ದಾವಣಗೆರೆ:ಇಪ್ಪತ್ತನೇ ಶತಮಾನದ ಸಂತರಿಗೆ ಗೌರವ ಸಿಗುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಸತ್ತಿನ ಅಧಿವೇಶನದಲ್ಲಿ ತುಮಕೂರು ಸಿದ್ಧಗಂಗಾ ಮಠದ ದಿ. ಶಿವಕುಮಾರ ಸ್ವಾಮೀಜಿ ಅವರನ್ನು ‘ರಾಷ್ಟ್ರ ಸಂತ’ ಎಂದು ಸಂಬೋಧಿಸಿ ನಿರ್ಣಯಿಸಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಇಲ್ಲಿನ ಆರ್ಟಿಒ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಸರ್ಕಲ್ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ, ಸಿದ್ಧಗಂಗಾ ಡಾ. ಶಿವಕುಮಾರ ಶ್ರೀಗಳ ಆರನೇ ವರ್ಷದ ಪುಣ್ಯ ಸ್ಮರಣೋತ್ಸವ, ಸಿಮೆಂಟ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರನ್ನು ರಾಷ್ಟ್ರಪಿತ, ಅಂಬೇಡ್ಕರ್ ಅವರನ್ನು ಸಂವಿಧಾನಶಿಲ್ಪಿ, ಸರೋಜಿನಿ ನಾಯ್ಡು ಅವರನ್ನು ಭಾರತದ ಕೋಗಿಲೆ ಎಂದು ಸಂಬೋಧಿಸಿರುವ ಕೇಂದ್ರ ಸರ್ಕಾರ ಶಿವಕುಮಾರ ಶ್ರೀಗಳನ್ನೂ ಗುರುತಿಸಿ ನಾಡಿನ ಆಧ್ಯಾತ್ಮಿಕತೆ ಗೌರವಿಸಲಿ ಎಂದು ಹೇಳಿದರು.
ಧರ್ಮ ಎಂದರೆ ಸೇವೆ ಎಂಬುದನ್ನು ತೋರಿಸಿಕೊಟ್ಟವರೇ ಶಿವಕುಮಾರ ಶ್ರೀಗಳು. ವಿವೇಕಾನಂದ ಸನ್ಯಾಸತ್ವ, ಶಂಕರಾಚಾರ್ಯರ ಸಾಂಸ್ಕೃತಿಕ ಪ್ರಜ್ಞೆ ಹಾಗೂ ಬಸವಣ್ಣನವರ ಧಾರ್ಮಿಕ ಪ್ರಜ್ಞೆ ಅವರಲ್ಲಿತ್ತು. ಮಕ್ಕಳಿಗೆ ಅನ್ನ ಕೊಡುತ್ತ, ನೆತ್ತಿಗೆ ಜ್ಞಾನ ಕೊಡುತ್ತ ನಿಜವಾದ ಧರ್ಮದ, ಜ್ಞಾನದ ಮೇಳ ಮಾಡಿದ್ದಾರೆ. ಅವರಿಂದಾಗಿಯೇ ಸ್ವಾಮೀಜಿಗಳಿಗೆ ಕಿಮ್ಮತ್ತು ಬಂದಿದೆ ಎಂದು ಗುಣಗಾನ ಮಾಡಿದರು.
ದಾವಣಗೆರೆಯಲ್ಲಿ ಶಿವಕುಮಾರ ಶ್ರೀಗಳ ಅನೇಕ ಶಿಷ್ಯರಿದ್ದಾರೆ. ಸಿದ್ದಗಂಗಾ ಮಠದಲ್ಲಿ ವಿದ್ಯೆ ಕಲಿತವರಲ್ಲಿ ಶ್ರೀಗಳ ದಾಸೋಹ ಸಂಸ್ಕೃತಿ ಬಂದಿದೆ. ಇದರಿಂದಾಗಿ ಚಳವಳಿ ನಗರವಾಗಿದ್ದ ದಾವಣಗೆರೆ ನಗರ ಧಾರ್ಮಿಕ, ದಾಸೋಹಿಗಳ ನಗರವಾಗಿದೆ ಎಂದರು.
ಸಮಾಜಸೇವೆಯ ಅಸ್ತ್ರವಾಗಿರುವ ರಾಜಕಾರಣ-ಧರ್ಮಕಾರಣ ಎರಡರ ಶುದ್ಧೀಕರಣ ಇಂದಿನ 21ನೇ ಶತಮಾನದಲ್ಲಿ ಆಗಬೇಕಿದೆ. ಅಶುದ್ಧ ವ್ಯಕ್ತಿಗಳ ರಾಜಕೀಯ ಪ್ರವೇಶದಿಂದಾಗಿ ರಾಜಕಾರಣ ಕೆಟ್ಟಿದ್ದರೆ, ಧರ್ಮವನ್ನು ಅಪಾರ್ಥವಾಗಿ ಹೇಳುವ ಧರ್ಮಕಾರಣಿಗಳಿಂದಾಗಿ ಧರ್ಮಕಾರಣ ದಾರಿ ತಪ್ಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
* ಭಾರತರತ್ನ ಪ್ರಶಸ್ತಿ ನೀಡಿ
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ ಶಿವಕುಮಾರ ಶ್ರೀಗಳು ಸಲ್ಲಿಸಿದ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಬೇಕೆಂಬುದು ಎಲ್ಲ ಭಕ್ತರ ಸದಾಶಯ. ಈ ವಿಚಾರದಲ್ಲಿ ಸರ್ಕಾರ ಮೀನಮೇಷ ಮಾಡದೆ ಗಣರಾಜೋತ್ಸವದ ಒಳಗಾಗಿ ಘೋಷಣೆ ಮಾಡಲಿ. ಈ ಮೂಲಕ ದೇಶವನ್ನೇ ಗೌರವಿಸುವ ಕೆಲಸವಾಗಲಿ ಎಂದು ಆಗ್ರಹಿಸಿದರು.
ಕಾಯಕ, ದಾಸೋಹ ಹಾಗೂ ಸಮಾನತೆ ಅಂಶಗಳನ್ನು ಪರಿಪಾಲಿಸಿದ ಶಿವಕುಮಾರ ಶ್ರೀಗಳು ಬಸವಣ್ಣನವರ ನಿಜ ಅನುಯಾಯಿಯಾಗಿದ್ದರು. ಅವರ ಮಠ ಜಾತ್ಯತೀತ ಮಠವಾಗಿದೆ ಎಂದರಲ್ಲದೆ ದಾವಣಗೆರೆಯ ಆರ್ಟಿಒ ವೃತ್ತವನ್ನು ಇನ್ನುಮುಂದೆ ಶಿವಕುಮಾರ ಸ್ವಾಮೀಜಿ ವೃತ್ತ ಎಂದು ಬಳಕೆಗೆ ತನ್ನಿ ಎಂದು ಹೇಳಿದರು.
ಕಲಬುರಗಿಯ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ ಮಾತನಾಡಿ ಶಿವಕುಮಾರ ಶ್ರೀಗಳು ಅಂಧರು, ಅನಾಥ ಮಕ್ಕಳಿಗೆ ಆಸರೆ ನೀಡಿದ್ದು ಕುಂಭಮೇಳಕ್ಕಿಂತಲೂ ದೊಡ್ಡದು. ಹಾಗಾಗಿ ಅವರ ಪುತ್ಥಳಿ ನಿರ್ಮಿಸಿದರೆ ಸಾಲದು. ಭಕ್ತರು ಶ್ರೀಗಳ ಬದುಕಿನ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.
ಚಿತ್ರದುರ್ಗದ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ ಕರ್ನಾಟಕದಲ್ಲಿ ಮಠಗಳು ಸಂಸ್ಕಾರ ಮತ್ತು ಸಂಸ್ಕರಣೆಯ ಕೇಂದ್ರಗಳಾಗಿವೆ. ನಾವಿಂದು ಶರಣ ಧರ್ಮಕ್ಕೆ ಬರಬೇಕು. ಪ್ರತಿ ಮನೆಗೂ ಲಿಂಗದೀಕ್ಷೆ ನೀಡಬೇಕು ಎಂದು ಆಶಿಸಿದರು.
ಚನ್ನಗಿರಿಯ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ಸರ್ವಧರ್ಮ ಸಮನ್ವಯ ಪೀಠದ ಸಂಗಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ ತ್ರಿವಿಧ ದಾಸೋಹಿಗಳಾಗಿದ್ದ ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದವರು. ಅವರ ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಓದಿ ವಿದ್ಯಾವಂತರಾಗಿದ್ದಾರೆ. ಇಂದಿಗೂ ಅಲ್ಲಿ ನಿರಂತರ ದಾಸೋಹ ನಡೆಯುತ್ತಿರುವುದು ಗಮನಾರ್ಹವಾದುದು ಎಂದರು.
ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ ಮಾಡಿದ ಸಾಧನೆ ಮುಂದಿನ ಪೀಳಿಗೆಗೆ ಉಳಿಯಲು ಸ್ವಾಮೀಜಿಗಳು, ರಾಜಕಾರಣಿಗಳ ಹೆಸರನ್ನು ವೃತ್ತ, ರಸ್ತೆಗಳಿಗೆ ಇರಿಸುತ್ತೇವೆ. ಆದರೆ ಕೆಲವರು ಬದುಕಿದ್ದಾಗಲೇ ಅನೇಕ ಕಡೆ ತಮ್ಮ ಹೆಸರು ನಾಮಕರಣ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಮುಖಂಡ ರಾಜನಹಳ್ಳಿ ಶಿವಕುಮಾರ್ ಮಾತನಾಡಿ ಸದ್ಯಕ್ಕೆ ಸಿಮೆಂಟ್ನಲ್ಲಿ ಶ್ರೀಗಳ ಪುತ್ಥಳಿ ತಯಾರಿಸಲಾಗಿದೆ. ಮುಂಬರುವ ದಿನದಲ್ಲಿ ಕಂಚಿನ ಪುತ್ಥಳಿ ತಯಾರಿಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೂಡಾ ಸದಸ್ಯೆ ವಾಣಿ ಬಕ್ಕೇಶ್, ಉದ್ಯಮಿ ಬಕ್ಕೇಶ್, ಗಾಂಧಿನಗರ ಠಾಣೆ ಪಿಐ ಪಿ.ಸಿ.ಲಲಿತಮ್ಮ, ಮುಖಂಡರಾದ ಶಂಕರ್ ಶಿರೆಕರ್, ಗೌತಮ್ ಜೈನ್, ಎಚ್.ಎಸ್. ವೀರೇಶ್, ಪುಲಾಯ್, ಶಾಂತಮ್ಮ ಇದ್ದರು.
