಮಾಸ್ತರ ಮಕ್ಕಳ ಶ್ರೇಷ್ಠ ಕವಿ 2025 ರ ಪ್ರಶಸ್ತಿ ವಿಜೇತ ಡಾ. ಆರ್.ಬಿ. ಚಿಲುಮಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಸಾಹಿತಿ ಡಾ. ಶಂಕರ್ ಹಲಗತ್ತಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ವೀರಣ್ಣ ವಡ್ಡೀನ, ಡಾ. ಜಿನಧತ್ತ ಹಡಗಲಿ, ದತ್ತಿದಾನಿ ಸೋಮನಾಥ ಹೊಂಗಲ, ಡಾ. ಧನವಂತ ಹಾಜವಗೋಳ, ಮುತ್ತಣ್ಣ ತಿರ್ಲಾಪುರ ಮುಂತಾದವರು ಉಪಸ್ಥಿತರಿದ್ದರು.