ದೇವದುರ್ಗ: ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗಲಿದ್ದು, ಮೊಬೈಲ್ ಗೀಳು ಬಿಡಿಸಿ ಸಮಯಪ್ರಜ್ಞೆ ಬೆಳೆಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಸಂಚಾಲಕಿ ಆರತಿ ಪುಷ್ಪಾವತಿ ಹೇಳಿದರು.


ತಾಲೂಕಿನ ಹೊಸೂರು ಸಿದ್ದಾಪುರದಲ್ಲಿ ಜಾಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ಎನ್ನೆಸ್ಸೆ ಶಿಬಿರ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಸಮಯ ಹಾಗೂ ಪರಿಶ್ರಮಕ್ಕೆ ಮಹತ್ವವಿದೆ. ಯುವಕರು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಒಳ್ಳೆಯ ಸಂಸ್ಕಾರ ಪಡೆದು ಹೆತ್ತವರು, ಗುರು ಹಿರಿಯರಿಗೆ ಗೌರವ ತರಬೇಕು ಎಂದರು.
ಮುಖಂಡರಾದ ಚಂದಪ್ಪ ಬುದ್ದಿನ್ನಿ, ತಿಮ್ಮಣ್ಣ ಮುರಾಳ, ಶಿವರಾಜ ಮುರಾಳ ಹಾಗೂ ಉಪನ್ಯಾಸಕರಾದ ಗುರಣ್ಣ ರಾರೆಡ್ಡಿ, ಶಾಂತಗೌಡ, ಮೂಗವ್ವ, ಮಂಜುಳಾ, ಪ್ರಕಾಶ ಬುದ್ದಿನ್ನಿ, ಈರನಗೌಡ, ಶಶಿಕುಮಾರ, ಹನುಮಂತ್ರಾಯ ಇತರರಿದ್ದರು.