ಸಿಂದಗಿ: ಸರ್ಕಾರದಿಂದ ರಾಜ್ಯದಲ್ಲಿನ ದೇವದಾಸಿ ಮಹಿಳೆಯರ ಪ್ರತ್ಯೇಕ ಅಭಿವೃದ್ಧಿ ನಿಗಮ, ಅಗತ್ಯ ಸವಲತ್ತುಗಳನ್ನು ಒದಗಿಸಲು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಶಾಸಕ ಅಶೋಕ ಮನಗೂಳಿ ಅವರಿಗೆ ಸಿಂಧೂತಾಯಿ ದೇವದಾಸಿಯರ ಒಕ್ಕೂಟದಿಂದ ಗುರುವಾರ ಮನವಿ ಮಾಡಿದರು.

ಒಕ್ಕೂಟದ ಅಧ್ಯಕ್ಷೆ ಸರಿತಾ ಹರಿಜನ ನೇತೃತ್ವದಲ್ಲಿ ಶಾಸಕರನ್ನು ಭೇಟಿ ಮಾಡಿದ ಮಹಿಳೆಯರು, ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ ಮಾಜಿ ದೇವದಾಸಿ ತಾಯಂದಿರು ಇರುವುದರಿಂದ ಪ್ರತ್ಯೇಕ ದೇವದಾಸಿ ಮಹಿಳಾ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದರು.
ಮಾಜಿ ದೇವದಾಸಿ ತಾಯಂದಿರಿಗೆ ಭೂಒಡೆತನ ಯೋಜನೆಯಡಿ ಆಸ್ತಿ, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಸಹಾಯಧನದ ಜತೆಗೆ ವಸತಿ ಯೋಜನೆಗೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಉಪಾಧ್ಯಕ್ಷೆ ಕಸ್ತೂರಿಬಾಯಿ ಕಟ್ಟಿಮನಿ ಸೇರಿ ದೇವದಾಸಿ ಮಹಿಳೆಯರಿದ್ದರು.