ಕಾರವಾರ: ಜಿಲ್ಲೆಯಲ್ಲಿ ಕಳೆದ ಐದು ತಿಂಗಳಲ್ಲಿ 133 ಕ್ಕೂ ಅಧಿಕ ಜನರಿಗೆ ಡೆಂಘೆ ಜ್ವರ ಖಚಿತವಾಗಿದೆ.
ಒಂದು ಕಡೆ ರೋಗ ಕಡಿಮೆಯಾದಲ್ಲಿ ಇನ್ನೊಂದೆಡೆ ಉಲ್ಬಣವಾಗುತ್ತಿದೆ. ಜೊಯಿಡಾ, ಭಟ್ಕಳ, ಹೊನ್ನಾವರ, ಕುಮಟಾ, ಶಿರಸಿ, ಕಾರವಾರ ಹೀಗೆ ವಿವಿಧೆಡೆ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.
ರಾಷ್ಟ್ರೀಯ ಡೆಂಘೆ ದಿನಾಚರಣೆಯ ಅಂಗವಾಗಿ ಡೇಟಾ ಬಿಡುಗಡೆ ಮಾಡಲಾಗಿದೆ. ಜನವರಿಯಲ್ಲಿ ಕುಮಟಾ,ಹೊನ್ನಾವರ, ಕಾರವಾರ ಭಾಗದಲ್ಲಿ ಒಟ್ಟು 22 ಡೆಂಘೆ ಪ್ರಕರಣಗಳು ಪತ್ತೆಯಾಗಿದ್ದವು.
ಫೆಬ್ರವರಿಯಲ್ಲಿ ಜೊಯಿಡಾದಲ್ಲಿ ಒಂದೇ ಕಡೆ 25 ಪ್ರಕರಣಗಳು ಪತ್ತೆಯಾಗಿದ್ದವು. ಕುಮಟಾ, ಹೊನ್ನಾವರ, ಕಾರವಾರ ಸೇರಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 60 ಕ್ಕೆ ಏರಿತ್ತು.
ಮಾರ್ಚ್ನಲ್ಲಿ ಅಂಕೋಲಾ, ಭಟ್ಕಳ, ಶಿರಸಿ, ಸಿದ್ದಾಪುರ ಭಾಗದಲ್ಲಿ ತಲಾ 2 ರಿಂದ 4 ಪ್ರಕರಣಗಳು ಕಾಣಿಸಿಕೊಂಡವು. ಒಟ್ಟಾರೆ ಪ್ರಕರಣಗಳ ಸಂಖ್ಯೆ 22 ಕ್ಕೆ ಇಳಿದಿದೆ.
ಏಪ್ರೀಲ್ನಲ್ಲಿ ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿಯಲ್ಲಿ ಒಟ್ಟು 23 ರೋಗಿಗಳಲ್ಲಿ ಡೆಂಘೆ ಇರುವುದು ಖಚಿತವಾಗಿದೆ. ಮೇ ತಿಂಗಳಲ್ಲಿ ಇದುವರೆಗೆ ಶಿರಸಿ, ಅಂಕೋಲಾ ಸಿದ್ದಾಪುರದಲ್ಲಿ ಒಟ್ಟು 5 ರೋಗಿಗಳಿಗೆ ಡೆಂಘೆ ಖಚಿತವಾಗಿದೆ.
ಡೆಂಘೆ ಹರಡುವ ಶುದ್ಧ ನೀರಿನ ಸೋಳ್ಳೆ:
ಶುದ್ಧ ನೀರನ್ನು ಹೆಚ್ಚು ದಿನ ಸಂಗ್ರಹಿಸಿಟ್ಟಲ್ಲಿ ಉತ್ಪತ್ತಿಯಾಗುವ ಈಡೀಸ್ ಈಜಿಪ್ತೈ ಎಂಬ ಸೊಳ್ಳೆಯಿಂದೆ ಡೆಂಘೆ ಹರಡುತ್ತದೆ. ಡೆಂಘೆ ರೋಗ ಪೀಡಿತ ವ್ಯಕ್ತಿಗೆ ಕಚ್ಚಿದ ಸೊಳ್ಳೆ ಬೇರೆಯವನಿಗೂ ಕಚ್ಚಿದಲ್ಲಿ ಡೆಂಘೆ ಹರಡಬಹುದು.
ಇದನ್ನೂ ಓದಿ:ಮೊದಲ ಎರಡು ವರ್ಷ ಸಿಎಂ ಸ್ಥಾನ ಕೊಡಿ, ಇಲ್ಲಾಂದ್ರೆ ಏನೂ ಬೇಡ: ಡಿ.ಕೆ. ಶಿವಕುಮಾರ್
ಇದರಿಂದ ಹೆಚ್ಚು ದಿನ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು. ಸೊಳ್ಳೆ ಕಚ್ಚುವುದರಿಂದ ತಪ್ಪಿಸಿಕೊಳ್ಳುವುದು ಡೆಂಘೆ ನಿಯಂತ್ರಣಕ್ಕೆ ಉತ್ತಮ ಮಾರ್ಗ. ಜ್ವರ ಕಾಣಿಸಿಕೊಂಡಲ್ಲಿ ಪರೀಕ್ಷೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.
ಡೆಂಘೆ ಜಾಗೃತಿ ಜಾಥಾ:
ಡೆಂಘೆ ರೋಗ ಹರಡುವ ಬಗ್ಗೆ ಜನ ತಿಳಿದುಕೊಂಡು, ಎಚ್ಚರಿಕೆ ವಹಿಸಬೇಕು ಎಂದು ಎಂಎಲ್ಸಿ ಗಣಪತಿ ಉಳ್ವೇಕರ್ ಹೇಳಿದರು.
ರಾಷ್ಟ್ರೀಯ ಡೆಂಘೆ ದಿನಾಚರಣೆಯ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಡಿಎಚ್ಒ ಡಾ.ಅನ್ನಪೂರ್ಣಾ ವಸ್ತçದ, ಡಾ.ಶಂಕರ ರಾವ್, ಡಾ.ರಮೇಶ ರಾವ್ ಇದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಿಎಚ್ಒ ಕಚೇರಿಯಲ್ಲಿ ಜಾಥಾ ಕೊನೆಗೊಳಿಸಲಾಯಿತು. ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಹಿಡಿದು ನಡೆದರು.
ಡೆಂಘೆ ತಡೆಯೋದು ಹೇಗೆ ಇಲ್ಲಿದೆ ಸಲಹೆ: https://fb.watch/kziSINrdmZ/?mibextid=Nif5oz