ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಸ್ತಾಪಿಸಿ ವಿಮರ್ಶಿಸಿರುವುದು ಸಮಂಜಸವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡರು.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಕರ್ನಾಟಕದಲ್ಲಿ ದಲಿತರ ದುರ್ಬಳಕೆ, ಅಧಿಕಾರಿಗಳ ಆತ್ಮಹತ್ಯೆ, ಭ್ರಷ್ಟಾಚಾರ ಮಿತಿ ಮೀರಿರುವುದು, 136 ಶಾಸಕರಿದ್ದರೂ ಅಭದ್ರತೆಯ ವಾತಾವರಣ ಸಂಬಂಧಿತ ದೇವೇಗೌಡರ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆಯವರು ಆಕ್ಷೇಪ ಎತ್ತಲು ಯಾವುದೇ ಕಾರಣ ಇಲ್ಲ. ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ಸಿನ ವಿರುದ್ಧವಾಗಿ ಖರ್ಗೆ ಅವರೇ ಮಾತನಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ದಲಿತರ ಪರವಾಗಿ ಮಾತನಾಡಲು ಅವರಿಗೆ ಬಾಯಿಯೇ ಬರುತ್ತಿಲ್ಲ; ಆದರೆ, ದೇವೇಗೌಡರು ದಲಿತ ಸಮುದಾಯಗಳ ಬಗ್ಗೆ ಆಗಿರುವ ಅನ್ಯಾಯ ಸರಿಪಡಿಸಲು ರಾಜ್ಯಸಭೆಯಲ್ಲಿ ಸಮಯೋಚಿತವಾಗಿ ಮಾತನಾಡಿದ್ದಾರೆ. ಇದೊಂದು ಭಂಡತನದ ಸರ್ಕಾರ. ಮುಖ್ಯಮಂತ್ರಿಗಳು ಯಾವುದಕ್ಕೂ ಸಮರ್ಪಕ ಉತ್ತರ ಕೊಡುವುದಿಲ್ಲ ಎಂದು ಟೀಕಿಸಿದರು.
ಖರ್ಗೆ ಚಕಾರವಿಲ್ಲ
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ನುಂಗಲಾಯಿತು. ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗಗಳಿಗೆ ಇಟ್ಟಿದ್ದ ಹಣ 25 ಸಾವಿರ ಕೋಟಿಯನ್ನು ಇದೇ ಕಾಂಗ್ರೆಸ್ ಸರ್ಕಾರ ನುಂಗಿದೆ. ಖರ್ಗೆಯವರು ಇದರ ಬಗ್ಗೆ ಯಾಕೆ ಮಾತನಾಡಿಲ್ಲ. ಇವತ್ತಿನ ವರೆಗೆ ಚಕಾರ ಎತ್ತಿಲ್ಲ. ಖರ್ಗೆಯವರು ಯಾರ ಪರ ಇದ್ದಾರೆ ? ಎಂದು ಛಲವಾದಿ ನಾರಾಣಸ್ವಾಮಿ ಕೇಳಿದರು.
ಅದು 187 ಕೋಟಿ ಅಲ್ಲ; ಬರೀ 87 ಕೋಟಿ ಎಂದೇ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಸತ್ಯವನ್ನು ಒಪ್ಪಿಕೊಂಡರಲ್ಲವೇ? ಈ ಸತ್ಯ ಒಪ್ಪಿಕೊಳ್ಳಲು ಖರ್ಗೆ ಅವರಿಗೆ ಏನಾಗಿದೆ ಎಂದು ಪ್ರಶ್ನಿಸಿದರು.
ಆತ್ಮಹತ್ಯೆ ಪತ್ರ ಬರೆದಿಟ್ಟು ಚಂದ್ರಶೇಖರ್ ಅವರು ತೀರಿಕೊಂಡರು. ಇನ್ನೂ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ಎಸ್ಐ ಪರಶುರಾಂ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ, ಮನೆಯವರಿಗೆ ಕೆಲಸ ಕೊಡುವುದಾಗಿ ಗೃಹ ಸಚಿವರೇ ತಿಳಿಸಿದ್ದರು. ಇಲ್ಲಿನವರೆಗೆ ಕೂಡ ಒಂದೇ ಒಂದು ನಯಾಪೈಸೆ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.