ದಾವಣಗೆರೆ : ಇದು ಬೇಲಿಯೇ ಎದ್ದು ಹೊಲ ಮೇಯ್ದಂತಿರುವ ಪ್ರಕರಣ. ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ ನೌಕರನೊಬ್ಬ ಮೂರೂವರೆ ಕೆಜಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವುದು ಹಾಗೂ ನಕಲಿ ಚಿನ್ನದ ಆಭರಣಗಳನ್ನು ಅಡಮಾನ ಮಾಡಿ, 1.52 ಕೋಟಿ ರೂ. ಸಾಲ ಮಂಜೂರು ಮಾಡಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿಯಾದ, ನಗರದ ಸಿ.ಎಸ್.ಬಿ. ಬ್ಯಾಂಕ್ನ ಗೋಲ್ಡ್ ಲೋನ್ ಅಧಿಕಾರಿ ಟಿ.ಪಿ. ಸಂಜಯ್ನನ್ನು ಇಲ್ಲಿನ ಕೆಟಿಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರಗಳನ್ನು ಹಂಚಿಕೊಂಡರು. ಆರೋಪಿಯು ಬ್ಯಾಂಕಿನ ಗ್ರಾಹಕರು ಅಡಮಾನ ಮಾಡಿದ 3 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ, 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ನಗರದ ಫೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್ ಮತ್ತು ಪಿ.ಬಿ. ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ ಶಾಖೆಗಳಲ್ಲಿ ಅಡಮಾನ ಮಾಡಿ ಹಣ ಪಡೆದಿದ್ದ ಎಂದು ಎಸ್ಪಿ ತಿಳಿಸಿದರು. ಇದಲ್ಲದೇ ಆತ ವಿವಿಧ ಗ್ರಾಹಕರ ಹೆಸರಿನಲ್ಲಿ 2 ಕೆಜಿ 744 ಗ್ರಾಂ ನಕಲಿ ಚಿನ್ನದ ಆಭರಣಗಳನ್ನು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲೇ ಅಡಮಾನವಿಟ್ಟು 1.52 ಕೋಟಿ ರೂ. ಸಾಲ ಪಡೆದು ವಂಚಿಸಿದ್ದ. ಕಳೆದ 6 ತಿಂಗಳಿಂದ ಹಂತ ಹಂತವಾಗಿ ಇಷ್ಟೆಲ್ಲ ಮೋಸ ನಡೆದರೂ ಬ್ಯಾಂಕಿನವರ ಗಮನಕ್ಕೆ ಬಂದಿರಲಿಲ್ಲ. ಕಳೆದ ತಿಂಗಳು ಬ್ಯಾಂಕಿನಲ್ಲಿ ಆಡಿಟ್ ಮಾಡುವಾಗ ಬಂಗಾರದ ಆಭರಣಗಳು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಬ್ಯಾಂಕಿನ ವ್ಯವಸ್ಥಾಪಕ ಕೆ.ಬಿ. ಶಿವಕುಮಾರ್ ಕೆಟಿಜೆ ನಗರ ಠಾಣೆಗೆ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು. ಕೆಟಿಜೆ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಎಸ್. ಸುನೀಲ್ ಕುಮಾರ್, ಪಿಎಸ್ಐ ಆರ್. ಲತಾ, ಸಿಬ್ಬಂದಿ ಸುರೇಶ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ಡಿ.ಬಿ. ನಾಗರಾಜ, ಸಿ.ಕೆ. ಗೀತಾ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಕಳ್ಳತನವಾಗಿದ್ದ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಎಸ್ಪಿಗಳಾದ ವಿಜಯ ಕುಮಾರ್ ಸಂತೋಷ್, ಜಿ. ಮಂಜುನಾಥ್, ಡಿವೈಎಸ್ಪಿಗಳಾದ ಬಿ. ಶರಣ ಬಸವೇಶ್ವರ, ಪದ್ಮಶ್ರೀ ಗುಂಜಿಕರ್, ಪೊಲೀಸ್ ಇನ್ಸ್ಪೆಕ್ಟರ್ ಎಚ್.ಎಸ್. ಸುನೀಲ್ ಕುಮಾರ್ ಮತ್ತಿತರ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿದ್ದರು.
