More

    ಕಾರ್ಮಿಕರ ದುಡಿಮೆಯಲ್ಲಿದೆ ದೇಶದ ಅಭಿವೃದ್ಧಿ

    ದಾವಣಗೆರೆ: ಕಾರ್ಮಿಕರು ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ, ಬಲವಾದ ಇಚ್ಛಾಶಕ್ತಿಯಿಂದ ದೇಶದ ಪ್ರಗತಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ದುಡಿಮೆಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಹೇಳಿದರು.
     ಎಐಯುಟಿಯುಸಿ ವತಿಯಿಂದ ನಗರದ ವನಿತಾ ಸಮಾಜದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಇಂದು ಪ್ರತಿಯೊಂದು ಹೋರಾಟಗಳು ಯಾವುದೋ ಒಂದು ವ್ಯವಸ್ಥೆಗೆ ಅವಲಂಬಿತವಾಗಿ, ಇಲ್ಲವೇ ಕೆಲವರ ಹಿತಾಸಕ್ತಿಗೆ ತಕ್ಕಂತೆ ತನ್ನದೇ ಆದ ನೆಲೆಯಲ್ಲಿ ಸಾಗುತ್ತಿರುವುದು ದುರಂತದ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
     ಇಂದು ಎಲ್ಲ ಪಕ್ಷಗಳಲ್ಲಿ ಕಾರ್ಮಿಕ ಸಂಘಟನೆಯನ್ನು ಕಾಣುತ್ತಿದ್ದೇವೆ. ಸಮಾಜವಾದಿ, ಸಮ ಸಮಾಜವನ್ನು ನಿರ್ಮಿಸುವ ಸಂಘಟನೆಗಳು ಮರೆಯಾಗುತ್ತಿವೆ. ಈ ಹಿಂದೆ ಕಾರ್ಮಿಕರ ಉಳಿವಿಗಾಗಿ ಜೀವವನ್ನೇ ಬಲಿದಾನ ಮಾಡಿದ ಮಹನೀಯರ ತತ್ವ, ಆದರ್ಶಗಳು ದೂರವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
     ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ದುಡಿಯುವ ವರ್ಗಗಳು ತೀರಾ ಕಷ್ಟಕರ ಪರಿಸ್ಥಿತಿಯಲ್ಲಿವೆ. ಸರ್ಕಾರಗಳು ಪ್ರತಿಯೊಂದು ಕ್ಷೇತ್ರಗಳನ್ನು ಹಂತ ಹಂತವಾಗಿ ಖಾಸಗೀಕರಣ ಮಾಡುವ ಕಡೆಗೆ ಸಾಗುತ್ತಿವೆ. ಕಾರ್ಮಿಕರ ಹೋರಾಟ ಜೀವಂತವಾಗಿ ಇರಿಸಬೇಕಾದರೆ ಮಹನೀಯರ ತತ್ವ, ಆದರ್ಶಗಳ ಅಡಿಯಲ್ಲಿ ಸಂಘಟನೆಗಳನ್ನು ಕಟ್ಟುವ ಅಗತ್ಯ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.
     ಸಂಘಟನೆಗಳನ್ನು ನಾಶಗೊಳಿಸುವ ವಿದ್ಯಮಾನಗಳು ನಡೆಯುತ್ತಿರುವ ಇಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಯುವ ಪೀಳಿಗೆಯಲ್ಲಿ ಸಮಾಜವಾದದ ಚಿಂತನೆಯನ್ನು ತುಂಬಬೇಕಾಗಿದೆ ಎಂದು ಹೇಳಿದರು.
     ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ ಮಾತನಾಡಿ, ಕಾರ್ಮಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಹೋರಾಟ ನಡೆಸುವಂತಹ ಸಂಘಟನೆಗಳು ಇಂದು ಬೇಕಾಗಿವೆ. ಆ ಮೂಲಕ ದುಡಿಯುವ ವರ್ಗಗಳ ಸಮಸ್ಯೆಗಳನ್ನು ಬಗೆಹರಿಸಲು ಒಂದಾಗಬೇಕಾಗಿದೆ ಎಂದರು.
     ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕವಾಡ, ಕೆನರಾ ಬ್ಯಾಂಕ್ ಸ್ಟ್ಾ ೆಡರೇಷನ್‌ನ ಮಾಜಿ ಜಿಲ್ಲಾಧ್ಯಕ್ಷ ಎಂ.ಆರ್.ಹೀರೇಮಠ್ ಇದ್ದರು. ಅಣಬೇರು ತಿಪ್ಪೇಸ್ವಾಮಿ, ಶಿವಾಜಿರಾವ್, ಪ್ರಕಾಶ್, ಶಿವಪ್ಪ, ವಿಜಯ್, ನಿಂಗರಾಜು, ಹನುಮಂತಪ್ಪ, ಕೆ.ಭಾರತಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts