ದಾವಣಗೆರೆ: ಇಸ್ರೋ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಜಿ.ಕೆ. ದೀಪಕ್ ಭಾಗವಹಿಸಿ ಕಿರಿಯ ವಿಜ್ಞಾನಿ ಪ್ರಶಸ್ತಿ ಪಡೆದಿದ್ದಾನೆ.
ದೀಪಕ್, ಕೆಎಸ್ಆರ್ಟಿಸಿ ಯಲ್ಲಿ ನಿರ್ವಾಹಕ ದಂಪತಿ ಗಂಗಾಧರ-ರಾಜೇಶ್ವರಿ ಅವರ ಪುತ್ರ.
ದೀಪಕ್ 6ನೇ ತರಗತಿಯಲ್ಲಿದ್ದಾಗ ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರದವರು ನಡೆಸಿದ ಪ್ಯೂರಿಫೈ ದ ಅರ್ಥ್ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದ.
ಇಸ್ರೋದ ಕಾರ್ಯನಿರ್ವಾಹಕ ಅಧಿಕಾರಿ ಕೌಸ್ತುಬ್ ಅವರ ಪರಿಚಯ ಮತ್ತು ಮಾರ್ಗದರ್ಶನದಿಂದ ಗ್ರಿಪ್ಪರ್ ಎಕ್ಸ್ಪ್ಲೊರೇಷನ್ ಕಂಡು ಹಿಡಿದಿದ್ದಾನೆ. ಲ್ಯಾಂಡರ್ ಗ್ರಿಪ್ಪರ್ ಮೇಲೆ ತನ್ನ ಅಧ್ಯಯನ ಕೇಂದ್ರೀಕರಿಸಿ ಸಂಶೋಧನೆ ಪ್ರಾರಂಭಿಸಿದ.
ಗ್ರಿಪ್ಪರ್ ಜತೆ ಸೆನ್ಸರ್ ಜೋಡಿಸಿ ವಿಫಲನಾಗಿದ್ದ ದೀಪಕ್, ಬ್ಲೂಟೂತ್ ಮೆಮೊರಿ ಸ್ಪೆನ್ಸರ್ ಉಪಯೋಗಿಸಿದಾಗ ಲ್ಯಾಂಡರ್ ಗ್ರಿಪ್ಪರ್ ಸಫಲವಾಯಿತು. ಈ ಪ್ರಯತ್ನವನ್ನು ಇಸ್ರೋಗೆ ಅಂತರ್ಜಾಲದಲ್ಲಿ ಕಳಿಸಿಕೊಟ್ಟಾಗ ಇಸ್ರೋ ಮುಖ್ಯಸ್ಥರು ಒಪ್ಪಿಗೆ ಸೂಚಿಸಿ ಲ್ಯಾಂಡರ್ ಗ್ರಿಪ್ಪರ್ ಮಾದರಿ ಮಾಡಲು ಸೂಚಿಸಿದರು.
23 ದಿನಗಳ ಕಾಲ ಸಂಶೋಧನೆ ಪರಿಶೀಲನೆಗೆ ಒಳಪಟ್ಟ ಬಳಿಕ ಜ. 25ರಂದು ಕಿರಿಯ ವಿಜ್ಞಾನಿ ಪ್ರಶಸ್ತಿ ಗಳಿಸಿದ್ದಾನೆ. ವಿದ್ಯಾರ್ಥಿ ಸಾಧನೆಗೆ ಸಿದ್ಧಗಂಗಾ ಸಂಸ್ಥೆ ಆಡಳಿತ ಮಂಡಳಿ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದೆ.
