ಶಿವು ಹುಣಸೂರು
ಭಾರತದ ರಕ್ಷಣಾ ಇಲಾಖೆಯು ಬಾಬಾ ಅಣು ಸಂಶೋಧನಾ ಕೇಂದ್ರದ ಸ್ಥಾಪನೆಯ ಉದ್ದೇಶದಿಂದ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಪಿಡಿಒ ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿರುವ ಪ್ರಕರಣ ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ದೇಶ ರಕ್ಷಣೆ ಮಾಡುವ ರಕ್ಷಣಾ ಇಲಾಖೆಯ ಭೂಮಿಗೆ ರಕ್ಷಣೆ ಇಲ್ಲವೇ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. 18 ವರ್ಷಗಳ ಹಿಂದೆಯೇ ಬಾಬಾ ಅಣು ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ ಕೇಂದ್ರ ಸರ್ಕಾರ ಸ್ವಾಧೀನ ಪಡಿಸಿಕೊಂಡಿದ್ದ ಸುಮಾರು 12 ಎಕರೆ ಭೂಮಿಯ ಪೈಕಿ 4 ಎಕರೆ ಭೂಮಿಯನ್ನು ಎಂ.ಕೆ.ರಚನಾ ಎನ್ನುವವರು ಮನುಗನಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ್ದ ವೇಳೆ ಮೈಸೂರಿನ ಬನ್ನಿಮಂಟಪದ ಹನುಮಂತನಗರ ಸಿ ಲೇಔಟ್ನ ನಿವಾಸಿ ದಿವಂಗತ ಅಮೀರ್ ಪಾಷ ಅವರ ಪತ್ನಿ ಶಬೀನ್ ತಾಜ್ಗೆ 2023ರಲ್ಲಿ ಖಾತೆ ಮಾಡಿಕೊಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಕಚೇರಿಯಿಂದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಪಿಡಿಒ ಮೇಲೆ ಶಿಸ್ತು ಕ್ರಮವಹಿಸಲು ಸೂಚನೆ ನೀಡಿದ್ದರೂ ಈವರೆಗೆ ಯಾವುದೇ ಬೆಳವಣಿಗೆಗಳು ಆಗದಿರುವುದು ಸಾರ್ವಜನಿಕರಲ್ಲಿ ಹಲವು ಸಂಶಯಕ್ಕೆ ಕಾರಣವಾಗಿದೆ ಎಂದು ಪ್ರಕರಣವನ್ನು ಬೆಳಕಿಗೆ ತಂದಿರುವ ಜಿಲ್ಲಾ ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಸಂರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಇಂಟೆಕ್ ರಾಜು ಆತಂಕ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಇಲಾಖೆಯ ಭೂಮಿಗೆ ರಕ್ಷಣೆ ಇಲ್ಲದಂತಾಗಿದೆ: ಬಿಳಿಕೆರೆ ಹೋಬಳಿ ಚಿಕ್ಕಾಡಿಗನಹಳ್ಳಿ ಗ್ರಾಮದ ಸರ್ವೇ ನಂಬರ್ 21/1, ರೀ ಸರ್ವೇ ಸರ್ವೇ ನಂ.56ರಲ್ಲಿ 4 ಎಕರೆ ಭೂಮಿಯನ್ನು ಮೈಸೂರಿನ ಬನ್ನಿಮಂಟಪದ ಹನುಮಂತಪುರ ಸಿ ಲೇಔಟ್ ನಿವಾಸಿ ಎಂ.ಅಮೀರ್ ಪಾಷಾ 1982ರಲ್ಲಿ ಖರೀದಿಸಿದ್ದರು. ನಂತರ ತಮ್ಮ ಜಮೀನನ್ನು ಅನ್ಯಕ್ರಾಂತ ಮಾಡಿಸಿಕೊಂಡಿದ್ದರು. 1987-88ರಲ್ಲಿ ತಮ್ಮ 4 ಎಕರೆ ಭೂಮಿಯ ಪೈಕಿ 3.26 ಎಕರೆಯನ್ನು ಮತ್ತು 1996-97ನೇ ಸಾಲಿನಲ್ಲಿ ಉಳಿಕೆ 0-14 ಗುಂಟೆಯನ್ನು ನಾಗಮಣಿ, ಉಷಾರಾಣಿ, ಪಿ.ಮೃತ್ಯುಂಜಯ, ಶಿವಪ್ರಸಾದ್ ಮತ್ತು ಕೆ.ವಿಜಯೇಂದ್ರ ಎನ್ನುವವರಿಗೆ ಮಾರಾಟ ಮಾಡಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ: 2006ರಲ್ಲಿ ಕೇಂದ್ರಸರ್ಕಾರ ಈ ಭಾಗದಲ್ಲಿ ಬಾಬಾ ಅಣು ಸಂಶೋಧನಾ ಕೇಂದ್ರ ಯೋಜನೆ ಸ್ಥಾಪಿಸಲು ಉದ್ದೇಶಿಸಿದ ಪರಿಣಾಮ ಚಿಕ್ಕಾಡಿಗನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 12 ಎಕರೆ ಭೂಮಿಯನ್ನು (5.08,074 ಚದರ ಅಡಿಗಳು) ಸ್ವಾಧೀನ ಪಡಿಸಿಕೊಂಡಿತು. ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡಿತು. ಭೂಮಿ ಕಳೆದುಕೊಂಡ ಭೂಮಾಲೀಕರಿಗೆ ಪರಿಹಾರವನ್ನು ವಿತರಿಸಲಾಯಿತು. ತಮ್ಮ ಭೂಮಿಯ ಸುತ್ತ ಕಾಂಪೌಂಡನ್ನೂ ನಿರ್ಮಿಸಿಕೊಂಡಿದ್ದಾರೆ.
ಅಕ್ರಮ ನಡೆದದ್ದು ಹೇಗೆ?: 2021ರಲ್ಲಿ ಅಂದಿನ ಪಿಡಿಒ ಕೆ.ಎಂ.ರಚನಾ ಸರ್ವೇ ನಂಬರ್ನ 4 ಎಕರೆ ಭೂಮಿಯ ಹದ್ದುಬಸ್ತು ಗುರುತಿಸಿಕೊಡಲು ಕೋರಿ ತಹಸೀಲ್ದಾರರಿಗೆ ಮನವಿ ಸಲ್ಲಿಸುತ್ತಾರೆ. ತಹಸೀಲ್ದಾರ್ ನಿರ್ದೇಶನದಂತೆ ಸರ್ವೇ ಮಾಡಿದ ಸರ್ವೇಯರ್ಗಳು ಸದರಿ ಭೂಮಿ ಬಾಬಾ ಅಣುಸಂಶೋಧನಾ ಕೇಂದ್ರದ ಸ್ವತ್ತಾಗಿದೆ ಎಂದು ವರದಿಯಲ್ಲಿ ತಿಳಿಸುತ್ತಾರೆ.
ಪಿಡಿಒ ಉಪವಿಭಾಗಾಧಿಕಾರಿಗೆ ಪತ್ರಮುಖೇನ ಅರ್ಜಿದಾರರು ಸದರಿ ಭೂಮಿಯ ಪೌತಿಖಾತೆಗಾಗಿ ಅರ್ಜಿ ಸಲ್ಲಿಸಿದ್ದು, ಪೌತಿಖಾತೆ ವ್ಯಾಪ್ತಿಗೆ ಈ ಭೂಮಿ ಬರುವುದೇ ಈ ಕುರಿತು ಮಾರ್ಗದರ್ಶನ ನೀಡಬೇಕೆಂದು ಕೋರಿ ಮನವಿ ಸಲ್ಲಿಸಿದಾಗ ಉಪವಿಭಾಗಾಧಿಕಾರಿ ಕಚೇರಿಯಿಂದಲೂ ಅದೇ ಉತ್ತರ ಬರುತ್ತದೆ. ಈ ಕುರಿತು ಗ್ರಾ.ಪಂ.ಯಲ್ಲಿ ಖಾತೆ ಆಗಿರುವ ಕುರಿತು ಕಾರ್ಯದರ್ಶಿಗಳ ಬಳಿ ಮಾಹಿತಿ ಪಡೆಯಿರಿ ಎಂದು ಸೂಚಿಸಿರುತ್ತಾರೆ.
ಇಷ್ಟಾಗಿಯೂ ಸುಮ್ಮನಾಗದ ಪಿಡಿಒ ಪೌತಿಖಾತೆಯನ್ನು ಗ್ರಾ.ಪಂ.ಹೊಸ ಆಸ್ತಿ ನಂಬರ್ 2022-23ನೇ ಸಾಲಿನ ಡಿಮ್ಯಾಂಡ್ ರಿಜಿಸ್ಟ್ರಾರ್ನಲ್ಲಿ ಹೊಸದಾಗಿ ಜಂಜರ್ 598ರ ಮೂಲಕ ಪೌತಿಖಾತೆ ಕೂರಿಸಿ 2023ರಲ್ಲಿ 11ಬಿ ಖಾತೆ ನೀಡಿ ಏಕ ನಿವೇಶನವನ್ನಾಗಿ ಗುರುತಿಸಿ ಖಾತೆ ಮಾಡಿಕೊಡುತ್ತಾರೆ. ಇದಕ್ಕಾಗಿ 1.53 ಲಕ್ಷ ರೂ.ಗಳ ತೆರಿಗೆಯನ್ನು ಸಂಗ್ರಹಿಸುತ್ತಾರೆ. ಈ ಕುರಿತು 2023ರ ಮೇ.18ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಸಂಖ್ಯೆ 6ರಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು 11ಬಿಯಲ್ಲಿ ತಿಳಿಸಲಾಗಿದೆ. ಈ ಕುರಿತು ದಾಖಲೆಗಳನ್ನು ಪಡೆದು ಪರಿಶೀಲಿಸಿದಾಗ ಸದರಿ ದಿನಾಂಕದಂದು ಈ ಕುರಿತಾದ ನಿರ್ಣಯವೇ ಆಗಿಲ್ಲವೆಂದು ಇಂಟೆಕ್ ರಾಜು ತಿಳಿಸುತ್ತಾರೆ. ಅಲ್ಲದೇ ಈ ಎಲ್ಲ ಪತ್ರವ್ಯವಹಾರಗಳನ್ನೂ ಪಿಡಿಒ ಮಾಡಿರುವ ಉದ್ದೇಶವೇನು ಎಂದು ಪ್ರಶ್ನಿಸುತ್ತಾರೆ.
ಪ್ರಸ್ತುತ ಕೆ.ಆರ್.ಪೇಟೆಯ ಬಲ್ಲೇನಹಳ್ಳಿ ಗ್ರಾ.ಪಂ.ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಚನಾ ಅವರಿಗೆ ಈ ಕುರಿತು ಎರಡೆರಡು ಬಾರಿ ನೋಟಿಸ್ ಜಾರಿಗೊಳಿಸಿ ಉತ್ತರ ನೀಡಲು ಸೂಚಿಸಿದ್ದರೂ ಇಂದಿಗೂ ಉತ್ತರ ಬಂದಿಲ್ಲ. ಕೆ.ಆರ್.ಪೇಟೆ ತಾ.ಪಂ.ಇಒ ಅವರಿಗೂ ಕೂಡ ಮಾಹಿತಿ ರವಾನಿಸಿ ಸೂಕ್ರ ಕ್ರಮಕ್ಕೆ ಕೋರಲಾಗಿದೆ ಎಂದು ತಾ.ಪಂ.ಇಒ ಕೆ.ಹೊಂಗಯ್ಯ ತಿಳಿಸಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ ಶಬೀನ್ ತಾಜ್: ಈ ನಡುವೆ 11 ಬಿ ಖಾತೆ ತಮ್ಮ ಹೆಸರಿಗೆ ದೊರೆತ ನಂತರ ಶಬೀನ್ ತಾಜ್ ಇದೀಗ ತಮ್ಮ ಭೂಮಿಗೆ ರಕ್ಷಣಾ ಇಲಾಖೆ ಭೂಸ್ವಾಧೀನಪಡಿಸಿಕೊಂಡ ನಂತರ ಪರಿಹಾರ ನೀಡಿಲ್ಲದಿರುವುದರಿಂದ ಪರಿಹಾರ ದೊರಕಿಸಿಕೊಡಬೇಕೆಂದು ಹೈಕೋರ್ಟ್ಗೆ ರಿಟ್ ಪಿಟಿಷನ್ ಹಾಕಿಕೊಂಡಿದ್ದಾರೆ ಎನ್ನಲಾಗಿದ್ದು, ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿದೆ.