ದಾವಣಗೆರೆ : ದಾಖಲೆಗಳಿಲ್ಲದ ಜನವಸತಿ ಪ್ರದೇಶದಲ್ಲಿ ವಾಸಿಸುವವರಿಗೆ ಗ್ರಾಮಗಳನ್ನು ರಚನೆ ಮಾಡಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ ಕಂದಾಯ ಹಾಗೂ ಸರ್ವೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯ ಜನವಸತಿ ಪ್ರದೇಶಗಳಲ್ಲಿ ವಾಸವಿದ್ದರೂ ವಾರಸುದಾರಿಕೆ ಇಲ್ಲದವರಿಗೆ ಗ್ರಾಮಗಳ ವಿಸ್ತರಣೆ, ಕಂದಾಯ ಗ್ರಾಮ, ಬಡಾವಣೆಯನ್ನಾಗಿ ವಿಸ್ತರಣೆ ಮಾಡುವ ಮೂಲಕ ಮೂಲ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ ಎಂದರು. ಜಿಲ್ಲೆಯಲ್ಲಿ 1836 ಹಕ್ಕುಪತ್ರಗಳಿಗೆ ಅನುಮೋದನೆ ನೀಡಲಾಗಿದ್ದು ಇದರಲ್ಲಿ 1784 ಇ-ಸ್ವತ್ತಿಗೆ ಹೋಗಿದ್ದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ದಾಖಲೆಯನ್ನು ನೋಂದಾಯಿಸಲು 1349 ಅರ್ಜಿಗಳನ್ನು ಕಳುಹಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಹಕ್ಕುಪತ್ರಗಳನ್ನು ನೀಡಲು ಅವಕಾಶವಿದ್ದು ಯಾವುದೇ ಸಬೂಬು ಹೇಳದೇ ಕಾನೂನಿನ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಬಡವರಿಗೆ ಸಹಾಯ ಮಾಡಬೇಕೆಂದು ಸೂಚಿಸಿದರು. ಜಿಲ್ಲೆಯಲ್ಲಿರುವ 193 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿಸಲು ಪ್ರಸ್ತಾಪಿಸಲಾಗಿದೆ. ಇದರಲ್ಲಿ 156 ತಾಂಡಾಗಳು ಅನರ್ಹವೆಂದು ತಿರಸ್ಕರಿಸಲಾಗಿದೆ. ಆದರೆ 10 ಮನೆಯಿಂದ 49 ಮನೆಗಳ ವರೆಗೆ ಪ್ರತ್ಯೇಕ ಗ್ರಾಮವಾಗಿ ಮಾಡಲು ಅವಕಾಶ ಇದೆ. ಪರಿಶೀಲನೆ ನಡೆಸದೇ ತಿರಸ್ಕರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ನೋಡಿದ್ದೇನೆ, ಆದರೆ ಏನೂ ಇಲ್ಲದೇ ತಿರಸ್ಕರಿಸಲಾಗಿದೆ. ಅಧಿಕಾರಿಗಳು ಮತ್ತೊಮ್ಮೆ ಗಮನಿಸಿ ಹಟ್ಟಿ, ಕಾಲನಿ, ಗೊಲ್ಲರಹಟ್ಟಿಗಳನ್ನು ಪರಿಶೀಲನೆ ಮಾಡುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ 104 ಕಂದಾಯ ಗ್ರಾಮಗಳನ್ನಾಗಿ ಮಾಡಲು ಗುರುತಿಸಲಾಗಿದ್ದು 66 ಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 12 ಅಧಿಸೂಚನೆಗೆ ಬಾಕಿ ಇದ್ದು ಅನುಮೋದನೆಗಾಗಿ 12 ಗ್ರಾಮಗಳನ್ನು ಕಳುಹಿಸಲಾಗಿದೆ. ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಕಂದಾಯ ಇಲಾಖೆ ಅಧಿಕಾರಿಗಳ ಅಂಕಿ ಅಂಶವೇ ಬೇರೆಯಾಗಿದೆ, ಭೂ ದಾಖಲೆಗಳ ಇಲಾಖೆ ಅಧಿಕಾರಿಗಳ ಅಂಕಿ ಅಂಶಗಳೇ ಬೇರೆಯಾಗಿದೆ. ಇಂಥ ಸ್ಥಿತಿ ಇತರೆ ಜಿಲ್ಲೆಯಲ್ಲಿಲ್ಲ ಎಂದರು. ದರಖಾಸ್ತು ಪೋಡಿ ಅಭಿಯಾನ ಚಾಲ್ತಿಯಲ್ಲಿದೆ. ಭೂ ದಾಖಲೆಗಳ ಅಧಿಕಾರಿಗಳು ಮತ್ತು ತಹಸೀಲ್ದಾರರು ಸರಿಯಾಗಿ ಕೆಲಸ ಮಾಡಬೇಕು. ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು. ನಿಮ್ಮ ಹತ್ತಿರ ಏಕೆ ಕಡತಗಳನ್ನು ಇಟ್ಟುಕೊಳ್ಳಲಾಗಿದೆ?, ಮುಂದಿನ ದಿನಗಳಲ್ಲಿ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ತಿಳಿಸಿ, ಸಂಬಂಧಿಸಿದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. … (ಬಾಕ್ಸ್) ಪೌತಿ ಖಾತೆ ಆಂದೋಲನಕ್ಕೆ ಸೂಚನೆ ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಏಕ ವ್ಯಕ್ತಿ ಖಾತೆಯ ಪಹಣಿಗಳಿವೆ. ಅನೇಕ ಬಹುಮಾಲೀಕತ್ವದ ಪಹಣಿಗಳಿವೆ. 96 ಸಾವಿರಕ್ಕೂ ಹೆಚ್ಚು ಆಸ್ತಿಗಳು ಮೃತರ ಹೆಸರಿನಲ್ಲಿವೆ. ಬಹು ಮಾಲೀಕತ್ವ ಮತ್ತು ಮೃತರ ಹೆಸರಿನಲ್ಲಿ ಪಹಣಿಗಳು ಇರುವುದರಿಂದ ಸರ್ಕಾರಿ ಸವಲತ್ತುಗಳು ಮತ್ತು ಬ್ಯಾಂಕ್ನಲ್ಲಿ ಕೃಷಿ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿರುವುನ್ನು ಮನಗಂಡು ಪೌತಿ ಖಾತೆ ಆಂದೋಲನವನ್ನು ಆಯೋಜಿಸುವ ಮೂಲಕ ಗ್ರಾಮದಲ್ಲಿ ಟಾಂ-ಟಾಂ ಹಾಕಿಸಿ ಗ್ರಾಮಸಭೆಗಳನ್ನು ಮಾಡಿ ಜನರೆದುರು ಮಹಜರಿನೊಂದಿಗೆ ಪೌತಿ ಖಾತೆ ಮಾಡಲು ತಿಳಿಸಿ ಮುಂದಿನ ದಿನಗಳಲ್ಲಿ ಇದನ್ನು ಆಂದೋಲದ ರೀತಿ ಮಾಡಲು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ದಾವಣಗೆರೆ ತಹಸೀಲ್ದಾರರ ಕಚೇರಿಯನ್ನು ಸ್ಥಳಾಂತರಿಸಬೇಕು. ಇಲ್ಲಿಯೇ ಭೂ ದಾಖಲೆಗಳ ಮತ್ತು ನೋಂದಣಿ ಇಲಾಖೆಯನ್ನು ಸ್ಥಳಾಂತರಿಸಬೇಕು. ಅದಕ್ಕಾಗಿ ಮೊದಲನೇ ಮಹಡಿ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಪ್ರಸ್ತಾಪಿಸಿದರು. ಅಗತ್ಯವಿರುವ ಅನುದಾನ ಒದಗಿಸಲಾಗುತ್ತದೆ ಎಂದು ಕಂದಾಯ ಸಚಿವರು ಭರವಸೆ ನೀಡಿದರು. ಜೂನ್ನಲ್ಲಿ ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಿ ವಿವಿಧ ಸರ್ಕಾರಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿ, ಸರ್ಕಾರದ ಸೌಲತ್ತುಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಸಚಿವ ಮಲ್ಲಿಕಾರ್ಜುನ್ ತಿಳಿಸಿದರು. ಕಂದಾಯ ಇಲಾಖೆ ಇ-ಕಚೇರಿಯಾಗಿ ಪರಿವರ್ತನೆಯಾಗಿದ್ದು ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು. ದೂಡಾ ಅಧ್ಯಕ್ಷ ದಿನೇಶ್.ಕೆ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
