ಕೊಳ್ಳೇಗಾಲ: ವಿಶ್ವದಾದ್ಯಂತ ಹಾಲು ಉದ್ದಿಮೆ ಪ್ರಸಿದ್ಧಿಯಾಗಿರುವ ಕಾರಣ ಹೈನುಗಾರಿಕೆ ಪ್ರಮುಖ ಕಸುಬಾಗಿದೆ ಎಂದು ಕೆಎಂಎಫ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ ಹೇಳಿದರು.
ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಾಲು ಉತ್ಪಾದಕರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಹಾಲನ್ನು ರೈತರು ಸರಬರಾಜು ಮಾಡಿದರೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲ ಎಂದು ಹೇಳಿದರು.
ಡೇರಿ ಅಧ್ಯಕ್ಷ ಬಿ.ಸುಂದರಸ್ವಾಮಿ ಮಾತನಾಡಿ, ಸಹಕಾರ ಸಂಘವು 2022-23ನೇ ಸಾಲಿನಲ್ಲಿ ಉತ್ತಮವಾಗಿ ವಹಿವಾಟು ನಡೆಸಿದ ಪರಿಣಾಮ 4, 83,283 ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟು 300 ಸದಸ್ಯರಿದ್ದು, ಎಲ್ಲರ ಸಹಕಾರ ಹಾಗೂ ಗುಣಮಟ್ಟದ ಹಾಲು ಪೂರೈಕೆಯಿಂದಾಗಿ ಲಾಭ ಗಳಿಸಲು ಸಾಧ್ಯವಾಯಿತು ಎಂದರು.
ಚಾಮುಲ್ ಉಪವ್ಯವಸ್ಥಾಪಕ ಶರತ್ ಕುಮಾರ್ ಮಾತನಾಡಿ, ಮಧುವನಹಳ್ಳಿ ಹಾಲು ಉತ್ಪಾದಕರ ಸಂಘ ಈ ಬಾರಿ ಉತ್ತಮ ಸಂಘ ಎಂಬ ಪ್ರಶಸ್ತಿ ಪಡೆದಿರುವುದು ಗಮನಾರ್ಹ ಎಂದು ತಿಳಿಸಿದರು.
ಸಭೆಯಲ್ಲಿ ಚಾಮುಲ್ ವಿಸ್ತರಾಧಿಕಾರಿ ಸೋಮಶೇಖರ್, ನಿವೃತ್ತ ಕಾರ್ಯ ನಿರ್ವಾಹಕಾಧಿಕಾರಿ ಎನ್.ವೀರಭದ್ರಸ್ವಾಮಿ, ಡೈರಿ ಉಪಾಧ್ಯಕ್ಷ ಜಡೇನಿಂಗಯ್ಯ, ನಿರ್ದೇಶಕರಾದ ಸುಂದರರಾಜು, ನಂದೀಶ್, ಮಲ್ಲೇಶ್, ಸಿದ್ದಲಿಂಗಸ್ವಾಮಿ, ರುದ್ರಸ್ವಾಮಿ, ಮಹದೇವಪ್ಪ, ಪದ್ಮಾ, ಜಯಮ್ಮ, ಹಾಲು ಪರಿವೀಕ್ಷಕ ಮಹದೇವಸ್ವಾಮಿ, ಸಿಬ್ಬಂದಿ ಮಲ್ಲೇಶ್ ಇದ್ದರು.