ಕಂಪ್ಲಿ: ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ತಾಪಂ ಇಒ ಆರ್.ಕೆ.ಶ್ರೀಕುಮಾರಗೆ ಸೋಮವಾರ ಮನವಿ ಸಲ್ಲಿಸಿದರು.


ಇದನ್ನೂ ಓದಿ: ದೇವದಾಸಿ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ಸೂಚನೆ
ಸಂಘದ ಅಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ, ಕರ್ನಾಟಕ ದೇವದಾಸಿ(ಸಮರ್ಪಣಾ ತಡೆ)ಕಾಯ್ದೆ ಸಂಪೂರ್ಣವಾಗಿ ತಿದ್ದುಪಡಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ದೇವದಾಸಿಯಾಗಲು ಕಾರಣರಾದವರು, ಪ್ರೋತ್ಸಾಹಿಸಿದವರಿಗೂ ಕಾನೂನಿನಡಿ ಶಿಕ್ಷೆನೀಡಿ. ದೇವದಾಸಿ ಮಗುವಿನ ತಂದೆ ಆಸ್ತಿಯಲ್ಲಿ ಪಾಲು ಸಿಗಬೇಕು ಸೇರಿ ಸಮಗ್ರ ತಿದ್ದುಪಡಿಗೊಳಿಸಿ ಒತ್ತಾಯಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 519 ದೇವದಾಸಿಯರನ್ನು ಸರ್ವೇ ಪಟ್ಟಿಯಲ್ಲಿ ಗುರುತಿಸಿದ್ದು, ಉಳಿದ 150ದೇವದಾಸಿಯರನ್ನು ಪಟ್ಟಿಗೆ ಸೇರಿಸಬೇಕು. ಮಾಜಿ ದೇವದಾಸಿ ಮಹಿಳೆಯರಿಗೆ ನಿವೇಶನ, ಮನೆ ಸೌಲಭ್ಯ ಒದಗಿಸಬೇಕು. ಸರ್ಕಾರ ಬಜೆಟ್ನಲ್ಲಿ 500ರೂ. ಹೆಚ್ಚಿಸಿದ್ದನ್ನು ಸೇರಿಸಿ, ಬಾಕಿ ಉಳಿದ ಮೂರು ತಿಂಗಳ ಮಾಸಿಕ ಪಿಂಚಣಿಯನ್ನು 2000ರೂ.ಯಂತೆ ವಿತರಿಸಬೇಕು.
ಮಕ್ಕಳ ಸರ್ವೇ ಮಾಡಬೇಕು. ಮಕ್ಕಳಿಗೆ ಶೇ.10ಶೈಕ್ಷಣಿಕ ಮೀಸಲಾತಿ ನೀಡಿದ್ದು, ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಸ್ವ ಉದ್ಯೋಗಕ್ಕಾಗಿ ತರಬೇತಿ, ಸಾಲಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಎಚ್.ಈರಮ್ಮ, ಪ್ರಮುಖರಾದ ಕೊರಮ್ಮ, ಪಾರ್ವತಿ, ಮಾರಮ್ಮ, ಜಾನಮ್ಮ, ರುದ್ರಮ್ಮ, ಸುಮಂಗಳಾ, ಲಕ್ಷ್ಮೀ, ತಾಯಮ್ಮ, ಹುಲಿಗೆಮ್ಮ, ಕನ್ಯಮ್ಮ, ಹನುಮಕ್ಕ ಇತರರಿದ್ದರು.