ಚರ್ಚೆಗೆ ಗ್ರಾಸವಾದ ಬಸವರಾಜ ಶಿವಗಂಗಾ ಹೇಳಿಕೆ
ವಿಜಯವಾಣಿ ಸುದ್ದಿಜಾಲ ದಾವಣಗೆರೆ
ರಾಜ್ಯಮಟ್ಟದಲ್ಲಿ ‘ಆಪರೇಷನ ಹಸ್ತ’ ಸದ್ದು ಮಾಡಿರುವ ಹೊತ್ತಿನಲ್ಲೇ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ರಾಜೀನಾಮೆಯ ಮಾತಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಅವರು ರಾಜೀನಾಮೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧವಾಗಿ ತಾವು ಈ ಚಿಂತನೆ ಮಾಡಿದ್ದಾಗಿ ತಿಳಿಸಿದ್ದಾರೆ.
‘ಸಚಿವರಾದವರು ಎಲ್ಲ ಶಾಸಕರ ದೂರವಾಣಿ ಸಂಖ್ಯೆಗಳನ್ನು ಹೊಂದಿರಬೇಕು. ನಮ್ಮ ಬೇಡಿಕಗಳಿಗೆ ಸ್ಪಂದಿಸಬೇಕು. ಅವರು 3-4 ಬಾರಿ ಶಾಸಕರಾಗಿರಬಹುದು. ಸಚಿವ ಸ್ಥಾನ ಶಾಶ್ವತ ಅಲ್ಲ. ಅವರಿಗೂ ಶಾಸಕರ ಕಷ್ಟ ಅರ್ಥವಾಗಬೇಕು’ ಎಂದು ಹೇಳಿದ್ದಾರೆ.
ಬಸವರಾಜ ಶಿವಗಂಗಾ ಅವರ ಈ ರೀತಿಯ ಹೇಳಿಕೆ ಗಮನಿಸಿದರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಗ್ಗೆ ಅವರಿಗೆ ಮುನಿಸಿದೆಯೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇದಕ್ಕೆ ಪೂರಕ ಎನ್ನುವಂತೆ ಚನ್ನಗಿರಿ ತಾಲೂಕಿನಲ್ಲಿ ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಮಾತನಾಡಿ, ‘ಶಾಸಕ ಬಸವರಾಜ ಯುವಕ, ಕ್ರಿಯಾಶೀಲರಿದ್ದಾರೆ. ಆದರೆ ದಿಢೀರನೆ ಮೆಟ್ಟಿಲು ಹತ್ತಲು ಪ್ರಯತ್ನಿಸಬಾರದು. ಒಂದೊಂದೇ ಮೆಟ್ಟಿಲು ಹತ್ತಬೇಕು’ ಎಂದು ಕಿವಿಮಾತು ಹೇಳಿದ್ದರು.
ಮೊದಲು ಜನರ ಜತೆಗಿದ್ದು ಅವರ ಕಷ್ಟಗಳನ್ನು ಅರಿಯಬೇಕು. ಎಲ್ಲ ಸಮುದಾಯದವರೊಂದಿಗೆ ಬೆರೆಯಬೇಕು. ಬಡವರ ಪರವಾಗಿ ಕೆಲಸ ಮಾಡಬೇಕು. ಅದು ಬಿಟ್ಟು ಮಂತ್ರಿಗಳು ಕೈಗೆ ಸಿಗುವುದಿಲ್ಲ, ಬೇರೆ ಪಕ್ಷದವರು ಬಂದಾಗ ಭೇಟಿಯಾಗುತ್ತಾರೆ ಎಂದು ಹೇಳುವುದು ಎಷ್ಟು ಸರಿ ಎಂದು ಮಲ್ಲಿಕಾರ್ಜುನ್ ಪ್ರಶ್ನಿಸಿದ್ದರು.