ದಾವಣಗೆರೆ : ಮಾಧ್ಯಮಗಳ ಹೆಸರು ಹೇಳಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ನಕಲಿ ಪತ್ರಕರ್ತರ ಹಾವಳಿಯನ್ನು ತಡೆಗಟ್ಟುವಂತೆ ಕೋರಿ ಜಿಲ್ಲಾ ವರದಿಗಾರರ ಕೂಟದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮತ್ತು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು. ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್ ಮಾತನಾಡಿ, ಮಾಧ್ಯಮಗಳ ಹೆಸರು ಹೇಳುತ್ತಲೇ ಬಡ್ಡಿ ವ್ಯವಹಾರ ಮಾಡುವವರು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವವರು ಇದ್ದಾರೆ. ಅಂಥವರು ವಾಹನಗಳ ಮೇಲೆ ‘ಪ್ರೆಸ್’, ‘ಮೀಡಿಯಾ’ ಎಂದು ಬರೆಸಿಕೊಂಡು ಸುತ್ತಾಡುತ್ತಾರೆ. ಅಂಥ ವಾಹನಗಳನ್ನು ಮೊದಲು ತಪಾಸಣೆ ಮಾಡುವಂತೆ ಒತ್ತಾಯಿಸಿದರು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ, ತಾವು ಪತ್ರಕರ್ತರೆಂದು ಅಧಿಕಾರಿ, ಸಿಬ್ಬಂದಿಯನ್ನು ಹೆದರಿಸುವ, ಬೆದರಿಸುವ ಕೆಲಸವೂ ಆಗುತ್ತಿದೆ. ಹಣ ವಸೂಲಿ ಮಾಡುವುದೇ ಇವರ ಉದ್ದೇಶವಾಗಿದ್ದು, ಇಂತಹವರಿಂದಾಗಿ ನೈಜ ಪತ್ರಕರ್ತರಿಗೆ ತೊಂದರೆಯಾಗಿದೆ ಎಂದು ತಿಳಿಸಿದರು. ಕೆಲವು ನಿರ್ದಿಷ್ಟ ಪೊಲೀಸ್ ಠಾಣೆಗಳಲ್ಲಿ ರಾಜಿ ಪಂಚಾಯಿತಿ, ಕೊಡು-ತೆಗೆದುಕೊಳ್ಳುವ ವ್ಯವಹಾರಗಳಲ್ಲೂ ಮಾಧ್ಯಮದವರ ಹೆಸರನ್ನು ಸೇರಿಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾದ್ಯಂತ ಎಲ್ಲ ಪೊಲೀಸ್ ಅಧಿಕಾರಿ, ಠಾಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಹದಿನೈದು ದಿನಗಳೊಳಗಾಗಿ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಖಜಾಂಚಿ ಪವನ್ ಕುಮಾರ್, ಹಿರಿಯ ಪತ್ರಕರ್ತರಾದ ಎ.ಎಲ್. ತಾರಾನಾಥ್, ಮಂಜುನಾಥ್ ಗೌರಕ್ಕಳವರ್, ಚಂದ್ರಣ್ಣ, ಸಿದ್ದಯ್ಯ ಹಿರೇಮಠ್, ರಮೇಶ ಜಹಗೀರದಾರ್, ಆರ್.ಟಿ. ತಿಪ್ಪೇಸ್ವಾಮಿ, ಸಿಕಂದರ್, ರವಿ ಬಾಬು, ಎಚ್.ಎಂ.ಪಿ. ಕುಮಾರ್, ಸಿ. ವರದರಾಜ್, ತೇಜಸ್ವಿನಿ, ಬಿ.ಕೆ. ಕಾವ್ಯಾ, ಸುರೇಶ್ ಕುಣಿಬೆಳಕೆರೆ, ಪುನೀತ್ ಆಪ್ತಿ, ಸಂಜಯ್ ಕುಂದುವಾಡ, ಚನ್ನಬಸವ ಶೀಲವಂತ ಇದ್ದರು. … (ಬಾಕ್ಸ್) ಕೂಟಕ್ಕೆ ಕಟ್ಟಡ ಒದಗಿಸಲು ಕ್ರಮ ಜಿಲ್ಲಾ ವರದಿಗಾರರ ಕೂಟಕ್ಕೆ ಮಹಾನಗರ ಪಾಲಿಕೆ ಆವರಣದ ಕೆಂಪು ಕಟ್ಟಡವನ್ನು ಒದಗಿಸಲು ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಭರವಸೆ ನೀಡಿದರು. ಜಿಲ್ಲಾ ವರದಿಗಾರರ ಕೂಟವು ಸಹ ಸಾರ್ವಜನಿಕ ಸಂಸ್ಥೆಯಾಗಿದ್ದು, ಇದಕ್ಕೆ ಶಾಶ್ವತ ಜಾಗದ ಅಗತ್ಯವಿದೆ. ಇನ್ನೊಂದು ವಾರದಲ್ಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಜಿಲ್ಲಾ ಸಚಿವರು, ಸಂಸದರೊಂದಿಗೆ ಮಾತನಾಡಿ, ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.
