ಗದಗ: ‘ಉತ್ತರ ಕರ್ನಾಟಕ ಭಾಗದಲ್ಲಿ ದೌರ್ಜನ್ಯದ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸದನದಲ್ಲಿ ಚರ್ಚೆ ನಡೆಸಿ, ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ’ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷ ಬಸವರಾಜು ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಡಿ.4ರಿಂದ 15ರವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು, ನ.5 ಮತ್ತು 6ರಂದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಸರ್ಕಾರ ತಿಳಿಸಿದೆ. ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳಲ್ಲಿ ಇಂದಿಗೂ ಜೀವಂತವಾಗಿರುವ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ದಲಿತ ವಿಮೋಚನೆಯ ಪ್ರಶ್ನೆಯ ಭಾಗವಾಗಿ ನೋಡಬೇಕು; ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರು ದೇವದಾಸಿ ಪದ್ಧತಿಯನ್ನು ಕಾಯ್ದೆ ಮೂಲಕ ನಿಷೇಧಿಸಿದ್ದರು. 1984ರಲ್ಲಿ ಮತ್ತೊಮ್ಮೆ ಕಾನೂನು ಮಾಡುವ ಮೂಲಕ ನಿಷೇಧ ಹೇರಲಾಯಿತು. ಆದರೂ, ಈ ಸಮಸ್ಯೆ ಜೀವಂತವಾಗಿದೆ. ಸರ್ಕಾರ ದೇವದಾಸಿ ಪದ್ಧತಿಯನ್ನು ಅದರ ಆಳಕ್ಕೆ ಇಳಿದು ನೋಡದಿರುವುದೇ ಇದಕ್ಕೆ ಕಾರಣ’ ಎಂದು ಆರೋಪಿಸಿದರು.
‘ಬೆತ್ತಲೆ ಸೇವೆ, ಬೇವಿನುಡುಗೆ ಸೇವೆ, ಸಿಡಿಗಂಬ ಆಡಿಸುವ ಕಟ್ಟಳೆ, ದೇವದಾಸಿಯರು ನಿರಂತರ ಸೇವೆ ಸಲ್ಲಿಸದಿದ್ದರೆ ಬರಗಾಲ ಬರುತ್ತದೆ ಎಂಬ ಮೂಢನಂಬಿಕೆ ಹೀಗೆ ಹಲವು ಕಾರಣಗಳಿಂದ ಈ ಪದ್ಧತಿ ಇಂದಿಗೂ ಜೀವಂತವಾಗಿದೆ. ಶ್ರೀಮಂತರು ದೇವದಾಸಿಯರ ಜತೆಗೆ ಸಂಸಾರ ನಡೆಸುತ್ತಾರೆ. ಆದರೆ, ಕುಟುಂಬದ ಹೊಣೆಗಾರಿಕೆ ನಿರ್ವಹಿಸುವುದಿಲ್ಲ. ಆಸ್ತಿ ನೀಡುವುದಿಲ್ಲ. ಇದರಿಂದಾಗಿ ದೇವದಾಸಿಯರ ಮಕ್ಕಳು ಸಾಮಾಜಿಕವಾಗಿ ಅಪಮಾನ ಅನುಭವಿಸುವಂತಾಗಿದೆ’ ಎಂದು ತಿಳಿಸಿದರು.
‘ಇತ್ತೀಚಿನ ದಿನಗಳಲ್ಲಿ ದೇವದಾಸಿ ಮಹಿಳೆಯರ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲಾಗುತ್ತಿದೆ. ಆದರೆ, ಒಂದೇ ವರ್ಷದಲ್ಲಿ ಅಪಮಾನಕ್ಕೆ ಒಳಗಾಗಿ ಗಂಡನಿಂದ ಪರಿತ್ಯಕ್ತರಾಗುತ್ತಿದ್ದಾರೆ. ಇಂತಹ ಮಹಿಳೆಯರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಷಯ’ ಎಂದು ಹೇಳಿದರು.
‘ಕಾಯ್ದೆ ಕಠೋರವಾಗಿ ಇರದಿರುವುದೇ ಈ ಸಮಸ್ಯೆಗಳಿಗೆಲ್ಲ ಕಾರಣವಾಗಿದೆ. ಫಲಾನುಭವಿಗಳನ್ನು ಆರೋಪಿಯನ್ನಾಗಿ ಮಾಡಿ, ಕುಟುಂಬದ ಹೊಣೆಗಾರರನ್ನಾಗಿ ಮಾಡಬೇಕು. ಅವರಿಗೆ ಜನಿಸಿದ ಮಕ್ಕಳಿಗೆ ಆಸ್ತಿ ನೀಡುವಂತೆ ಕಾನೂನು ಮಾಡಬೇಕು. ಆಗ ಮಾತ್ರ ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯ’ ಎಂದು ಹೇಳಿದರು.
‘ದೇವದಾಸಿಯರ ಪುನರ್ವಸತಿ ಎಂಬುದು ನಗೆಪಾಟಲಿಗೆ ಗುರಿಯಾಗಿದೆ. ಪ್ರತಿ ತಾಲ್ಲೂಕಿನಿಂದ ನಾಲ್ಕು ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಸರ್ಕಾರದ ಈ ನೀತಿಯಿಂದ ದೇವದಾಸಿಯರ ಪುನರ್ವಸತಿ ಎಂಬುದು ಹಳ್ಳ ಹಿಡಿದಿದೆ’ ಎಂದು ತಿಳಿಸಿದರು.
‘ದೇವದಾಸಿಯರ ಪಿಂಚಣಿ ಹೆಚ್ಚಳ, ಭೂಮಿ ಯೋಜನೆ ಅಡಿಯಲ್ಲಿ ಐದು ಎಕರೆ ಜಮೀನು, ಸಾಲ ಯೋಜನೆಯಲ್ಲಿ ₹1 ಲಕ್ಷ ಹಣ ಹಾಗೂ ದೇವದಾಸಿಯರ ಗಣತಿಯನ್ನು ಮತ್ತೇ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಚರ್ಚಿಸದಿದ್ದರೆ ಡಿ. 28, 29, 30ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.