ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ ನರಮೇಧ ನಡೆಸಿದ್ದ ಭಯೋತ್ಪಾದಕರ ಮೇಲೆ ಭಾರತ ಪ್ರತೀಕಾರ ತೆಗೆದುಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ 9 ಸ್ಥಳಗಳಲ್ಲಿ ಅಡಗಿ ಕುಳಿತಿದ್ದ ಉಗ್ರರ ಮೇಲೆ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಎಂಬ ಹೆಸರಿನ ಮೂಲಕ ಕಾರ್ಯಾಚರಣೆ ನಡೆಸಿ, ದಿಟ್ಟ ಉತ್ತರ ನೀಡಿದೆ. ಈ ಕಾರ್ಯಾಚರಣೆಯಲ್ಲಿ 70ಕ್ಕೂ ಅಧಿಕ ಶತ್ರುಗಳ ಹತ್ಯೆಯಾಗಿದ್ದು, ಈ ಮೂಲಕ ‘ಆಪರೇಷನ್ ಸಿಂಧೂರ’ ಯಶಸ್ವಿಯಾಗಿದೆ. ಈ ಮಧ್ಯೆ, ‘ಆಪರೇಷನ್ ಸಿಂಧೂರ’ ಎಂಬ ಹೆಸರಿಗೆ ಇಡೀ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಹೆಸರಿನ ಮೇಲೆ ಬಾಲಿವುಡ್ ನಿರ್ಮಾಪಕರ ಕಣ್ಣು ಬಿದ್ದಿದ್ದು, ಈ ಟೈಟಲ್ ನೋಂದಣಿಗೆ ತಾ ಮುಂದು ನಾ ಮುಂದು ಎಂಬಂತೆ ಮುಂದೆ ಬಂದಿದ್ದಾರೆ. ಹೌದು, ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ಯುದ್ಧ ಕಾರ್ಯಾಚರಣೆಗಳು ಕುರಿತಂತೆ ಹಲವಾರು ಸಿನಿಮಾಗಳು ಮೂಡಿಬಂದಿವೆ. ಕಾರ್ಗಿಲ್ ಯುದ್ಧ ಹಿನ್ನೆಲೆಯಲ್ಲಿ ‘ಬಾರ್ಡರ್’, ‘ಗುಂಜನ್ ಸಕ್ಸೇನಾ: ದ ಕಾರ್ಗಿಲ್ ಗರ್ಲ್’, ‘ಶೇರ್ ಷಾ’ ಹಾಗೂ ಉರಿ ಕಾರ್ಯಾಚರಣೆ ಕುರಿತು ‘ಉರಿ: ದ ಸರ್ಜಿಕಲ್ ಸ್ಟ್ರೈಕ್’ ಹಾಗೆಯೇ ‘ಅಮರನ್’, ‘ರಾಝಿ’ ಸೇರಿ ಹಲವಾರು ಸಿನಿಮಾಗಳು ತೆರೆಕಂಡು ಯಶಸ್ವಿಯಾಗಿವೆ. ಈ ಹಿನ್ನೆಲೆಯಲ್ಲಿ ಇದೀಗ ಬಾಲಿವುಡ್ ಮಂದಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕಾಗಿ ಕಾರ್ಯಾಚರಣೆ ನಡೆದ ಮೊದಲೇ ದಿನವೇ ಶೀರ್ಷಿಕೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ‘ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ ಅಸೋಸಿಯೇಷನ್’ (ಐಎಂಪಿಪಿಎ) ಹಾಗೂ ‘ಇಂಡಿಯನ್ ಫಿಲಂ ಆ್ಯಂಡ್ ಟೆಲಿವಿಷನ್ ಪ್ರೊಡ್ಯೂಸರ್ಸ್ ಕೌನ್ಸಿಲ್ (ಐಎ್ಟಿಪಿಸಿ)ನಲ್ಲಿ ಟೈಟಲ್ಗಾಗಿ 30ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ‘ಉಂಚೈ’, ‘ರಾಮ್ಸೇತು’ ಖ್ಯಾತಿಯ ನಿರ್ಮಾಪಕ ಮಹಾವೀರ್ ಜೈನ್, ಜೀ ಸ್ಟುಡಿಯೋ, ಟಿ-ಸೀರಿಸ್ ನಿರ್ಮಾಣ ಸಂಸ್ಥೆ ಹಾಗೂ ‘ಚಾಂದಿನಿ ಬಾರ್’ ನಿರ್ದೇಶಕ ಮಧುರ್ ಭಂಡಾರ್ಕರ್, ಜಾನ್ ಅಬ್ರಹಾಂ ನಿರ್ಮಾಣ ಸಂಸ್ಥೆ, ಆದಿತ್ಯ ಧರ್, ಅಶೋಕ್ ಪಂಡಿತ್, ರಿಲಾಯನ್ಸ್, ಜೆ.ಪಿ.ಫಿಲಂ, ಬಾಂಬೆ ಶೋ ಸ್ಟುಡಿಯೋ ಸೇರಿ 30ಕ್ಕೂ ಅಧಿಕ ಸಂಸ್ಥೆಗಳು ಟೈಟಲ್ಗೆ ಅರ್ಜಿ ಸಲ್ಲಿಸಿವೆ. ಇದರಲ್ಲಿ ಯಾರು ಮೊದಲಿಗೆ ಅರ್ಜಿ ಸಲ್ಲಿಸಿರುತ್ತಾರೆಯೋ ಅವರಿಗೆ ಟೈಟಲ್ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ‘ಆಪರೇಷನ್ ಸಿಂಧೂರ’ ತೆರೆಮೇಲೆ ಬಂದರೆ ಇದರಲ್ಲಿ ನಾಯಕ ಯಾರಾಗಬೇಕು ಎಂಬುದು ಜಾಲತಾಣದಲ್ಲಿ ಚರ್ಚೆಯಾಗಿದ್ದು, ಅಕ್ಷಯ್ಕುಮಾರ್, ವಿಕ್ಕಿ ಕೌಶಲ್, ಸಿದ್ದಾರ್ಥ ಮಲ್ಹೋತ್ರಾ ಹಾಗೂ ಸನ್ನಿ ಡಿಯೋಲ್ ಹೆಸರು ಕೇಳಿಬಂದಿವೆ. –ಏಜೆನ್ಸೀಸ್

ಹಿಂದಿ ಸಿನಿಮಾ ರಿಲೀಸ್ ರದ್ದು: ಪಹಲ್ಗಾಮ್ನಲ್ಲಿ ನಾಗರಿಕರ ಹತ್ಯೆ ಬಳಿಕ ಪಾಕ್ ಪ್ರೇರಿತ ಭಯೋತ್ಪಾದಕರ ವಿರುದ್ಧ ಭಾರತ ಪ್ರತೀಕಾರ ತೆಗೆದುಕೊಂಡಿದೆ. ಇದೀಗ ಉಭಯ ದೇಶಗಳ ನಡುವೆ ಯುದ್ಧದ ಉದ್ವಿಗ್ನತೆ ಎದುರಾಗಿದೆ. ಇದರ ಪರಿಣಾಮ ಇಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಬೇಕಿದ್ದ ಹಿಂದಿ ಸಿನಿಮಾ ಮೇಲೆ ಬಿದ್ದಿದೆ. ರಾಜ್ಕುಮಾರ್ ರಾವ್, ವಾಮಿಕಾ ಗಬ್ಬಿ ಮುಖ್ಯಭೂಮಿಕೆಯಲ್ಲಿದ್ದ ‘ಭೂಲ್ ಚುಕ್ ಮಾಫ್’ ಚಿತ್ರವು ದೇಶಾದ್ಯಂತ ಇಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವುದಿತ್ತು. ಆದರೆ, ಸದ್ಯ ತಲೆದೋರಿದ ಬಿಕ್ಕಟ್ಟಿನಿಂದಾಗಿ ಸಿನಿಮಾ ಮಂದಿರಗಳಲ್ಲಿ ರಿಲೀಸ್ ರದ್ದುಗೊಳಿಸಿದ್ದು, ಮೇ 16ರಿಂದ ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ‘ಇತ್ತೀಚಿನ ಬೆಳವಣಿಗೆಗಳು ಹಾಗೂ ದೇಶದ ಭದ್ರತೆ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಮನರಂಜನಾ ಭರಿತ ಚಿತ್ರ ‘ಭೂಲ್ ಚುಕ್ ಮಾಫ್’ ಇದೇ 16ರಂದು ಒಟಿಟಿ ಮೂಲಕ ನಿಮ್ಮ ಮನೆಗಳಿಗೆ ತರಲು ನಿರ್ಧರಿಸಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಚಿತ್ರಮಂದಿರದಲ್ಲಿ ನಿಮ್ಮ ಜತೆ ನೋಡಲು ನಾವು ಕುತೂಹಲರಾಗಿದ್ದೇವೆ. ದೇಶವೇ ನಮಗೆ ಮೊದಲು’ ಎಂದು ನಿರ್ಮಾಣ ಸಂಸ್ಥೆ ಘೋಷಿಸಿದೆ.