ಬಳ್ಳಾರಿ: ಭಕ್ತಿಯಿಂದ ದೇವರಿಗೆ ನಮಿಸಿದರೆ ಸಾಕು. ನಂಬಿದ ದೇವರು ಯಾವತ್ತೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಹೀಗಿದ್ದರೂ ಕೆಲವೊಮ್ಮೆ ಜನರು ಭಕ್ತಿ, ನಂಬಿಕೆಯ ಹೆಸರಿನಲ್ಲಿ ಹುಚ್ಚಾಟ ಮೆರೆಯುತ್ತಾರೆ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ದೇವರನ್ನು ಒಲಿಸಿಕೊಳ್ಳಲೆಂದು, ನಾಲಗೆ ಕತ್ತರಿಸಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ್ ಎಂಬಾತ ದೇವರಿಗೆ ತನ್ನ ನಾಲಗೆಯನ್ನೇ ದಾನವಾಗಿ ಕೊಟ್ಟ ವಿಭಿನ್ನ ಭಕ್ತ. ಗ್ರಾಮದ ಜನರ ನಂಬಿಕೆಯ ದೇವರಾದ ಶಂಕರಪ್ಪ ತಾತನನ್ನು ಒಲಿಸಿಕೊಳ್ಳಲು ವೀರೇಶ್ ಮುಂದಾಗಿದ್ದಾನೆ. ಶಂಕರಪ್ಪ ತಾತ ನಾಲಿಗೆ ಕೇಳಿದರು ಎಂದು, ಚಾಕುವಿನಿಂದ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ. ವೀರೇಶ್ ತನ್ನ ನಾಲಗೆ ಕತ್ತರಿಸಿಕೊಂಡಿರುವುದು ನೆರೆಹೊರೆಯ ಮಂದಿಯ ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಅವರು ವೀರೇಶ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಸದ್ಯ ವೀರೇಶ್ ನಾಲಿಗೆ ಸಮೇತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈತನ ಎಡವಟ್ಟಿನ ಕೆಲಸ ನೋಡಿ ಒಂದು ಕ್ಷಣ ಆಸ್ಪತ್ರೆಯಲ್ಲಿದ್ದ ವೈದ್ಯರೇ ಗೊಂದಲಕ್ಕೊಳಗಾಗುವಂತಾಗಿದೆ. ಈ ಹಿಂದೆ ವೀರೇಶ್ ಹೆಬ್ಬೆರಳನ್ನು ಕತ್ತರಿಸಿಕೊಂಡಿದ್ದ. ಗ್ರಾಮಸ್ಥರು ಸೇರಿದಂತೆ ಈತನ ಪರಿಚಯಸ್ಥರು ಈತ ಅನೇಕ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ. ಹೀಗಾಗಿ ನಾಲಗೆ ಕತ್ತರಿಸಿಕೊಳ್ಳುವ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದಾರೆ.