ಬೆಂಗಳೂರು:
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಸತ್ತಿನಲ್ಲಿ ಯಾಕೆ ಧ್ವನಿ ಎತ್ತಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಅವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಿಂದ ಹೆಜ್ಜೆ ಹೆಜ್ಜೆಗೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕಕಕ್ಕೆ ಕರಾಳ ಅಧ್ಯಾಯವಾಗಿದೆ. ಕರ್ನಾಟಕದ ಬಗ್ಗೆ ಇವರಿಗೆ ಬದ್ದತೆ ಇದ್ದರೆ ಕರ್ನಾಟಕಕ್ಕೆ ಮೊದಲು ಕೇಂದ್ರದಿಂದ ನ್ಯಾಯ ಕೊಡಿಸಲಿ ಎಂದು ಸವಾಲು ಹಾಕಿದರು.
ತೆರಿಗೆ ಕಟ್ಟುವ, ಕಷ್ಟಪಟ್ಟು ದುಡಿಯೋ ಕರ್ನಾಟಕ ಜನರ ತೆರಿಗೆ ದುಡ್ಡು ಲೂಟಿ ಆಗುತ್ತಿದೆ. ಅದನ್ನ ಬಿಟ್ಟು ಅವರು ಮಾಡೋ ಅನ್ಯಾಯವನ್ನ ಮುಚ್ಚಿ ಹಾಕಿ ಇವರು ಕೂಡಾ ಅನ್ಯಾಯದಲ್ಲಿ ಪಾಲಾಗುವುದನ್ನು ಬಿಡಲಿ ಎಂದರು.
ನಮ್ಮ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗ್ತಿದೆ. ಅದನ್ನ ಸರಿ ಮಾಡಲಿ. ಅಮೇಲೆ ಉಳಿದಿದ್ದ ವಿಷಯ ಮಾತಾಡೋಕೆ ಅವರಿಗೂ ನೈತಿಕತೆ ಇರುತ್ತದೆ ಎಂದರು.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಇನ್ನು ಅನುಮತಿ ಕೊಟ್ಟಿಲ್ಲ. ಅನುಮತಿ ಕೊಡಿಸ್ತೀನಿ ಅಂತ ದೇವೇಗೌಡರು ಚುನಾವಣೆ ಸಮಯದಲ್ಲಿ ಹೇಳಿದ್ದರು. ಅದಕ್ಕೆ ಬದ್ದವಾಗಿ ಮೊದಲು ಅನುಮತಿ ಕೊಡಿಸಲಿ ಎಂದರು.
ಸುಪ್ರೀಂಕೋರ್ಟ್ ಕೂಡಾ ಮೇಕೆದಾಟು ಯೋಜನೆಗೆ ವಿರೋಧ ಇಲ್ಲ ಅಂತ ಹೇಳಿದೆ. ಚನ್ನಪಟ್ಟಣ ಚುನಾವಣೆಯಲ್ಲಿ ಕೈಹಿಡಿದು ಸಹಿ ಹಾಕಿಸ್ತೀವಿ ಅಂತ ಭಾಷಣ ಮಾಡಿದ್ದರು. ಆದ್ದರಿಂದ
ದೇವೇಗೌಡರೇ ಆಗಲಿ ಯಾರೇ ಆಗಲಿ ಮೊದಲು ಅನುಮತಿ ಕೊಡಿಸಲಿ ಎಂದರು.