ದೇವದುರ್ಗ: ಕ್ಷಯರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮಗಳ ಯಶಸ್ವಿಗೆ ಜನರ ಸಹಕಾರ ಅಗತ್ಯ. ಕ್ಷಯಮುಕ್ತ ತಾಲೂಕು ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಡಾ.ಮಹಮ್ಮದ್ ಹುಸೇನ್ ಹೇಳಿದರು.

ಇದನ್ನೂ ಓದಿ: ಕ್ಷಯರೋಗ ಮುಕ್ತ ಗ್ರಾಮಕ್ಕೆ ಜನಾಂದೋಲನ ಅಗತ್ಯ
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಕ್ಷಯರೋಗ ನಿರ್ಮೂಲನೆ ವಿಭಾಗದಿಂದ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಕ್ಷಯ ಗುಣವಾಗುವ ಕಾಯಿಲೆಯಾಗಿದ್ದು, ರೋಗಿಗಳು ಆತಂಕಕ್ಕೆ ಒಳಗಾಗಬಾರದು. ವೈದ್ಯರು ನೀಡುವಂಥ ಸಲಹೆಗಳನ್ನು ಪಾಲಿಸುವ ಮೂಲಕ ರೋಗಮುಕ್ತ ತಾಲೂಕು ಮಾಡಲು ಶ್ರಮಿಸಬೇಕು ಎಂದರು.
ಕ್ಷಯರೋಗ ವಿಭಾಗದ ಮೇಲ್ವಿಚಾರಕ ರವಿಶುಕ್ಲ ಮಾತನಾಡಿ, ಎರಡು ವಾರಕ್ಕಿಂತ ದಿನ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಹಸಿವು ಆಗದೆ ಇರುವುದು, ದಿನೇದಿನೆ ತೂಕ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣಗಳಾಗಿವೆ.
ಇಂಥ ಲಕ್ಷಣ ಕಂಡುಬಂದರೆ ತಡಮಾಡದೆ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಆರಂಭದಲ್ಲಿ ಚಿಕಿತ್ಸೆ ಪಡೆದರೆ ರೋಗ ಬೇಗ ವಾಸಿಯಾಗಲಿದೆ. ಪೋಷಣಾ ಅಭಿಯಾನದಡಿ ಕ್ಷಯರೋಗಿಗಳಿಗೆ ಮಾಸಿಕ 500ರೂ. ಪೌಷ್ಟಿಕ ಆಹಾರಕ್ಕಾಗಿ ನೀಡಲಾಗುವುದು ಎಂದರು.
ಜಾಗೃತಿ ಜಾಥಾಕ್ಕೆ ತಾಲೂಕು ನೋಡಲ್ ಅಧಿಕಾರಿ ಡಾ.ಯಶೋದಾ ಚಾಲನೆ ನೀಡಿದರು. ವೈದ್ಯರಾದ ಶಿವಕುಮಾರ ದೇಸಾಯಿ, ಮಹಾದೇವ ಹೊಸಮನಿ, ನಾಗರಾಜ ಹೋಗಾರ, ಶಂಶುದ್ದೀನ್, ಸುಶೀಲ್, ಸಿದ್ದರಾಮೇಶ, ವಿಮಲಾ ಪಂಚವಾದಿ, ಆಯುಷ್ ವೈದ್ಯೆ ನಿರ್ಮಲಾ, ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಗೀತಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸಯ್ಯ ಸ್ವಾಮಿ, ಐಸಿಟಿಸಿ ನಂದಕುಮಾರ, ಎನ್ಸಿಡಿ ವಿಶ್ವನಾಥ್, ಪ್ರಮುಖರಾದ ರವಿಕುಮಾರ್, ಭೀಮೇಶ್, ಆರೋಗ್ಯ ಮಿತ್ರ ಮಹೇಶಯ್ಯ ಇದ್ದರು.